Asianet Suvarna News Asianet Suvarna News

Karnataka Politics: ಕೇಂದ್ರದಿಂದ ಮಂಡ್ಯಕ್ಕೆ ಕೇಳೋದೇನಿಲ್ಲ, ನಾನೇ ಎಲ್ಲ ಕೊಟ್ಟಿದ್ದೇನೆ : ಗೌಡ

  • ಕೇಂದ್ರದಿಂದ ಮಂಡ್ಯಕ್ಕೆ ಕೇಳೋದೇನಿಲ್ಲ, ನಾನೇ ಎಲ್ಲ ಕೊಟ್ಟಿದ್ದೇನೆ
  • ರೈತರಿಗೆ ಹಲವಾರು ನೀರಾವರಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದೇನೆ. ವರುಣಾ ನಾಲಾ ಚಳವಳಿಯಲ್ಲಿ ಚಡ್ಡಿ ಮೆರವಣಿಗೆ ನಡೆಸಿದ್ದೇನೆ
We contributed  Maximum to Mandya Says HD Devegowda snr
Author
Bengaluru, First Published Dec 6, 2021, 7:48 AM IST

ಶ್ರೀರಂಗಪಟ್ಟಣ (ಡಿ.06) : ಕೇಂದ್ರದಿಂದ ಮಂಡ್ಯಕ್ಕೆ ಕೇಳುವಂತಹದ್ದು ಏನೂ ಇಲ್ಲ. ನಾನು ಮಂಡ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಹಾಸನಕ್ಕೆ ಅನುದಾನ, ಐಐಟಿ ಕಾಲೇಜು ಕೇಳಿದ್ದೀರಿ, ಮಂಡ್ಯಕ್ಕೆ ಏನು ಕೇಳಿದ್ದೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಂಡ್ಯಕ್ಕೆ ಕೇಳುವಂತಹದ್ದು ಏನೂ ಇಲ್ಲ. ರೈತರಿಗೆ ಹಲವಾರು ನೀರಾವರಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದೇನೆ. ವರುಣಾ ನಾಲಾ ಚಳವಳಿಯಲ್ಲಿ ಚಡ್ಡಿ ಮೆರವಣಿಗೆ ನಡೆಸಿದ್ದೇನೆ. ಜಿಲ್ಲೆಯ ರೈತರ ಪರವಾಗಿ ದನಿ ಎತ್ತಿ ಹೋರಾಟ ನಡೆಸಿದ್ದೇನೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

ಮೋದಿ ಭೇಟಿ ಮಾಡಿದ ಗೌಡರು  :  ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಪರಸ್ಪರ ಭೇಟಿಯಾಗಿದ್ದಾರೆ.  ಒಂದು ಕಡೆ ಸಂಸತ್  ಅಧಿವೇಶನ (Parliament Winter Session 2021) ನಡೆಯುತ್ತಿದ್ದರೆ ಇನ್ನೊಂದು ಕಡೆ ಇಬ್ಬರು ನಾಯಕರು ಭೇಟಿಯಾಗಿರುವುದು ರಾಜಕಾರಣದ (Politics) ಚರ್ಚೆಗೆ ವೇದಿಕೆಯಾಗಿದೆ.ಕರ್ನಾಟಕದಲ್ಲಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಹೊಂದಾಣಿಕೆ  ಮಾಡಿಕೊಳ್ಳಲಿದೆಯಾ? ಎಂಬ ವಿಚಾರ ಬಹುದೊಡ್ಡ ಚರ್ಚೆಯ ವಸ್ತು. ಈ ನಡುವೆ ಮೋದಿ ಮತ್ತು ದೇವೇಗೌಡರ ಆಪ್ತ ಭೇಟಿ ಹಲವರ ತಲೆಗೆ ಹುಳ ಬಿಡುವಂತೆ ಮಾಡಿತ್ತು.

ಎಂದೂ ಬಿಜೆಪಿ ಕಾಂಗ್ರೆಸ್ ಸೇರಲ್ಲ  : ದೇಶದ ರಾಜಕಾರಣ(Politics) ತುಂಬ ಹದೆಗಟ್ಟಿದೆ. ಆದರೆ ನನ್ನ ರಾಜಕೀಯ ನಿಷ್ಠೆಯನ್ನು ಯಾವ ವ್ಯಕ್ತಿಯು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ನನ್ನ ಆತ್ಮ, ಶರೀರ ಇರುವರೆಗೂ ನಾನು ಕಾಂಗ್ರೆಸ್‌, ಬಿಜೆಪಿ ಸೇರುವ ವ್ಯಕ್ತಿ ಅಲ್ಲ. ಇಂದಿರಾಗಾಂಧಿಯೆ ನನ್ನನ್ನು ಕಾಂಗ್ರೆಸ್‌ಗೆ ಕರೆ ತರುವ ಪ್ರಯತ್ನ ಮಾಡಿದರೂ ನಾನು ಹೋಗಲಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ(HD Devegowda) ಹೇಳಿದ್ದಾರೆ. 

ಜಿಲ್ಲೆಯಲ್ಲಿ ಗುರುವಾರ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಜೆಡಿಎಸ್‌(JDS) ಅಭ್ಯರ್ಥಿ ವಕ್ಕಲೇರಿ ರಾಮು ಪರ ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲೂಕುಗಳಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾಸನದಲ್ಲಿಯೆ(Hassan) ರಾಹುಲ್‌ ಗಾಂಧಿ(Rahul Gandhi) ಮೂಲಕವೇ ಜೆಡಿಎಸ್‌, ಬಿಜೆಪಿ(BJP) ಬಿ ಟೀಮ್‌ ಎಂದು ಹೇಳಿಸಿದವರೇ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಫಾರ್ಮಾನು ಪಡೆದು ನನ್ನ ಮನೆ ಬಾಗಿಲಿಗೆ ಬಂದು ಕುಮಾರಸ್ವಾಮಿಯನ್ನು(HD Kumaraswamy) ಸಿಎಂ ಮಾಡಿಯೆಂದು ಬೇಡಿಕೊಂಡರು ಎಂದು ರಾಜ್ಯ ಕಾಂಗ್ರೆಸ್‌(Congress) ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

Bommai In Delhi: ದೇವೇಗೌಡ-ಮೋದಿ ಭೇಟಿ ಬಳಿಕ ಬೊಮ್ಮಾಯಿ ದಿಲ್ಲಿಗೆ, ರಾಜ್ಯ ರಾಜಕಾರಣದಲ್ಲಿ ಸಂಚಲನ

ಮೋದಿ ಜತೆ ಅಭಿವೃದ್ಧಿ ಕುರಿತು ಚರ್ಚೆ

ತಮ್ಮನ್ನು ಪ್ರಧಾನಿ ಮೋದಿ(Narendra Modi) ಭೇಟಿ ಮಾಡಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಟೀಕಿಸಿರುವ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿದ ದೇವೇಗೌಡರು, ಮೋದಿ ಭೇಟಿ ಮಾಡಿದ್ದಕ್ಕೆ ನಾನು ಬಿಜೆಪಿಗೆ ಹೋಗುತ್ತೇನೆಂದು ಹೇಳಿದ್ದಾರೆ. ಏಳುವರೆ ವರ್ಷದಲ್ಲಿ ಮೋದಿ ಅವರನ್ನು 5 ಬಾರಿ ಮಾತ್ರ ಭೇಟಿ ನೀಡಿದ್ದೇನೆ. ಹಾಸನ ಸೇರಿದಂತೆ ರಾಜ್ಯದ ಅಭಿವೃದ್ದಿ ಕುರಿತು ವಿಚಾರ ಮಾಡಿದ್ದೇನೆ ಹೊರತು ಸ್ವಂತ ಕೆಲಸಕ್ಕೆ ಎಂದೂ ಭೇಟಿ ಮಾಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಯಾರು ಎಷ್ಟೇ ಒತ್ತಡ ತಂದರೂ ನನ್ನ ಜವಾಬ್ಧಾರಿಯಿಂದ ಹಿಂದೆ ಸರಿದಿಲ್ಲ ಎಂದರು.

1977 ರಲ್ಲಿ ಮೂರಾರ್ಜಿ ದೇಸಾಯಿ ಕರ್ನಾಟಕ ಜನತಾ ಪಕ್ಷದ(Karnataka Janata Party) ಅಧ್ಯಕ್ಷರನ್ನಾಗಿ ಮಾಡಿದರು. ಅಂದಿನಿಂದ ನನ್ನ ರಾಜಕೀಯ ನಿಷ್ಠೆ ಬದಲಿಸಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಸೇರುವ ಬಗ್ಗೆ ಟೀಕಿಸಿರುವ ಸಿದ್ದರಾಮಯ್ಯಗೆ ಜೆಡಿಎಸ್‌ ವರಿಷ್ಠ ದೇವೇಗೌಡ ತಿರುಗೇಟು ನೀಡಿದರು. ಮೋದಿಯವರುದ್ದು ಕೆಟ್ಟಸರ್ಕಾರ ಇರಬಹುದು. ಆದರೆ ನಾನು ಹೋದಾಗಲೆಲ್ಲಾ ಮೋದಿ ಅತ್ಯಂತ ಗೌರವದಿಂದ ನೋಡಿಕೊಂಡಿದ್ದಾರೆ. ಜೆಡಿಎಸ್‌ ಬಡವರ ಪಕ್ಷ, ಈ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತೇವೆ. ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಏನಾಗುತ್ತಿದೆಯೆಂದು ಎಲ್ಲರಿಗೂ ಗೊತ್ತಿದೆ ಎಂದರು.

ಯಾವ ವ್ಯಕ್ತಿ ರಾಜ್ಯದಲ್ಲಿ 5 ವರ್ಷ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಜೆಡಿಎಸ್‌ ಮುಗಿಸುತ್ತೇವೆಂದು ಹೇಳಿದ್ದರು. ಆದರೆ ಬಳಿಕ ನಡೆದ ಚುನಾವಣೆಯಲ್ಲಿ 78 ಸೀಟು ಪಡೆದರು. ಅಕ್ಕಿ ಭಾಗ್ಯ ಸೇರಿ ಎಲ್ಲಾ ಭಾಗ್ಯಗಳ ಸುರಿಮಳೆಗೈದರೂ ಜನ ಅವರಿಗೆ ಬಹುಮತ ಕೊಡಲಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸೋತ ಪರಿಸ್ಥಿತಿಯನ್ನು ದೇವೇಗೌಡರು ನೆನಪಿಸಿದರು.

Loksabha Election 2024: 'ಕೈ' ವಿನ್‌ ಆಗ್ಬೇಕಿತ್ತು, ಅದಾಗೋಲ್ಲ ಎಂದ ಕೈ ಹಿರಿಯ ನಾಯಕ

ಪ್ರಚಾರ ಸಭೆಯಲ್ಲಿ ಚಿಂತಾಮಣಿ ಶಾಸಕ ಜೆಕೆ ಕೃಷ್ಣಾರೆಡ್ಡಿ, ಎಂಎಲ್‌ಸಿ ಇಂಚರ ಗೋವಿಂದರಾಜು, ಮಾಜಿ ಎಂಎಲ್‌ಸಿ ತೂಪಲ್ಲಿ ಆರ್‌.ಚೌಡರೆಡ್ಡಿ, ಮಾಜಿ ಶಾಸಕ ಕೋಲಾರದ ಕೆ.ಪಿ.ಬಚ್ಚೇಗೌಡ, ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌.ಮಟಮಪ್ಪ, ಅಭ್ಯರ್ಥಿ ವಕ್ಕಲೇರಿ ರಾಜು, ಯುವ ಮುಖಂಡ ಶಿಡ್ಲಘಟ್ಟದ ಮೇಲೂರು ರವಿಕುಮಾರ್‌ ಸೇರಿದಂತೆ ಮತ್ತಿತರರು ಇದ್ದರು.

ಉಸಿರು ಇರುವ ತನಕ ಪಕ್ಷ ಸಂಘಟನೆ

ಆ ಪುಣ್ಯಾತ್ಮನನ್ನು ನಾನೇ ಸ್ಪೀಕರ್‌ ಮಾಡಿದ್ದೆ. ಈಗ ಆತ ಮಹಾನ್‌ ನಾಯಕನಾಗಿದ್ದಾನೆ. ಇವರ ಬಂಡವಾಳ ನನಗೆ ಸಾಕಷ್ಟುಗೊತ್ತಿದೆಯೆಂದು ಹೇಳುವ ಮೂಲಕ ಪಕ್ಕದ ಶ್ರೀನಿವಾಸಪುರದ ಕಾಂಗ್ರೆಸ್‌ ಶಾಸಕರಾದ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ವಿರುದ್ದವೂ ಜೆಡಿಎಸ್‌ ವರಿಷ್ಠ ದೇವೇಗೌಡ ತೀವ್ರ ವಾಗ್ದಾಳಿ ನಡೆಸಿದರು. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ವಕ್ಕಲೇರಿ ರಾಮುಗೆ ಕೊಟ್ಟಿದ್ದ ಪಕ್ಷದ ಬಿ.ಫಾರಂ ಕೊನೆ ಕ್ಷಣದಲ್ಲಿ ವಾಪಸ್ಸು ಪಡೆದು ಕೆ.ಶ್ರೀನಿವಾಸಗೌಡರಿಗೆ ಕೊಟ್ಟು ಗೆಲ್ಲಿಸಿದವು. ಈಗ ಅ ಮನುಷ್ಯ ಕೂಡ ಕಾಂಗ್ರೆಸ್‌ಗೆ ಹೋಗುತ್ತಿದ್ದಾರೆ. ಯಾರೇ ಪಕ್ಷ ಬಿಡಲಿ ನನ್ನ ಉಸಿರು ಇರುವ ತನಕ ಜೆಡಿಎಸ್‌ ಪಕ್ಷವನ್ನು ಸಂಘಟಿಸುತ್ತೇನೆಂದು ಹೆಚ್‌.ಡಿ.ದೇವೇಗೌಡ ಶಪಥ ಮಾಡಿದರು.

Follow Us:
Download App:
  • android
  • ios