ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಪಶುವೈದ್ಯಾಧಿಕಾರಿ ಡಾ. ಸುನೀಲ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದ ಅವರು, ಅಚಾನಕ್ಕಾಗಿ ಆಳಕ್ಕೆ ಸಿಲುಕಿ ಈ ದುರಂತಕ್ಕೆ ತುತ್ತಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಪಶುವೈದ್ಯಾಧಿಕಾರಿಯೊಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಈ ದುರ್ಘಟನೆ ಸಾಗರ ತಾಲೂಕಿನ ಹಕ್ರೆಯ ಬಾಳೇಗೆರೆ ಗ್ರಾಮದ ಸಮೀಪ ಸಂಭವಿಸಿದ್ದು, ಸ್ಥಳೀಯರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

Add Asianetnews Kannada as a Preferred SourcegooglePreferred

ಹಿರಿಯ ಪಶುವೈದ್ಯಾಧಿಕಾರಿಯಾಗಿ ಸೇವೆ

ಮೃತರನ್ನು ಡಾ. ಸುನೀಲ್ (38) ಎಂದು ಗುರುತಿಸಲಾಗಿದೆ. ಅವರು ಪ್ರಸ್ತುತ ಶಿಕಾರಿಪುರ ತಾಲೂಕಿನ ಮಾಸೂರಿನಲ್ಲಿ ಹಿರಿಯ ಪಶುವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೂಲತಃ ಸೊರಬ ತಾಲೂಕಿನ ಹೊರಬೈಲು ಗ್ರಾಮದವರಾಗಿರುವ ಡಾ. ಸುನೀಲ್, ನಿನ್ನೆ ಮಧ್ಯಾಹ್ನ ಕುಟುಂಬ ಸದಸ್ಯರೊಂದಿಗೆ ಪ್ರವಾಸದ ನಿಮಿತ್ತ ಶರಾವತಿ ಹಿನ್ನೀರು ಪ್ರದೇಶಕ್ಕೆ ಆಗಮಿಸಿದ್ದರು. ಪ್ರವಾಸದ ವೇಳೆ ಶರಾವತಿ ಹಿನ್ನೀರಿನಲ್ಲಿ ಈಜಾಡಲು ತೆರಳಿದ ಡಾ. ಸುನೀಲ್, ಅಚಾನಕ್‌ವಾಗಿ ನೀರಿನ ಆಳಕ್ಕೆ ಸಿಲುಕಿ ಮುಳುಗಿದ್ದಾರೆ ಎನ್ನಲಾಗಿದೆ. ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದ್ದು, ಅವರೊಂದಿಗೆ ಇದ್ದವರು ತಕ್ಷಣ ರಕ್ಷಣೆಗೆ ಯತ್ನಿಸಿದರೂ ಸಾಧ್ಯವಾಗಲಿಲ್ಲ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅಗ್ನಿಶಾಮಕ ದಳದ ಅಧಿಕಾರಿ ವಿನಾಯಕ ಹೆಗ್ಗೆನಾಯಕ ಅವರ ನೇತೃತ್ವದಲ್ಲಿ ಹಲವು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಲಾಯಿತು. ತೀವ್ರ ಪರಿಶ್ರಮದ ಬಳಿಕ ಮೃತದೇಹವನ್ನು ನೀರಿನಿಂದ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿಗೆ ಸಾಧ್ಯವಾಯಿತು.

ಸೌಮ್ಯ ಸ್ವಭಾವದ ಅಧಿಕಾರಿ

ಮೃತದೇಹವನ್ನು ನಂತರ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕರ್ತವ್ಯನಿಷ್ಠ ಹಾಗೂ ಸೌಮ್ಯ ಸ್ವಭಾವದ ಅಧಿಕಾರಿಯಾಗಿ ಪರಿಚಿತರಾಗಿದ್ದ ಡಾ. ಸುನೀಲ್ ಅವರ ಅಕಾಲಿಕ ನಿಧನವು ಕುಟುಂಬದ ಸದಸ್ಯರು, ಸಹೋದ್ಯೋಗಿಗಳು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖವನ್ನುಂಟುಮಾಡಿದೆ. ಈ ದುರ್ಘಟನೆ ಜಿಲ್ಲೆಯಾದ್ಯಂತ ವಿಷಾದಕ್ಕೆ ಕಾರಣವಾಗಿದೆ.