ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ಮಿಕ ಮಹಿಳೆಯೊಬ್ಬರು ಬುಧವಾರ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮಡಿಕೇರಿಯ ಯುವಕರ ತಂಡ ಸಂಪ್ರದಾಯಂತೆ ಮಹಿಳೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಮಡಿಕೇರಿ(ಏ.24): ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ಮಿಕ ಮಹಿಳೆಯೊಬ್ಬರು ಬುಧವಾರ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮಡಿಕೇರಿಯ ಯುವಕರ ತಂಡ ಸಂಪ್ರದಾಯಂತೆ ಮಹಿಳೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮ ಗ್ರಾಮದ ಕಾರ್ಮಿಕ ದಂಪತಿ ಕವಿತಾ ಮತ್ತು ಚಂದ್ರ ಅವರು ಕೊಡಗು ಜಿಲ್ಲೆಯ ಮಾದಾಪುರದ ತೋಟವೊಂದರಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಅನಾರೋಗ್ಯದಿಂದಾಗಿ ಕವಿತಾ ಅವರನ್ನು 18 ದಿನಗಳ ಹಿಂದೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್‌ 22 ರಂದು ಕಾರ್ಮಿಕ ಮಹಿಳೆ ಮೃತಪಟ್ಟಿದ್ದರು. ಪತ್ನಿಯ ಅಂತ್ಯಸಂಸ್ಕಾರ ನೆರವೇರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಕಾರ್ಮಿಕ ಚಂದ್ರ ಅವರ ಸಹಾಯಕ್ಕೆ ಬಂದವರು ಮಡಿಕೇರಿಯ ಯುವಕರ ತಂಡ.

ದಕ್ಷಿಣ ಕನ್ನಡದಲ್ಲಿ ಕೋವಿಡ್‌ ವೈರಸ್‌ಗೆ ಇಬ್ಬರು ಬಲಿ, ಇನ್ನೊಬ್ಬಾಕೆ ಗಂಭೀರ

ಮಡಿಕೇರಿಯಲ್ಲಿ ಮಳೆ ಸುರಿಯುತ್ತಿದ್ದರಿಂದ ಅಂತ್ಯಸಂಸ್ಕಾರ ನೆರವೇರಿಸಲು ಸಮಸ್ಯೆಯಾಗಿತ್ತು. ಈ ಸಂದರ್ಭ ಸಿಐ ಅನೂಪ್‌ ಮಾದಪ್ಪ ಅವರು ಯುವಕರಿಗೆ ಕಾನೂನಿನ ಸಲಹೆ ಹಾಗೂ ಸಹಕಾರ ನೀಡುವ ಮೂಲಕ ಕುಶಾಲನಗರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ವ್ಯವಸ್ಥೆ ಮಾಡಿದರು. ಕುಶಾಲನಗರದ ಪಟ್ಟಣ ಪಂಚಾಯಿತಿಯ ಸಹಕಾರದೊಂದಿಗೆ ಕಾರ್ಮಿಕ ಮಹಿಳೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.

14 ಜಿಲ್ಲೇಲಿ ಲಾಕ್‌ಡೌನ್‌ ಸಡಿಲ: ಜನಸಂಚಾರ ಹಠಾತ್‌ ಹೆಚ್ಚಳ

ಮಡಿಕೇರಿ ಯೂತ್‌ ಕಮಿಟಿಯ ಸ್ಥಾಪಕಾಧ್ಯಕ್ಷ ಕಲೀಲ್‌ ಕ್ರಿಯೇಟಿವ್‌ ನೇತೃತ್ವದಲ್ಲಿ ಅಧ್ಯಕ್ಷ ಝೌನುಲ್‌ ಆಬಿದ್‌, ಮಾಜಿ ಅಧ್ಯಕ್ಷ ರಿಝ್ವಾನ್‌, ಸದಸ್ಯರಾದ ಶುಹೈಲ್‌, ಶಫೀಕ್‌, ಮೊಯಿನು, ಶಾಹಿನ್ಶಾ, ಮಡಿಕೇರಿ ಹಿತರಕ್ಷಣಾ ವೇದಿಕೆಯ ಉಮೇಶ್‌, ಸಂದೀಪ್‌, ಸತೀಶ್‌, ಶ್ರೀಧರ್‌, ಬ್ಲಡ್‌ ಡೋನರ್ಸ್‌ ಸಂಘಟನೆಯ ಅಧ್ಯಕ್ಷ ವಿನು ಇದ್ದರು. ಶಿಫಾ ಆ್ಯಂಬುಲೆನ್ಸ್‌ ಮಾಲೀಕ ಶುಕೂರ್‌ ಮೃತದೇಹಗಳನ್ನು ಸಾಗಿಸಲು ಸಹಕಾರ ನೀಡಿದರು. ಕುಶಾಲನಗರ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಾದ ಸುರೇಶ್‌ ಬಾಬು ಮತ್ತು ಬಳಗ ಸಾಥ್‌ ನೀಡಿದರು.