ಯಕ್ಷಗಾನದ ಹಾಸ್ಯ ಚಕ್ರವರ್ತಿ ಎಂದು ಖ್ಯಾತರಾಗಿದ್ದ ಶ್ರೀಧರ ಭಟ್ ಕಾಸರಕೋಡ್ (52) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೂರುವರೆ ದಶಕಗಳ ಕಾಲ ಯಕ್ಷರಂಗದಲ್ಲಿ ಸೇವೆ ಸಲ್ಲಿಸಿದ್ದ ಇವರು, ಗುಂಡಬಾಳ, ಮಂದಾರ್ತಿ, ಸಾಲಿಗ್ರಾಮ, ಜಲವಳ್ಳಿ ಮೇಳಗಳಲ್ಲಿ ಹಾಸ್ಯಕಲಾವಿದರಾಗಿ ಜನಪ್ರಿಯರಾಗಿದ್ದರು.
ಕಾರವಾರ:ಯಕ್ಷರಂಗದ ಅಪ್ರತಿಮ ಹಾಸ್ಯ ಚಕ್ರವರ್ತಿ ಎಂದು ಜನಮನ್ನಣೆ ಪಡೆದಿದ್ದ ಯಕ್ಷಗಾನ ಕಲಾವಿದ ಶ್ರೀಧರ ಭಟ್ ಕಾಸರಕೋಡ್ (52) ಅವರು ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಧರ್ ಭಟ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗುವಾಗ ಮಾರ್ಗ ಮದ್ಯೆ ನಿಧನ ಹೊಂದಿದ್ದಾರೆ.
ಯಕ್ಷರಂಗದಲ್ಲಿ ಮೂರುವರೆ ದಶಕ
ಶ್ರೀಧರ ಭಟ್ ಕಾಸರಕೋಡ್ ಅವರು ಸಹಜ ಹಾಸ್ಯ, ತಾಳ್ಮೆ, ಸಮಯಪ್ರಜ್ಞೆ ಹೊಂದಿದ್ದ ಇವರು, ಪ್ರೇಕ್ಷಕರೊಂದಿಗೆ ಒಡನಾಟ ಹೊಂದಿರುವ ಕಲಾವಿದರಾಗಿದ್ದರು. ಶ್ರೀಧರ್ ಭಟ್ ಅವರು ಜೋಕುಮಾರ ಸ್ವಾಮಿ, ಅಜ್ಜಿಯ ಪಾತ್ರ, ಸೂತ್ರಧಾರಿ ಸೇರಿದಂತೆ ಅನೇಕ ಪಾತ್ರಗಳಿಂದ ಮೂರುವರೆ ದಶಕಗಳ ಕಾಲ ಯಕ್ಷಗಾನ ಪ್ರಿಯರನ್ನು ರಂಜಿಸಿದ್ದಾರೆ.
ಶ್ರೀಧರ ಭಟ್ ಅವರು ಗುಂಡಬಾಳ, ಮಂದಾರ್ತಿ, ಸಾಲಿಗ್ರಾಮ, ಜಲವಳ್ಳಿ ಮೇಳದಲ್ಲಿ ಹಾಸ್ಯಕಲಾವಿದರಾಗಿದ್ದರು. ಇನ್ನಿತರ ಹವ್ಯಾಸಿ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ವೇಷ ಧರಿಸಿ ಉತ್ತಮ ಕಲಾವಿದರೆನಿಸಿಕೊಂಡಿದ್ದರು. ಮೂಲತಃ ಕಾಸರಕೋಡಿನವರಾಗಿ, ಪ್ರಸುತ್ತ ಸಾಲ್ಕೋಡ್ ಗ್ರಾಮದ ಮುಲ್ಲೆಮಕ್ಕಿಯಲ್ಲಿ ವಾಸವಾಗಿದ್ದರು.
ಇದನ್ನೂ ಓದಿ: ಯಕ್ಷಗಾನ ಕಲಾವಿದರ ಬಗ್ಗೆ ನಾಲಿಗೆ ಹರಿಬಿಟ್ಟ ಮಹೇಶ್ ಶೆಟ್ಟಿ ತಿಮರೋಡಿ; ಆಡಿಯೋ ಆಧರಿಸಿ ಮಹಿಳಾ ಠಾಣೆಯಲ್ಲಿ ಎಫ್ಐಆರ್!
ಮೃತರು ಪತ್ನಿ ,ಇರ್ವರು ಪುತ್ರರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಮೃತರಿಗೆ ಯಕ್ಷಗಾನ ಕಲಾವಿದರಾದ ವಿದ್ಯಾದರ ಜಲವಳ್ಳಿ, ಶಿವಾನಂದ ಹೆಗಡೆ ಕೆರೆಮನೆ, ಶಂಕರ ಹೆಗಡೆ ನಿಲ್ಕೋಡ್, ಕಲಾ ಪೋಷಕರಾದ ಶಿವಾನಂದ ಹೆಗಡೆ ಕಡತೋಕಾ, ರಾಜು ಭಂಡಾರಿ, ನಾಗರಾಜ ಹೆಗಡೆ ಖಾಸ್ಕಂಡ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.


