ಇತ್ತೀಚೆಗೆ ಯಕ್ಷಗಾನ ಪ್ರದರ್ಶನವೊಂದರಲ್ಲಿ ಪ್ರೇಕ್ಷಕರೊಬ್ಬರು ಶಿಳ್ಳೆ ಹಾಕಿದ್ದಕ್ಕೆ ಕಲಾವಿದ ಅಶೋಕ್ ಭಟ್ ವೇದಿಕೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಯಕ್ಷಗಾನದಲ್ಲಿ ಶಿಳ್ಳೆ ಹಾಕುವುದು ಮೆಚ್ಚುಗೆಯ ಸಂಕೇತವೇ ಅಥವಾ ಕಲೆಗೆ ತೋರುವ ಅಗೌರವವೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಬೆಂಗಳೂರು: ರಾಜ್ಯದ ಕರಾವಳಿ ಭಾಗ ಅಂದ್ರೆ ನೆನಪಿಗೆ ಬರುವ ಕಲೆ ಅಂದ್ರೆ ಯುಕ್ಷಗಾನ. ಇಂದಿಗೂ ವಿಶೇಷ ಸ್ಥಾನಮಾನ ಉಳಿಸಿಕೊಂಡಿರುವ ಯಕ್ಷಗಾನ ಕಲೆಯನ್ನು ವೀಕ್ಷಿಸಲು ದೂರದೂರುಗಳಿಂದ ಜನರು ಬರುತ್ತಾರೆ. ಇಡೀ ರಾತ್ರಿ ಜಾಗರಣೆ ಮಾಡಿ ಯಕ್ಷಗಾನ ನೋಡೋದು ಅಂದ್ರೆ ಒಂದು ಖುಷಿ. ಕಲಾವಿದರ ನಟನೆ ಇಷ್ಟವಾದ್ರೆ ವೀಕ್ಷಕರು ಚಪ್ಪಾಳೆ ಮತ್ತು ಶಿಳ್ಳೆ ಮೂಲಕ ಮೆಚ್ಚುಗೆ ಸೂಚಿಸುತ್ತಾರೆ. ಆದ್ರೆ ಈಗ ಯಕ್ಷಗಾನ ನಡೆಯುವಾಗ ಶಿಳ್ಳೆ ಹಾಕಬಾರದಾ ಎಂಬ ಚರ್ಚೆ ಆರಂಭಗೊಂಡಿದೆ. ಶಿಳ್ಳೆ ಹಾಕಿದ್ರೆ ಅದು ಕಲಾವಿದರನ್ನು ಅವಮಾನಿಸಿದಂರತಾಗುತ್ತಾ ಎಂದು ಜನರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ವೈರಲ್ ಆಗಿರುವ ವಿಡಿಯೋ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

Add Asianetnews Kannada as a Preferred SourcegooglePreferred

ಈ ಚರ್ಚೆಗೆ ಕಾರಣ ಏನು?

ಇತ್ತೀಚೆಗಷ್ಟೇ ಕುಂದಾಪುರದ ಹೆನ್ನಾಬೈಲಿನಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಯಕ್ಷಗಾನ ಭಾಗವತಿಕೆ ವೇಳೆ ಪ್ರೇಕ್ಷಕರು ಶಿಳ್ಳೆ ಹಾಕಿದ್ದಾರೆ. ವೀಕ್ಷಕ ಪದೇ ಪದೇ ಶಿಳ್ಳೆ ಹಾಕಿದ ಕಾರಣ ವೇದಿಕೆ ಮೇಲಿದ್ದ ಕಲಾವಿದ ಅಶೋಕ್ ಭಟ್ ಗರಂ ಆಗಿದ್ದಾರೆ. ವೇದಿಕೆ ಮೇಲಿಂದಲೇ ಶಿಳ್ಳೆ ಹಾಕುತ್ತಿದ್ದ ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಶೋಕ್ ಭಟ್‌ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಶೋಕ್ ಭಟ್ ಅವರು ಅತ್ಯಂತ ಜನಪ್ರಿಯ ಯಕ್ಷಗಾನ ಕಲಾವಿದರಾಗಿದ್ದು, ಈ ರೀತಿ ನಡೆದುಕೊಂಡಿದ್ದು ಎಷ್ಟು ಸರಿ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಲಾವಿದ ಅಶೋಕ್ ಭಟ್ ಹೇಳಿದ್ದೇನು?

ನೀವು ಶಿಳ್ಳೆ ನಿಲ್ಲಿಸದಿದ್ರೆ ನಾನು ಇಲ್ಲಿಂದ ಹೋಗುತ್ತೇನೆ. ಇದು ದೊಂ*ಬರಾಟ ಅಲ್ಲ. ನಾನು ಸಭ್ಯ ಸಭೆಯನ್ನು ಬಯಸುತ್ತೇನೆ. ನಾನು ಆಗಿನಿಂದಲೂ ಶಿಳ್ಳೆ ಹಾಕೋದನ್ನು ಗಮನಿಸುತ್ತಿದ್ದೇನೆ. ಶಿಳ್ಳೆ ಹಾಕೋದಕ್ಕೆ ಇದು ಕಂಬಳ ಆಟವಲ್ಲ? ನನಗೆ ಯಾರ ದಾಕ್ಷಿಣ್ಯವೂ ಇಲ್ಲ. ನಿಮ್ಮಂಥ ಪ್ರೇಕ್ಷಕರ ಅಗತ್ಯ ಇಲ್ಲ. ಯಕ್ಷಗಾನ ಪ್ರದರ್ಶನ ವೇಳೆ ಶಿಳ್ಳೆ ಹಾಕಿ ಸೌಜನ್ಯ ಮೀರಬೇಡಿ. ಈ ಕ್ಷೇತ್ರದಲ್ಲಿ ನಮ್ಮ ಓಡಾಟ ಏನು ಎಂಬುದರ ಮಾಹಿತಿ ನಿನಗಿದೆಯಾ? ಯಾರು ಶಿಳ್ಳೆ ಹಾಕಿದ್ದು? ಆಗದಿದ್ರೆ ಬನ್ಸ್ ತಿಂದು ಹೋಗು ಎಂದು ಅಶೋಕ್ ಭಟ್‌ ಕ್ಲಾಸ್ ತೆಗೆದುಕೊಂಡಿದ್ದರು.

ಹಿರಿಯ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಬೇಸರ

ಹಿರಿಯ ಯಕ್ಷಗಾನ ಕಲಾವಿದರಾಗಿರುವ ಸರಪಾಡಿ ಅಶೋಕ್ ಶೆಟ್ಟಿ ಅವರು ವೈರಲ್ ವಿಡಿಯೋ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಉಜಿರೆಯ ಅಶೋಕ್ ಅವರ ವೇದಿಕೆ ಮೇಲಿಂದಲೇ ಇಡೀ ವೀಕ್ಷಕ ವರ್ಗವನ್ನು ಕೆಣಕಿದ್ದಾರೆ. ಯಕ್ಷಗಾನ ರಾತ್ರಿ ನಡೆಯುವ ಕಾರ್ಯಕ್ರಮವಾಗಿದ್ದು, ಇದನ್ನು ನೋಡಲು ಪಾಮರರು, ಪಂಡಿತರು ಸೇರಿದಂತೆ ಎಲ್ಲಾ ವರ್ಗದವರು ಬರುತ್ತಾರೆ. ಜನರು ತಮಗೆ ಸರಿ ಅನ್ನಿಸುವ ಮಾರ್ಗದ ಮೂಲಕ ಕಲಾವಿದರ ನಟನೆಗೆ ಮೆಚ್ಚುಗೆ ಸೂಚಿಸುತ್ತಾರೆ. ಆ ಮೆಚ್ಚುಗೆ ಚಪ್ಪಾಳೆ, ಮತ್ತೊಮ್ಮೆ ಶಿಳ್ಳೆಯೂ ಆಗಿರುತ್ತದೆ. ಈ ಚಪ್ಪಾಳೆ-ಶಿಳ್ಳೆಯಿಂದಾಗಿ ಕಲಾವಿದರಿಗೆ ಅಡಚಣೆಯುಂಟಾದ್ರೆ ಕಾರ್ಯಕ್ರಮದ ಆಯೋಜಕರಿಗೆ ಹೇಳಬಹುದು. ಅದನ್ನು ಬಿಟ್ಟು ವೇದಿಕೆ ಮೇಲಿಂದ ಈ ರೀತಿ ನಡೆದುಕೊಳ್ಳಬಾರದಿತ್ತು ಎಂದು ಸರಪಾಡಿ ಅಶೋಕ್ ಶೆಟ್ಟಿ ಹೇಳಿದ್ದಾರೆ.

ಕಲಾವಿದ ಅಶೋಕ್ ಭಟ್ ಪರವಾಗಿರುವ ಜನರ ವಾದ ಏನು?

ಯಕ್ಷಗಾನದ ಮಧ್ಯೆ ಪದೇ ಪದೇ ಶಿಳ್ಳೆ ಹಾಕೋದರಿಂದ ಮಾತುಗಳು ಸಹ ಸರಿಯಾಗಿ ಕೇಳಿಸಲ್ಲ. ಈ ರೀತಿ ಶಿಳ್ಳೆಗಳು ಕೆಲವೊಮ್ಮೆ ಕಲಾವಿದರಿಗೆ ಮಾತುಗಳನ್ನು ಹೇಳುವಾಗ ಕಿರಿಕಿರಿಯನ್ನುಂಟು ಮಾಡುತ್ತವೆ. ಇದರಿಂದ ಹಿರಿಯರಾಗಿರುವ ಅಶೋಕ್ ಭಟ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಶೋಕ್ ಭಟ್ ಅವರು ಎಲ್ಲರನ್ನು ಉದ್ದೇಶಿಸಿ ಈ ಮಾತುಗಳನ್ನು ಹೇಳಿಲ್ಲ. ಆ ಸಂದರ್ಭದಲ್ಲಿ ಅತಿಯಾಗಿ ಶಿಳ್ಳೆ ಹಾಕುವ ವ್ಯಕ್ತಿಗೆ ಹೇಳಿದ್ದಾರೆ ಎಂದು ಅಶೋಕ್ ಭಟ್ ಪರವಾಗಿಯೂ ಅಭಿಪ್ರಾಯಗಳು ವ್ಯಕ್ತವಾಗಿವೆ.