ಹೊಸಪೇಟೆಯ ಹಂಪಿಯ ಹಜಾರರಾಮ ದೇವಸ್ಥಾನದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಡೆಸುತ್ತಿರುವ ಉತ್ಖನನದಲ್ಲಿ, ಮತ್ತೆರಡು ಆಳ್ವರ್ ವಿಗ್ರಹಗಳು, ಬೃಹತ್ ಕಲ್ಲಿನ ಕಾಲುವೆ ಮತ್ತು ಪ್ರಾಣಿಗಳ ಕಲ್ಲಿನ ಚಿತ್ರಗಳು ಪತ್ತೆಯಾಗಿವೆ. ಈ ಹಿಂದೆ ಎರಡು ಆಳ್ವರ್ ವಿಗ್ರಹಗಳು ದೊರೆತಿದ್ದು, ಈ ಪ್ರದೇಶದಲ್ಲಿ ಮತ್ತಷ್ಟು ಐತಿಹಾಸಿಕ ಅವಶೇಷಗಳು ಸಿಗುವ ನಿರೀಕ್ಷೆಯಲ್ಲಿ ಉತ್ಖನನ ಮುಂದುವರೆದಿದೆ.

ಹೊಸಪೇಟೆ: ಹಂಪಿಯ ಹಜಾರರಾಮ ದೇವಸ್ಥಾನದ ಸಮೀಪದಲ್ಲಿ ಕಳೆದ ಕೆಲವು ದಿನಗಳಿಂದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯವರು ಉತ್ಖನನ ಕಾರ್ಯ ನಡೆಸುತ್ತಿದ್ದು, ಈಗ ಮತ್ತೆ ಹಂಪಿಯಲ್ಲಿ ಭಗ್ನಗೊಂಡಿರುವ ಪುರಾತನ ಕಾಲದ ಮತ್ತೆರಡು ಆಳ್ವರ್‌ ವಿಗ್ರಹಗಳು ಮತ್ತು ಪುರಾತನ ಕಾಲದ ಐಹಿಹಾಸಿಕ ಬೃಹತ್‌ ಕಲ್ಲಿನ ಕಾಲುವೆ, ದೇವಸ್ಥಾನದ ಮುಂದಿನ ಮೆಟ್ಟಿಲು ಬಳಿ ಎರಡು ಬದಿಯಲ್ಲಿರುವ ಪ್ರಾಣಿಯ ಕಲ್ಲಿನ ಚಿತ್ರ ಪತ್ತೆಯಾಗಿವೆ.

Add Asianetnews Kannada as a Preferred SourcegooglePreferred

ಮತ್ತಷ್ಟು ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗುವ ಸಾಧ್ಯತೆ

ಕಳೆದ ಮೂರು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಪುರಾತನ ಕಾಲದ ಎರಡು ಆಳ್ವರ್‌ ವಿಗ್ರಹಗಳು, ಆನೆಯ ವಿಗ್ರಹಗಳು ದೊರೆತಿದ್ದವು. ಈಗ ಮತ್ತೆರಡು ಆಳ್ವರ್‌ ವಿಗ್ರಹಗಳು, ಪುರಾತನ ಕಾಲದ ಕಲ್ಲಿನ ಕಾಲುವೆ, ದೇವಸ್ಥಾನದ ಮುಂದಿನ ಮೆಟ್ಟಿಲು ಅಕ್ಕಪಕ್ಕದಲ್ಲಿರುವ ಪ್ರಾಣಿಯ ಕಲ್ಲಿನ ಚಿತ್ರ ಪತ್ತೆಯಾಗಿರುವುದರಿಂದ ಈ ಪ್ರದೇಶದಲ್ಲಿ ಮತ್ತಷ್ಟು ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಬಹುದು ಎಂಬ ಕಾರಣಕ್ಕೆ ಉತ್ಖನನ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯವರು ಮುಂದುವರಿಸಿದ್ದಾರೆ.

ತಮಿಳುನಾಡಿನ ಒಂದು ಭಕ್ತಿ ಪಂಥದವರಾಗಿರುವ 11 ಆಳ್ವರ್‌ ಸಂತರು, ವೈಷ್ಣವ ಭಕ್ತಿ ಪರಂಪರೆಯ ಪ್ರಭಾವ ವಿಜಯನಗರ ಸಾಮ್ರಾಜ್ಯದಲ್ಲಿ ಬಹಳ ಗಾಢವಾಗಿತ್ತು. ಈಗ ಇದೇ ಪ್ರದೇಶದಲ್ಲಿ ಪುರಾತನ ಕಾಲದ ಒಟ್ಟು ನಾಲ್ಕು ಆಳ್ವರ್‌ ವಿಗ್ರಹಗಳು ಪತ್ತೆಯಾಗಿವೆ. ಮತ್ತಷ್ಟು ವಿಗ್ರಹಗಳು ಇದೇ ಪ್ರದೇಶದಲ್ಲಿ ಇರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಕಲ್ಲಿನ ಕಾಲುವೆಗಳು ಪತ್ತೆ

ವಿಜಯನಗರ ಅರಸರ ಕಾಲದ ಕಲ್ಲಿನ ಕಾಲುವೆಗಳು ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಪತ್ತೆಯಾಗುತ್ತಿವೆ. ಈ ಕಲ್ಲಿನ ಕಾಲುವೆಗಳಿಂದ ಮಳೆಗಾಲದಲ್ಲಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಮತ್ತು ದೇವಸ್ಥಾನದ ಗರ್ಭಗುಡಿಯಿಂದ ದೇವಸ್ಥಾನದ ಹೊರಭಾಗಕ್ಕೆ ದೇವರ ಮೂರ್ತಿಗಳ ಅಭಿಷೇಕದ ಪವಿತ್ರ ನೀರು ಹೊರಗಡೆ ಸಾಗಿಸಲು ಈ ಕಲ್ಲಿನ ಕಾಲುವೆ ಬಳಸುತ್ತಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅನೇಕ ವರ್ಷಗಳಿಂದ ಮಣ್ಣಿನಲ್ಲಿ ಮತ್ತು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದ ಈ ಅಪರೂಪದ ಸುಮಾರು 23 ಮೀಟರ್‌ ಉದ್ದದ ಕಲ್ಲಿನ ಕಾಲುವೆ ಪತ್ತೆಯಾಗಿದ್ದು, ಇದೇ ರೀತಿಯಲ್ಲಿ ದೇವಸ್ಥಾನದ ಮುಂದಿನ ಮೆಟ್ಟಿಲು ಅಕ್ಕಪಕ್ಕದಲ್ಲಿರುವ ಕಲ್ಲಿನ ಪ್ರಾಣಿಯ ಚಿತ್ರವಿರುವ ಶಿಲೆಯೊಂದು ಸಹ ಪತ್ತೆಯಾಗಿವೆ.

ಹಜಾರ ರಾಮ ದೇವಸ್ಥಾನದ ಸಮೀಪದಲ್ಲಿ ನಿರಂತರವಾಗಿ ಉತ್ಖನನ ಕಾರ್ಯ ನಡೆಯುತ್ತಿರುವುದರಿಂದ ವಿಜಯನಗರ ಅರಸರ ಕಾಲದ ಭಗ್ನಗೊಂಡಿರುವ ಪುರಾತನ ಕಾಲದ ವಿಗ್ರಹಗಳು, ಕಲ್ಲಿನ ಕಾಲುವೆ, ಆಳ್ವರ್‌ ವಿಗ್ರಗಳು ಇನ್ನಿತರ ವಸ್ತುಗಳು ಪತ್ತೆಯಾಗುತ್ತಿರುವುದರಿಂದ ಹಜಾರ ರಾಮ ದೇವಸ್ಥಾನದ ಬಳಿ ಇನ್ನಷ್ಟು ದಿನಗಳ ಕಾಲ ಉತ್ಖನನ ಕಾರ್ಯ ನಡೆಸಲಾಗುತ್ತದೆ. ಉತ್ಖನನದಲ್ಲಿ ಮತ್ತೇನಾದರೂ ಸಿಗಬಹುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಪುರಾತತ್ವ ಅಧೀಕ್ಷಕ ಕೆ. ರಾಮಕೃಷ್ಣ ರೆಡ್ಡಿ ತಿಳಿಸಿದರು.