ಗುಂಡ್ಲುಪೇಟೆಯ ಸೋಮಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಜಾಗತಿಕ ಯುದ್ಧದ ಭೀತಿಯ ನಡುವೆ ಶಾಂತಿಯ ಮಹತ್ವ ಸಾರಿದ್ದಾರೆ. ಕೋಪ, ದ್ವೇಷದಿಂದ ಶಾಂತಿ ಅಸಾಧ್ಯ, ಆಧ್ಯಾತ್ಮಿಕ ಮಾರ್ಗ ಆತ್ಮಸ್ಥೈರ್ಯವೇ ನಿಜವಾದ ಶಕ್ತಿ ಎಂದರು.

ಚಾಮರಾಜನಗರ (ಮಾ.5): ಇಡೀ ಜಗತ್ತು ಇಂದು ಯುದ್ಧದ ಭೀತಿಯಲ್ಲಿ ನಲುಗುತ್ತಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಜಗತ್ತಿನ ಶಾಂತಿಗೆ ದಾರಿದೀಪವಾಗಬಲ್ಲ ಮಹತ್ವದ ಸಂದೇಶವೊಂದನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಯುದ್ಧದಿಂದ ಶಾಂತಿ ಅಸಾಧ್ಯ: ಆಧ್ಯಾತ್ಮಿಕ ಮಾರ್ಗವೇ ಮದ್ದು

ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಬೇಕಾದರೆ ಅದು ಕೇವಲ ಆಧ್ಯಾತ್ಮಿಕ ಮಾರ್ಗದಿಂದ ಮಾತ್ರ ಸಾಧ್ಯ. ಕೋಪ, ದ್ವೇಷ ಮತ್ತು ವೈರತ್ವದಿಂದ ಎಂದಿಗೂ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂದು ನೇರ ನುಡಿಗಳಲ್ಲಿ ಎಚ್ಚರಿಸಿದರು.

ಅಣುಬಾಂಬ್‌ಗಿಂತ 'ಆತ್ಮಸ್ಥೈರ್ಯ'ವೇ ದೊಡ್ಡದು!

ಭಾರತದ ಶಕ್ತಿಯನ್ನು ಕೊಂಡಾಡಿದ ಶ್ರೀಗಳು, ನಮ್ಮ ದೇಶ ಅಣುಬಾಂಬ್‌ಗಳ ಬಲದ ಮೇಲೆ ನಿಂತಿಲ್ಲ, ಬದಲಾಗಿ ಜನರ ಅಪಾರವಾದ ಆತ್ಮಸ್ಥೈರ್ಯದ ಮೇಲೆ ನಿಂತಿದೆ. ಇದೇ ಕಾರಣಕ್ಕೆ ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂದಿಗೂ ಶಾಂತಿ ನೆಲೆಸಿದೆ. ಆತ್ಮಸ್ಥೈರ್ಯದ ಮೂಲಕವೇ ಭಾರತ ಇಂದು ಜಗತ್ತನ್ನು ಗೆದ್ದಿದೆ ಎಂದು ಬಣ್ಣಿಸಿದರು.

ಗಾಂಧಿ ಮಂತ್ರ ಪಠಿಸಿದ ಸುತ್ತೂರು ಶ್ರೀ

ದುಂಡು ಮೇಜಿನ ಸಮ್ಮೇಳನದಲ್ಲಿ ಮಹಾತ್ಮ ಗಾಂಧೀಜಿಯವರು ಮಂತ್ರ ಪಠಿಸಿದ ಐತಿಹಾಸಿಕ ಘಟನೆಯನ್ನು ಸ್ಮರಿಸಿದ ಶ್ರೀಗಳು, ಅಹಿಂಸೆ ಮತ್ತು ಆಧ್ಯಾತ್ಮಿಕತೆಯ ಶಕ್ತಿಯನ್ನು ವಿವರಿಸಿದರು. ಇವತ್ತಿನ ಜಗತ್ತಿನಲ್ಲಿ ಮಹಾ ಘೋರವಾದ ಯುದ್ಧದ ಸನ್ನಿವೇಶಗಳಿವೆ. ಸಹಸ್ರಾರು ಜನರ ಕೊಲೆ, ಸುಲಿಗೆ ಮತ್ತು ಪ್ರಾಣ ಹಾನಿಯಾಗುತ್ತಿದೆ. ಈ ಕ್ರೌರ್ಯಕ್ಕೆ ಶೀಘ್ರವೇ ಪರಿಹಾರ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.