ಬೀದರ್ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ದುರ್ಘಟನೆಗಳು ಸಂಭವಿಸಿವೆ. ಚಿಟಗುಪ್ಪ ತಾಲೂಕಿನ ವಿಠಲಪುರ ಗ್ರಾಮದ ಬಾವಿಯಲ್ಲಿ ಈಜಲು ಹೋದ ಇಬ್ಬರು ಸ್ನೇಹಿತರು ಮುಳುಗಿ ಮೃತಪಟ್ಟಿದ್ದಾರೆ. ಹುಲಸೂರು ತಾಲೂಕಿನ ಕೆರೆಯಲ್ಲಿ ಈಜಲು ಹೋದ ಯುವಕನೂ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬೇಸಿಗೆ ರಜೆಯಲ್ಲಿ ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.

ಬೀದರ್ (ಮಾ.16): ಇಬ್ಬರು ಸ್ನೇಹಿತರು ಗ್ರಾಮದ ಐತಿಹಾಸಿಕ ಬಾವಿಯಲ್ಲಿ ಬೆಳಗ್ಗೆ ಈಜಲು ಹೋಗಿದ್ದು, ಅದರಲ್ಲಿ ಒಬ್ಬ ಬಾವಿಯ ಆಳಕ್ಕೆ ಹೋಗಿದ್ದಾನೆ. ಅವನನ್ನು ಕಾಪಾಡಲು ಹೋದ ಇನ್ನೊಬ್ಬ ಸ್ನೇಹಿತ ಕೂಡ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ವಿಠಲಪುರ್ ಗ್ರಾಮದ ಐತಿಹಾಸಿಕ ಬಾವಿಯಲ್ಲಿ ದುರ್ಘಟನೆ ನಡೆದಿದೆ. ಬಾವಿಯಲ್ಲಿ ಈಜಲು ಹೋಗಿದ್ದ ಪ್ರಕಾಶ್(22) ಹಾಗೂ ಶಿವಾಜಿ (21) ಮೃತ ದುರ್ದೈವಿಗಳು. ಇಬ್ಬರು ಸ್ನೇಹಿತರಾಗಿದ್ದರು. ನೀರಿನ ಆಳಕ್ಕೆ ಹೋಗಿದ್ದ ಒಬ್ಬ ಸ್ನೇಹಿತನನ್ನು ಕಾಪಾಡಲು ಹೋದ ಇನ್ನೊಬ್ಬ ಕೂಡ ಬಲಿಯಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು, ಸ್ಥಳೀಯರ ಸಹಾಯದೊಂದಿಗೆ ಇಬ್ಬರ ಮೃತ ದೇಹ ಹೊರ ತೆಗೆದಿದ್ದಾರೆ. ಈ ಘಟನೆ ಕುರಿತು ಬೆಮ್ಮಳಕೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಮತ್ತೊಂದು ಘಟನೆಯಲ್ಲಿ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗಡಿಗೌಡಗಾಂವ್ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಹುಲಸೂರಿನ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆಕಾಶ್ ಕಂಟೆಪ್ಪ ಗುಂಗೆ (23) ಮೃತ ಯುವಕ. ಈತನೂ ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಹೋಗಿದ್ದಾಗ ಈಜು ಬಾರದೆ ದುರ್ಮರಣ ಹೊಂದಿದ್ದಾನೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿ ಯುವಕನ ಮೃತದೇಹವನ್ನು ಹೊರ ತೆಗೆದಿದ್ದಾರೆ. ಈ ಕುರಿತು ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬೆಳಗ್ಗೆ 8ಕ್ಕೆ ಸಾಲ ವಸೂಲಿಗೆ ಬಂದರೆ ರಾತ್ರಿ 10ಕ್ಕೆ ವಾಪಸ್; ದಾಂಪತ್ಯದಲ್ಲಿ ಬಿರುಕು!

ಬೆಸಿಗೆಯ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಇರಲಿದ್ದು ಬಿಸಿಲ ತಾಪ ತಾಳಲಾರದೇ ನದಿ, ಕೆರೆ, ಬಾವಿ ಹಾಗೂ ಕಥಷಿ ಹೊಂಡಗಳಲ್ಲಿ ಈಜಾಡಲು ಹೋಗುವವರ ಸಂಖ್ಯೆ ಹಚ್ಚಾಗಿದೆ. ಆದರೆ, ಇದೀಗ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಕ್ಕಳನ್ನು ಪೋಷಕರು ಜಾಗ್ರತೆಯಿಂದ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಜಲ ಮೂಲಗಳಲ್ಲಿ ಮಕ್ಕಳು ಪ್ರಾಣ ಕಳೆದುಕೊಳ್ಳಬಹುದು.