ಮೈಸೂರು ತಾಲೂಕಿನ ಮೀನಾಕ್ಷಿಪುರದ ಕಾವೇರಿ ಹಿನ್ನೀರಿನಲ್ಲಿ ಮಂಡ್ಯ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ. ಪ್ರಶಾಂತ್, ಸಿದ್ದೇಶ್ ಮತ್ತು ಕೃಷ್ಣ ಎಂಬ ವಿದ್ಯಾರ್ಥಿಗಳು ಈಜಲು ಹೋಗಿ ದುರ್ಘಟನೆಗೆ ಒಳಗಾಗಿದ್ದಾರೆ. ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಮುಂದುವರೆದಿದೆ.

ಮಂಡ್ಯ/ ಮೈಸೂರು (ಜು.20): ಮೈಸೂರು ತಾಲೂಕಿನ ಮೀನಾಕ್ಷಿಪುರದ ಹಿನ್ನೀರಿನಲ್ಲಿ ಕಾವೇರಿ ಹಿನ್ನೀರಿನಲ್ಲಿ ಈಜಾಡಲು ಬಂದಿದ್ದ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಮಿಮ್ಸ್) ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ದಾರುಣವಾಗಿ ಸವನ್ನಪ್ಪಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

Add Asianetnews Kannada as a Preferred SourcegooglePreferred

ಮಂಡ್ಯ ನಗರದಲ್ಲಿರುವ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರವಾಸಕ್ಕಾಗಿ ಮೀನಾಕ್ಷಿಪುರದ ಕಾವೇರಿ ಹಿನ್ನೀರಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದರು. ಮುಳುಗಿದ ವಿದ್ಯಾರ್ಥಿಗಳನ್ನು ಪ್ರಶಾಂತ್, ಸಿದ್ದೇಶ್ ಮತ್ತು ಕೃಷ್ಣ ಎಂದು ಗುರುತಿಸಲಾಗಿದೆ. ಇವರು ಸ್ನಾನದ ವೇಳೆ ನೀರಿನ ಆಳವನ್ನು ಮತ್ತು ರಭಸವಾಗಿ ಹರಿಯುತ್ತಿದ್ದ ನೀರಿನ ಹರಿವು ಬಗ್ಗೆ ತಿಳಿದುಕೊಳ್ಳದೇ ಆಳಕ್ಕೆ ಹೋಗಿದ್ದಾರೆ. ಈ ವೇಳೆ ಒಬ್ಬ ಆಳಕ್ಕೆ ಹೋದ ನಂತರ ಅವರನ್ನು ಕಾಪಾಡಲು ಇನ್ನೊಬ್ಬ, ಮತ್ತೊಬ್ಬ ಎಂಬಂತೆ ಮೂವರೂ ಆಳಕ್ಕೆ ಹೋಗಿ ನೀರಿನಲ್ಲಿ ಮುಳುಗಿ ನಾಪತ್ತೆ ಆಗಿದ್ದಾರೆ.

ಇನ್ನು ದಡದ ಮೇಲಿದ್ದ ಇತರೆ ಸ್ನೇಹಿತರು ಕಾವೇರಿ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ಮುಳುಗಿದ್ದಾರೆ ಎಂದು ಅಲ್ಲಿದ್ದವರಿಗೆ ತಿಳಿಸಿದ್ದಾರೆ. ಒಟ್ಟು 6 ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮೂವರು ನೀರಿನಲ್ಲಿ ಮುಳುಗಿದರೆ, ಇನ್ನು ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗುತ್ತಿದೆ. ಕೂಡಲೇ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗೂ ಮಾಹಿತಿ ರವಾನಿಸಲಾಗಿದೆ. ಇದೀಗ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಮುಳುಗಿದವರ ಶೋಧ ಕಾರ್ಯಾಚರಣೆಗೆ ತೊಡಗಿದ್ದಾರೆ. ಈ ಘಟನೆ ನಡೆದ ಸ್ಥಳ ಇಳವಾಲ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಸಾರಾಂಶ:

  • ಸ್ಥಳ: ಮೀನಾಕ್ಷಿಪುರ, ಕಾವೇರಿ ನದಿ ಹಿನ್ನೀರು,
  • ವಿದ್ಯಾರ್ಥಿಗಳು: ಮಂಡ್ಯ ನರ್ಸಿಂಗ್ ಕಾಲೇಜಿನ 3 ವಿದ್ಯಾರ್ಥಿಗಳು
  • ಮುಳುಗಿದವರ ಹೆಸರು: ಪ್ರಶಾಂತ್, ಸಿದ್ದೇಶ್, ಕೃಷ್ಣ
  • ಸ್ಥಿತಿ: ಸಾವು ಶಂಕೆ, ಶೋಧ ಕಾರ್ಯ ಮುಂದುವರಿದಿದೆ
  • ಅಧಿಕಾರಿಗಳು ದೌಡು: ತಹಸೀಲ್ದಾರ, ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳದಲ್ಲಿದ್ದಾರೆ

ಈ ದುರ್ಘಟನೆ ಮಂಡ್ಯ ಕಾಲೇಜಿನ ವಿದ್ಯಾರ್ಥಿ ಸಮುದಾಯದಲ್ಲಿ ಆತಂಕವನ್ನುಂಟುಮಾಡಿದೆ. ಪ್ರವಾಸಿ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಬೇಡಿಕೆ ಕೇಳಿಬಂದಿದೆ. ಕಾವೇರಿ ಹಿನ್ನೀರಿನ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೂಚನಾ ಫಲಕಗಳನ್ನು ಅಳವಡಿಕೆ ಮಾಡಬೇಕು. ರಕ್ಷಣೆಗೆ ಭದ್ರತಾ ಸಿಬ್ಬಂದಿ ನಿಯೋಜನೆ ಜೊತೆಗೆ ನುರಿತ ಈಜುಗಾರರನ್ನು ನೇಮಕ ಮಾಡಬೇಕು ಎಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ.