ಸೌಜನ್ಯ ಪ್ರಕರಣ ಬಳಸಿ ಸಾರ್ವಜನಿಕ ಭಾವನೆ ಕೆರಳಿಸುವ ಪ್ರಯತ್ನ ನಡೆಸಿದ ಮಹೇಶೆ ಶೆಟ್ಟಿ ತಿಮರೋಡಿಯನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ತಮ್ಮ ಗಡೀಪಾರು ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.
ನವದೆಹಲಿ (ಜು.13) ಕರ್ನಾಟಕದಲ್ಲಿ ಭಾರಿ ಕೋಲಾಹಲ ಮೂಡಿಸಿದ ಸೌಜನ್ಯ ಪ್ರಕರಣ ಹಾಗೂ ಈ ಪ್ರಕರಣ ಹಿಡಿದು ಮಾಡಿದ ಹೋರಾಟ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಅಂಶವನ್ನು ಉಲ್ಲೇಖಿಸಿದೆ. ಸೌಜನ್ಯ ಪ್ರಕರಣವನ್ನು ಬಳಸಿಕೊಂಡು ಧರ್ಮಸ್ಥಳ ವಿರುದ್ಧ ಭಾರಿ ಪ್ರತಿಭಟನೆ, ಗಂಭೀರ ಆರೋಪಗಳನ್ನು ಮಾಡಿದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸೌಜನ್ಯ ಪ್ರಕರಣವನ್ನು ಬಳಸಿಕೊಂಡು ಸಾರ್ವಜನಿಕ ಭಾವನೆ ಕೆರಳಿಸುವ ಪ್ರಯತ್ನವನ್ನು ಮಹೇಶ್ ಶೆಟ್ಟಿ ತಿಮರೋಡಿ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಗಡೀಪಾರು ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಮಹೇಶ್ ಶೆಟ್ಟಿ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ
ಸೌಜನ್ಯ ಪ್ರಕರಣ, ಬುರುಡೆ ಪ್ರಕರಣಗಳಲ್ಲಿ ಬುರುಡೆ ಬಿಟ್ಟ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕೆಲ ಪ್ರಕರಣಗಳು ದಾಖಲಾಗಿದೆ. ಇದೇ ವೇಳೆ ಮಹೇಶ್ ಶೆಟ್ಟಿ ಗಡೀಪಾರಿಗೆ ಆದೇಶ ನೀಡಲಾಗಿತ್ತು. ಈ ಆದೇಶ ಪ್ರಶ್ನಿಸಿ ತಿಮರೋಡಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಆದರೆ ತಿಮರೋಡಿ ಸಲ್ಲಿಸಿದ್ದ ಅರ್ಜಿ ಪ್ರಶ್ನಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಕಾನೂನು ಪ್ರಕಾರ ಸೂಕ್ತ ಸಕ್ಷಮ ಪ್ರಾಧಿಕಾರವನ್ನೇ ಸಂಪರ್ಕಿಸುವಂತೆ ನಿರ್ದೇಶಿಸಿದೆ. ಮಹೇಶ್ ಶೆಟ್ಟಿ ಗಡೀಪಾರು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಲಭ್ಯವಿರುವ ಶಾಸನಬದ್ಧ ಪರಿಹಾರಗಳನ್ನು ಬಳಸಿಕೊಳ್ಳುವ ಬದಲು ನೇರವಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವುದರ ಕುರಿತು ನ್ಯಾಯಪೀಠವು ಪ್ರಶ್ನಿಸಿದೆ.
ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ
ಮಹೇಶ್ ಶೆಟ್ಟಿ ವಕೀಲರು ಸುಪ್ರೀಂ ಕೋರ್ಟ್ನಲ್ಲಿ ವಿಚಿತ್ರ ವಾದ ಮಂಡಿಸಿದ್ದರು. ಮಹೇಶ್ ಶೆಟ್ಟಿ ಗಡೀಪಾರು ಪ್ರಕರಣ ಹಾಗೂ ಸೌಜನ್ಯ ಪ್ರಕರಣ ಜೋಡಿಸಿ ವಾದ ಮಂಡಿಸಿದ್ದರು. ಇಷ್ಟೇ ಅಲ್ಲ ಸ್ಥಳೀಯ ದೇವಸ್ಥಾನದ ಪ್ರಮುಖರು ತಮ್ಮನ್ನು ಗುರಿಯಾಗಿಸಿದ್ದಾರೆ. ಹೀಗಾಗಿ ತಮ್ಮ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಾದ ಮಂಡಿಸಿದ್ದರು. ಈ ವಾದ ಕೇಳಿ ಗರಂ ಆದ ಸುಪ್ರೀಂ ಕೋರ್ಟ್, ಅಸಂಬಂಧಿತ ವಿಷಯಗಳನ್ನು ಬಳಸಿ ಸಾರ್ವಜನಿಕ ಭಾವನೆಗಳನ್ನು ಕೆರಳಿಸುವುದು ಅಥವಾ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ತರಾಟೆ ತೆಗೆದುಕೊಂಡಿತು.
ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದ ಸುಪ್ರೀಂ ಕೋರ್ಟ್, ಅರ್ಜಿದಾರರಿಗೆ ಪರಿಹಾರ ನೀಡಲೂ ನಿರಾಕರಿಸಿದೆ. ಊಹಾತ್ಮಕ ವಾದ ಮಂಡಿಸಿದ ವಕೀಲರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ. ನ್ಯಾಯಾಲಯದಲ್ಲಿ ಜೂಜಾಟ ಬೇಡ. ಇಲ್ಲಿ ಅವಕಾಶಗಳಿಲ್ಲ. ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸಂಜಯ್ ಕುಮಾರ್ ಹಾಗೂ ನ್ಯಾಯಮೂರ್ತಿ ಶ್ರೀ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ನ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು.


