Asianet Suvarna News Asianet Suvarna News

Kashi Vishwanath Dham: ಸನಾತನ ಧರ್ಮ, ಸಂಸ್ಕೃತಿ, ಆಧ್ಯಾತ್ಮ ಪರಂಪರೆ ರಕ್ಷಕ ಪ್ರಧಾನಿ ಮೋದಿ

ಸಾಕಷ್ಟು ಸವಾಲುಗಳಿದ್ದರೂ ಅಹಲ್ಯಾಬಾಯಿ ಹೋಳ್ಕರ್‌ ದೇಗುಲಗಳ ಒಂದೇ ಒಂದು ಕಲ್ಲೂ ಆಚೀಚೆ ಹೋಗದಂತೆ ನೋಡಿಕೊಂಡರು. ಮರುನಿರ್ಮಾಣ ಮಾಡಿ ಭಾರತ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಹಿಂದೂಧರ್ಮಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. 

PM Narendra Modi unveiled Kashi Vishwanath Dham expected to boost tourism hls
Author
Bengaluru, First Published Dec 14, 2021, 1:18 PM IST

ಭಾರತ ಜ್ಞಾನ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ಆಧ್ಯಾತ್ಮದ ಭೂಮಿ. ಶತಮಾನಗಳಿಂದಲೂ ಭಾರತ ಮಾನವೀಯತೆ ಮತ್ತು ಜಾಗತಿಕ ಶಾಂತಿಯ ಪಥವನ್ನು ಜಗತ್ತಿಗೆ ತೋರಿಸುತ್ತಿದೆ. ಸುದೈವ ಕುಟುಂಬಕಂ (ವಿಶ್ವವೇ ಕುಟುಂಬ) ಸಂದೇಶ ಅದರಲ್ಲಿ ಮುಖ್ಯವಾದುದು. ವೇದಗಳ ಕಾಲದಿಂದಲೂ ನಮ್ಮ ಪವಿತ್ರ ಭೂಮಿ ಮೇಲೆ ಆಕ್ರಮಣಕಾರರಿಂದ ದಾಳಿಗಳು ನಡೆಯುತ್ತಿವೆ. ಆದರೆ ನಮ್ಮ ಶ್ರೀಮಂತ ಕಲೆ ಮತ್ತು ಸಂಸ್ಕೃತಿ, ಧರ್ಮ ಮತ್ತು ತತ್ವಜ್ಞಾನ, ವಿಜ್ಞಾನ, ಸಾಹಿತ್ಯ ಇತ್ಯಾದಿ ಎಲ್ಲವೂ ಮಹಾನ್‌ ಸಂತರು ಮತ್ತು ಋುಷಿಮುನಿಗಳ ಆಶ್ರಯದಲ್ಲಿ ಶತಮಾನಗಳಿಂದ ಉಳಿದುಕೊಂಡಿವೆ.

ಅಹಲ್ಯಾಬಾಯಿ ಸ್ಫೂರ್ತಿ

ಚಿಕ್ಕಂದಿನಿಂದಲೂ ಆಧ್ಯಾತ್ಮದ ಸತ್ಯ, ಶಕ್ತಿಯ ಅನ್ವೇಷಣೆಯಲ್ಲಿದ್ದೇನೆ. ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರೂ ಯಾವುದೋ ಒಂದು ಪವಿತ್ರ ಶಕ್ತಿಯ ಮಧ್ಯಪ್ರವೇಶ ನನಗೆ ಮರುಜನ್ಮ ನೀಡಿತು. ಅದು 18 ವರ್ಷದವನಿದ್ದಾಗ ನನ್ನನ್ನು ಹಿಮಾಲಯಕ್ಕೆ ಕೊಂಡೊಯ್ದಿತ್ತು. ಸತ್ಯ ಮತ್ತು ಜ್ಞಾನೋದಯದ ಅನ್ವೇಷಣೆಯ ಹಾದಿಯಲ್ಲಿ ಕೇದಾರನಾಥ ಧಾಮಕ್ಕೂ ಅನೇಕ ಬಾರಿ ಭೇಟಿ ನೀಡಿದ್ದೇನೆ.

Kashi Vishwanath Temple: ಕಾಶಿಯ ಕುರಿತ ಆಸಕ್ತಿಕರ ಸಂಗತಿಗಳಿವು

ಅಲ್ಲಿ ಮರಾಠ ರಾಣಿ ದೇವಿ ಅಹಲ್ಯಾಬಾಯಿ ಹೋಳ್ಕರ್‌ ಅವರು ಗಂಗೋತ್ರಿಯಿಂದ ರಾಮೇಶ್ವರದ ವರೆಗೆ ಮತ್ತು ದ್ವಾರಕಾದಿಂದ ಗಯಾದ ವರೆಗೆ ಅನೇಕ ಹಿಂದೂ ದೇಗುಲಗಳನ್ನು ಪುನರ್‌ ನಿರ್ಮಾಣ ಮಾಡಿದ, ಪುನರುಜ್ಜೀವನಗೊಳಿಸಿದ ವೀರ ಕತೆಯನ್ನು ತಿಳಿದುಕೊಂಡಿದ್ದೇನೆ. ಅಂಥ ಮಹಾನ್‌ ಮಹಿಳೆಯಿಂದ ಪುನಃ ಗತವೈಭವ ಪಡೆದ ದೇಗುಲಗಳಲ್ಲಿ ಕೇದಾರನಾಥ ಧಾಮ, ಶ್ರೀ ಓಂಕಾರೇಶ್ವರ, ಕಾಶಿ ವಿಶ್ವನಾಥ, ಜಗನ್ನಾಥ ಪುರಿ ಮತ್ತು ಸೋಮನಾಥ ದೇವಾಲಯಗಳು ಪ್ರಮುಖವಾದವು.

ರಕ್ಷಣೆ ಮಾಡುವವರು ಯಾರು?

ನನ್ನ ಆಧ್ಯಾತ್ಮದ ಅನ್ವೇಷಣೆಯು ದೇಶದ ಹಲವಾರು ತೀರ್ಥಕ್ಷೇತ್ರಗಳಿಗೆ ನನ್ನನ್ನು ಕರೆದುಕೊಂಡು ಹೋಗಿದೆ. ಮರಾಠ ರಾಣಿಯಿಂದ ಜೀರ್ಣೋದ್ಧಾರಗೊಂಡ ಹಲವು ದೇಗುಲಗಳಿಗೂ ಭೇಟಿ ನೀಡಿದ್ದೇನೆ. ಕಾಶಿ ಯಾತ್ರೆಯಲ್ಲಿದ್ದಾಗ ಅಹಲ್ಯಾಬಾಯಿ ಹೋಳ್ಕರ್‌ ಅವರ ಶ್ರೇಷ್ಠ ಪರಂಪರೆಯನ್ನು ಯಾರು ಮುಂದುವರೆಸುತ್ತಾರೆ ಎಂದು ಯೋಚಿಸಿದ್ದೆ.

ನಮ್ಮ ಶ್ರೇಷ್ಠ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆ, ವಿದೇಶಿ ಆಕ್ರಮಣಕಾರರಿಂದ ದಾಳಿಗೊಳಗಾದ ನಮ್ಮ ಪುರಾತನ ದೇಗುಲಗಳ ಜೀರ್ಣೋದ್ಧಾರ ಮತ್ತು ಪುನರ್‌ನಿರ್ಮಾಣ ಮಾಡುವವರು ಯಾರು ಎಂದು ಚಿಂತಿಸಿದ್ದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆ, ನಮ್ಮ ಪ್ರಾಚೀನ ಕಲೆ ಮತ್ತು ಸಂಸ್ಕೃತಿ ಮತ್ತು ಹಿಂದೂ ಧರ್ಮದ ಮಹಾನ್‌ ಕೇಂದ್ರಗಳ ನಿಧಾನಗತಿಯ ಅವನತಿಯು ನನ್ನನ್ನು ವಿಚಲಿತಗೊಳಿಸಿತ್ತು.

ಸದ್ಯ ಸನಾತನ ನಗರ ಕಾಶಿಯಲ್ಲಿ ಬಾಬಾ ವಿಶ್ವನಾಥ ಧಾಮ ಜೀರ್ಣೋದ್ಧಾರವಾಗಿ ಮರುನಿರ್ಮಾಣಗೊಂಡು ಜಗತ್ತಿಗೆ ಸಮರ್ಪಿತವಾಗಿದ್ದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಪುರಾತನ ಆಧ್ಯಾತ್ಮಿಕ ಶಕ್ತಿ ಕೇಂದ್ರಗಳ ಉಳಿವಿಗಾಗಿ, ಸುರಕ್ಷತೆಗಾಗಿ ಮತ್ತು ಶ್ರೇಷ್ಠ ಸನಾತನ ಧರ್ಮದ ಉಳಿವಿಗಾಗಿ, ರಕ್ಷಣೆಗಾಗಿ ಶ್ರಮಿಸುವ ಮಣ್ಣಿನ ಮಕ್ಕಳು ಇನ್ನೂ ಇದ್ದಾರೆ ಎಂದು ನನ್ನ ಅಂತರಂಗವೀಗ ಹೇಳುತ್ತಿದೆ. ಅಂಥ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಒಬ್ಬರು. ಅವರ ನಾಯಕತ್ವದಲ್ಲಿ ‘ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ’ ದಂಥ ಆಚರಣೆಗಳ ಮೂಲಕ ದೇಶವು ಆಧ್ಯಾತ್ಮಿಕ ಗುರಿಗಳನ್ನು ತಲುಪುತ್ತಿದೆ. ವೈಯಕ್ತಿಕವಾಗಿ ಶ್ರೀ ಕಾಶಿ ವಿಶ್ವನಾಥ ಧಾಮದಿಂದ ಪವಿತ್ರ ಗಂಗೆಯನ್ನು ಕಣ್ತುಂಬಿಕೊಳ್ಳಲು ನಾನು ಕಾತರನಾಗಿದ್ದೇನೆ.

ಅಹಲ್ಯಾ ದಾರಿಯಲ್ಲಿ ಮೋದಿ

ಸಾಕಷ್ಟುಸವಾಲುಗಳ ನಂತರವೂ ಅಹಲ್ಯಾಬಾಯಿ ಹೋಳ್ಕರ್‌ ದೇಗುಲಗಳ ಒಂದೇ ಒಂದು ಕಲ್ಲೂ ಆಚೀಚೆ ಹೋಗದಂತೆ ನೋಡಿಕೊಂಡರು. ಮರುನಿರ್ಮಾಣ ಮಾಡಿ ಭಾರತ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಹಿಂದೂಧರ್ಮಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಪ್ರಧಾನಿ ನರೇಂದ್ರ ಮೋದಿಯೂ ನಮ್ಮ ಶ್ರೇಷ್ಠ ಧಾರ್ಮಿಕ ಮತ್ತು ಆಧ್ಯಾತ್ಮ ಕೇಂದ್ರಗಳನ್ನು ಮರುನಿರ್ಮಾಣ ಮಾಡುವ ಮೂಲಕ ಅವರ ದಾರಿಯಲ್ಲೇ ಸಾಗುತ್ತಿದ್ದಾರೆ. ಕೇದಾರನಾಥ ಧಾಮದ ಮರುನಿರ್ಮಾಣ, ಹಾಗೆಯೇ ಶ್ರೇಷ್ಠ ಸಂತ ಮತ್ತು ಗುರು ಆದಿ ಶಂಕರಾಚಾರ‍್ಯರ ಸಮಾಧಿ ಸ್ಥಳದ ಮರುನಿರ್ಮಾಣಕ್ಕೆ ಸಾಕ್ಷಿಯಾಗಿ ಇದನ್ನು ಹೇಳುತ್ತಿದ್ದೇನೆ.

ಅತ್ಯಂತ ಸಂಕೀರ್ಣ ಅಯೋಧ್ಯೆ ರಾಮ ಮಂದಿಯ ವಿಚಾರ ಅಷ್ಟೊಂದು ಸೌಹಾರ್ದಯುತವಾಗಿ ಬಗೆಹರಿಯುತ್ತದೆಂದು ಯಾರೂ ಯೋಚಿಸಿರಲಿಲ್ಲ. ಸದ್ಯ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಮನ್ನಣೆ ಯಾರಿಗೆ ಸಲ್ಲಬೇಕು? ಅಷ್ಟೇ ಅಲ್ಲ, ನರೇಂದ್ರ ಮೋದಿ ವಿದೇಶಗಳಲ್ಲಿಯೂ ಕೆಲವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ.

ಯೋಗಕ್ಕೆ ಜಾಗತಿಕ ಮನ್ನಣೆ

ಭಾರತದ ಪುರಾತನ ವಿಜ್ಞಾನ ‘ಯೋಗ’ಕ್ಕೆ ಜಾಗತಿಕ ಮಾನ್ಯತೆ ಲಭಿಸುವಂತೆ ಮಾಡಿದ ಪ್ರಧಾನಿ ಮೋದಿ ಅವರ ಸಾಧನೆಯನ್ನು ನಾನಿಲ್ಲಿ ಉಲ್ಲೇಖಿಸಲೇಬೇಕು. ಯೋಗ ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಜೀವನದ ಅವಿಭಾಜ್ಯ ಅಂಗಗಳಲ್ಲಿ ಒಂದು. ಸದ್ಯ ಈ ಯೋಗ ಭಾರತ ಮಾತ್ರವಲ್ಲದೆ ಸಾಗರೋತ್ತರದ ಕೋಟ್ಯಂತರ ಜನರ ಸಮಸ್ಯೆಗಳಿಗೆ ಪರಿಹಾರವಾಗಿದೆ. ಇಡೀ ಜಗತ್ತಿನಾದ್ಯಂತ ಜನರ ಜೀವನ ವಿಧಾನವಾಗಿ ಮಾರ್ಪಟ್ಟಿದೆ. ಆಧುನಿಕ ವಿಜ್ಞಾನವೂ ಯೋಗದ ಮಹತ್ವವನ್ನು ಸಾರುತ್ತಿದೆ.

10 ವರ್ಷದವನಿದ್ದಾಗಲೇ ಯೋಗ ಮತ್ತು ಪ್ರಾಣಾಯಾಮ ಮಾಡಲು ಆರಂಭಿಸಿದ್ದೆ. ಮತ್ತು ಇದೇ ಯೋಗ, ಪ್ರಾಣಾಯಾಮದಿಂದ ಇವತ್ತು ನಾನು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿದ್ದೇನೆ. ಸಾಂಕ್ರಾಮಿಕ ಸಂದರ್ಭದಲ್ಲಿ ಜನರಿಗೆ ಯೋಗದ ನಿಜವಾದ ಶಕ್ತಿಯ ಅರಿವಾಗಿದೆ. ಅದು ಇಂಥ ಸವಾಲುಗಳ ಸಂದರ್ಭದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಫಿಟ್‌ ಆಗಿರುವುದು ಹೇಗೆ ಎನ್ನುವುದನ್ನು ಕಲಿಸಿದೆ. ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ನೀಡಲು ವಿಶ್ವಸಂಸ್ಥೆಯನ್ನು ಮನವೊಲಿಸುವ ಮೂಲಕ ಸಂಘಟಿತ ಪ್ರಯತ್ನ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮಕ್ಕೆ ಭಾರತ ಮತ್ತು ಇಡೀ ಜಗತ್ತು ಎಂದಿಗೂ ಅವರಿಗೆ ಕೃತಜ್ಞವಾಗಿರುತ್ತದೆ.

Kashi Vishwanath Corridor: ಮರಳಲಿದೆ ಗತ ವೈಭವ, ಮೋದಿ ಕನಸು ನನಸು

ಮೋದಿ ಯಶಸ್ವಿ ಯೋಜನೆಗಳು

ಭಾರತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪತಿವರ್ತನೆಗೆ ಒಳಗಾಗುತ್ತಿದೆ. ಅವರ ‘ಮನ್‌ ಕೀ ಬಾತ್‌’ ಕಾರ‍್ಯಕ್ರಮದಲ್ಲಿ ಪ್ರಧಾನಿ ಮೋದಿ ಬ್ರೆಜಿಲ್‌ನ ಜೋನಸ್‌ ಮಸೆತ್ತಿ ಅವರನ್ನು ಉಲ್ಲೇಖಿಸಿ, ವೇದ ಹಾಗೂ ಭಗವದ್ಗೀತೆಯ ಪಠ್ಯವನ್ನು ರಿಯೋ ಡಿ ಜನೈರೋಗೆ ಕೊಂಡೊಯ್ದ ಅವರ ಶ್ರಮವನ್ನು ಕೊಂಡಾಡಿದರು. ಅನಿವಾಸಿ ಭಾರತೀಯರಿಗೆ ಜಾಗತಿಕ ಶಾಂತಿಗೆ ಕೊಡುಗೆ ನೀಡುವಂತೆ ಕರೆ ನೀಡಿದರು. ಪ್ರಧಾನಿ ಮೋದಿ ಅವರು ಕೋಟ್ಯಂತರ ಜನರ ಮೇಲೆ ಬೀರಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವ ಎಂಥದ್ದೇ ಸವಾಲುಗಳು ಮತ್ತು ಕಷ್ಟಗಳು ಇದ್ದರೂ ಇತಿಹಾಸದಲ್ಲಿ ಎಂದೆಂದಿಗೂ ಶಾಶ್ವತವಾಗಿರುತ್ತದೆ.

ಅವುಗಳಲ್ಲಿ ಬಡವರಿಗೆ ಶೌಚಾಲಯ, ಸ್ವಚ್ಛ ಭಾರತ ಅಭಿಯಾನ, ಉಜ್ವಲಾ ಯೋಜನೆ, ಬೇಟಿ ಬಚಾವೋ, ಬೇಟಿ ಪಡಾವೋ, ನೀರು ಸಂರಕ್ಷಣೆ, ನಮಾಮಿ ಗಂಗೆ ಮತ್ತಿತರ ಯೋಜನೆಗಳು ಪ್ರಮುಖವಾದವು. ಈ ಎಲ್ಲಾ ಯೋಜನೆಗಳ ಯಶಸ್ಸು ಭಾರತೀಯ ನಾಗರಿಕರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪುನರುಜ್ಜೀವನ ಅಲ್ಲದೆ ಮತ್ತೇನೂ ಅಲ್ಲ.

- ಶ್ರೀ ಎಂ, ಆಧ್ಯಾತ್ಮ ಗುರು, ಚಿಂತಕ

Follow Us:
Download App:
  • android
  • ios