ಕೋಲಾರದ ಬೇತಮಂಗಲದಲ್ಲಿ 116ನೇ ವರ್ಷದ ಐತಿಹಾಸಿಕ ಒನಕೆ ಕರಗವು ಸಡಗರದಿಂದ ಜರುಗಿತು. ಇದರೊಂದಿಗೆ, ದಾವಣಗೆರೆಯ ಹೆಮ್ಮನಬೇತೂರಿನಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಮತ್ತು ವೇಮಗಲ್ನಲ್ಲಿ ದೊಡ್ಡ ದ್ಯಾವರ ಜಾತ್ರೆಯು ಭಕ್ತಿಭಾವದಿಂದ ನೆರವೇರಿತು.
ಕೋಲಾರ: ಬೇತಮಂಗಲದ ಐತಿಹಾಸಿಕ ಪ್ರಸಿದ್ಧ 116ನೇ ವರ್ಷದ ಕರಗ ಮಹೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು, ವಸಂತ್ಯುತ್ಸವದ ಪ್ರಯುಕ್ತ ನಡೆದ ‘ಒನಕೆ ಕರಗ’ ಪ್ರದರ್ಶನವು ನೋಡುಗರ ಕಣ್ಮನ ಸೆಳೆಯಿತು.
ಕರಗ ಪೂಜಾರಿ ಕೃಷ್ಣಮೂರ್ತಿ ತಲೆಯ ಮೇಲೆ ಒನಕೆ ಕರಗ ಹೊತ್ತು, ತಮಟೆ ಹಾಗೂ ವಾದ್ಯಗೋಷ್ಠಿಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ಅತ್ಯಂತ ಸಮತೋಲನದಿಂದ ಪ್ರದರ್ಶಿಸಿದ ನೃತ್ಯವು ನೆರೆದಿದ್ದ ಸಾವಿರಾರು ಭಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಕರಗ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಪೋತಲರಾಜು ಗಾವು ಸೇವೆ ನೆರವೇರಿತು.
ಧ್ವಜಾರೋಹಣದ ಮೂಲಕ ವಿಧ್ಯುಕ್ತವಾಗಿ ಆರಂಭಗೊಂಡಿದ್ದ ಮಹೋತ್ಸವವು ಹಸಿ ಕರಗ, ದೀಪೋತ್ಸವ ಹಾಗೂ ಹೂವಿನ ಕರಗದಂತಹ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮ ಮೂಲಕ ಸಾಗಿ ಬಂದು ನಡೆದ ವಸಂತೋತ್ಸವದೊಂದಿಗೆ ಕರಗ ಮಹೋತ್ಸವ ಮಕ್ತಾಯಗೊಂಡಿತು.
ಏ.2ರಂದು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೊಡ್ಡ ರಥೋತ್ಸವ
ದಾವಣಗೆರೆ: ತಾಲೂಕಿನ ಹೆಮ್ಮನಬೇತೂರು ಗ್ರಾಮದಲ್ಲಿ ಏ.2ರಂದು ಸಂಜೆ 6 ಗಂಟೆಗೆ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೊಡ್ಡ ರಥೋತ್ಸವ ಅಪಾರ ಭಕ್ತರ ಸಮ್ಮುಖ ನೆರವೇರಲಿದೆ ಎಂದು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಧರ್ಮದರ್ಶಿ ಗೌಡರ ಬಸವರಾಜ್ ತಿಳಿಸಿದ್ದಾರೆ.
ಏ.1ರಂದು ಬೆಳಗ್ಗೆ 8 ಗಂಟೆಗೆ ರಥೋತ್ಸವದ ಕಾಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ಕಂಕಣಧಾರಣೆ ನೆರವೇರಲಿದೆ. ರಾತ್ರಿ 9 ಗಂಟೆಗೆ ಸ್ವಾಮಿ ಸನ್ನಿಧಿಯಲ್ಲಿ ಸಣ್ಣ ರಥೋತ್ಸವ, ಏ.2ರಂದು ಸಂಜೆ 6 ಗಂಟೆಗೆ ದೊಡ್ಡ ರಥೋತ್ಸವ ನೆರವೇರಲಿದೆ. ಏ.3ರಂದು ಸಂಜೆ 4 ಗಂಟೆಗೆ ಬೆಲ್ಲದ ಬಂಡಿ ಉತ್ಸವ, ಏ.4ರಂದು ಬೆಳಗ್ಗೆ 8 ಗಂಟೆಗೆ ಓಕಳಿ ಕಾಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಾದಾಮಿ ಜಾತ್ರೆಯಲ್ಲಿ 30 ದಿನದಲ್ಲಿ 1 ಕೋಟಿ ಸಿಕ್ತು: ರಾಜು ತಾಳಿಕೋಟಿ ಪುತ್ರ ಭರತ್
ವೇಮಗಲ್ನಲ್ಲಿ ದೊಡ್ಡ ದ್ಯಾವರ ಜಾತ್ರೆ ಸಂಭ್ರಮ
ಕೋಲಾರ ತಾಲೂಕಿನ ವೇಮಗಲ್ನಲ್ಲಿ ಕುರುಬ ಸಮುದಾಯದ ಆರಾಧ್ಯ ದೈವವಾದ ದೊಡ್ಡ ದ್ಯಾವರ ಜಾತ್ರೆ ಭಕ್ತಿಭಾವದಿಂದ ಹಾಗೂ ವೈಭವದಿಂದ ನೆರವೇರಿತು. ಶ್ರೀ ಬೀರೇಶ್ವರ, ಶ್ರೀ ಸಿದ್ದೇದೇವರು, ಶ್ರೀ ಭತ್ತೇಶ್ವರ, ಶ್ರೀ ಬೆಳ್ಳೂರು ಬೇರೆಶ್ವರ, ಶ್ರೀ ಬಿಡದೀಶ್ವರಸ್ವಾಮಿ ದೇವಾಲಯದಲ್ಲಿ ಮನೆ ದೇವರ ದೊಡ್ಡಜಾತ್ರೆ ಭಾನುವಾರ ಆರಂಭಗೊಂಡಿತ್ತು. ದೊಡ್ಡ ಜಾತ್ರೆಯ ಕೇಂದ್ರಬಿಂದುವಾದ ಬಸವ ಸಮೇತ ಗುರುಗಳನ್ನು ಆಹ್ವಾನಿಸುವ ಕಾರ್ಯ ನಡೆದು ಸಂಜೆ ಗಂಗಾಪೂಜೆ, ನವಗ್ರಹ ಪೂಜೆ ನೆರವೇರಿತು. ಜಾತ್ರೆಯ ಅಂಗವಾಗಿ ಸೋಮವಾರ ಬೆಳಗ್ಗೆ ನಾಗದೇವತೆಗಳಿಗೆ ತನಿ ಎರೆಯುವ ಕಾರ್ಯ, ಮನೆತನದ ಹಿರಿಯರಿಗೆ ಬಟ್ಟೆ ಇಡುವುದು, ವೀರಗಾರರ ಪೂಜೆ, ದೇವರಿಗೆ ರುದ್ರಾಭಿಷೇಕ ನಡೆಯಿತು.
ಇದನ್ನೂ ಓದಿ: ಕಾಲ್ನಡಿಗೆ ಮೂಲಕ ತಿರುಮಲಕ್ಕೆ ಬರುವ ಭಕ್ತಾದಿಗಳಿಗೆ ಸಂತಸದ ಸುದ್ದಿ; ಇನ್ಮುಂದೆ ಇರಲ್ಲ ಜೀವ ಭಯ


