ಮಳೆಯೇ ಇಲ್ಲದೇ ಅನ್ನದಾತನ ಅಂಗಳದಲ್ಲಿ ಚಿಂತೆಯ ಕಾರ್ಮೋಡಗಳೇ ಕವಿದಿರುವ ಸಂದರ್ಭದಲ್ಲಿ ಬರಡು ಜಮೀನಿನಲ್ಲಿ ಕೊರೆಯಲಾಗುತ್ತಿದ್ದ ಕೊಳವೆಬಾವಿಯ ಅಂತರ್ಜಲ ಮುಗಿಲೆತ್ತರಕ್ಕೆ ಚಿಮ್ಮಿರುವ ಘಟನೆಗೆ ತಾಲೂಕಿನ ಬನ್ನಿಕಲ್ಲು ಗ್ರಾಮ ಭಾನುವಾರ ರಾತ್ರಿ ಸಾಕ್ಷಿಯಾಗಿದೆ.

ಹಗರಿಬೊಮ್ಮನಹಳ್ಳಿ (ಜು.15) ಮಳೆಯೇ ಇಲ್ಲದೇ ಅನ್ನದಾತನ ಅಂಗಳದಲ್ಲಿ ಚಿಂತೆಯ ಕಾರ್ಮೋಡಗಳೇ ಕವಿದಿರುವ ಸಂದರ್ಭದಲ್ಲಿ ಬರಡು ಜಮೀನಿನಲ್ಲಿ ಕೊರೆಯಲಾಗುತ್ತಿದ್ದ ಕೊಳವೆಬಾವಿಯ ಅಂತರ್ಜಲ ಮುಗಿಲೆತ್ತರಕ್ಕೆ ಚಿಮ್ಮಿರುವ ಘಟನೆಗೆ ತಾಲೂಕಿನ ಬನ್ನಿಕಲ್ಲು ಗ್ರಾಮ ಭಾನುವಾರ ರಾತ್ರಿ ಸಾಕ್ಷಿಯಾಗಿದೆ.

ಜಲಾಶಯ ಇದ್ದರೂ ಕೃಷಿಗೆ ನೀರಿಲ್ಲ

ತಾಲೂಕಿನ ಪಶ್ಚಿಮ ಗಡಿಯುದ್ದಕ್ಕೂ ವರ್ಷದ ಆರು ತಿಂಗಳುಗಳ ಕಾಲ ಹೊದ್ದು ನಿಲ್ಲುವ ತುಂಗಭದ್ರೆ, ಎರಡು ಟಿಎಂಸಿ ಸಾಮರ್ಥ್ಯದ ತಾಲೂಕಿನ ರೈತರ ಜೀವನಾಡಿ ಹಗರಿಬೊಮ್ಮನಹಳ್ಳಿ ಜಲಾಶಯ ಇದ್ದರೂ ತಾಲೂಕಿನ ರೈತರ ಕೊಳವೆಬಾವಿಗಳ ಅಂತರ್ಜಲದ ಮರುಪೂರಣ ಈಗಲೂ ಸವಾಲಿನ ವಿಷಯವಾಗಿದೆ.

ಕೊಳವೆಬಾವಿಯಿಂದ ಮುಗಿಲೆತ್ತರ ಚಿಮ್ಮಿದ ನೀರು!

ಆದರೆ, ಬನ್ನಿಕಲ್ಲು ಗ್ರಾಮದ ರೈತ ಸುನೀಲ್ ತಮ್ಮ ಒಣ ಜಮೀನಿನಲ್ಲಿ ಕೊಳವೆಬಾವಿ ಕೊರೆಯುಸುತ್ತಿದ್ದಾಗ ಅವಿರ್ಭವಿಸಿದ ರಭಸದ ಅಂತರ್ಜಲ ಗ್ರಾಮದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಕೊಳವೆ ಬಾವಿಯಿಂದ ಮುಗಿಲೆತ್ತರಕ್ಕೆ ಚಿಮ್ಮಿದ ನೀರಿನ ರಭಸಕ್ಕೆ ಇಡೀ ಗ್ರಾಮದ ರೈತರು ಬೆಕ್ಕಸ ಬೆರಗಾಗಿದ್ದಾರೆ.

ಕೊಳವೆ ಬಾವಿಯಿಂದ ಇಡೀ ಜಮೀನಿಗೆ ಭೋರ್ಗರೆದ ನೀರು ರೈತ ಸುನೀಲ್ ಅವರ ಮೊಗದಲ್ಲಿ ಆನಂದಬಾಷ್ಪ ಮೂಡಿಸಿದೆ. ಉತ್ತಮ ಭರಪೂರ ನೀರಿನ ಲಭ್ಯತೆಯ ನಿರೀಕ್ಷೆ ಹುಸಿಯಾಗಲಿಲ್ಲ ಎನ್ನುವ ಸಂತಸವನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡಿರುವ ರೈತ, ತಮ್ಮ ಉತ್ತಮ ಕೃಷಿ ಚಟುವಟಿಕೆಗಳಿಗೆ ಗಂಗಾಮಾತೆ ಸಾಥ್ ನೀಡಿದ್ದಾಳೆ. ಭೀಕರ ಬರದ ಆತಂಕದಲ್ಲಿದ್ದ ನಮ್ಮ ಕುಟುಂಬಕ್ಕೆ ಹೊಸ ಚೈತನ್ಯ ಮೂಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.