ಧಾರವಾಡದ (Dharwad) ಕೃಷಿ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಿಗೆ ಅಡುಗೆ ತಯಾರಿಸಲು ಈ ಯೋಜನೆಯನ್ನು ಅಳವಡಿಲಾಗಿದೆ. ಈ ಸೋಲಾರ್ ಪ್ಯಾನೆಲ್‌ನಿಂದ (Solar Pannel) ಹಬೆ ಉತ್ಪಾದಿಸಿ, ಆ ಹಬೆಯ ಮೂಲಕ ಅಡುಗೆ ಮಾಡಲು ಈ ವ್ಯವಸ್ಥೆಯನ್ನು ಅಳವಡಿಲಾಗಿದೆ. ಈ ಯೋಜನೆಗೆ 3 ಕೋಟಿ ರೂಪಾಯಿ ವ್ಯಯಿಸಲಾಗಿದೆ.

ಧಾರವಾಡ (ಡಿ. 28): ನಮ್ಮಲ್ಲಿ ಯಾವುದೇ ಯೋಜನೆಗಳು ಬಂದರೂ ಅಧಿಕಾರಿಗಳಿಗೆ ಆರಂಭದಲ್ಲಿ ಇರೋ ಉತ್ಸಾಹ ಬಳಿಕ ಇರೋದೇ ಇಲ್ಲ. ಅದರಲ್ಲೂ ವಿಶ್ವವಿದ್ಯಾಲಯಗಳಲ್ಲಂತೂ ಅಧಿಕಾರಿಗಳನ್ನು ಪ್ರಶ್ನೆ ಮಾಡೋರೇ ಇರೋದಿಲ್ಲ ಅನ್ನೋದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ. ಧಾರವಾಡದ (Dharwad) ಕೃಷಿ ವಿಶ್ವವಿದ್ಯಾಲಯ ಹಲವಾರು ಸಂಗತಿಗಳಿಗೆ ಹೆಸರು ಮಾಡಿದೆ. ಅಂಥವುಗಳ ನಡುವೆಯೇ ಇಲ್ಲೊಂದು ಸೋಲಾರ್ ಯೋಜನೆಯ (Solar Pannel) ಕಥೆ ವ್ಯಥೆಯಾಗಿ ಕೂತಿದೆ. 

Add Asianetnews Kannada as a Preferred SourcegooglePreferred

"

 ಧಾರವಾಡದ ಕೃಷಿ ವಿಶ್ವವಿದ್ಯಾಲಯದ (Dharwad Agriculture University) ಹಾಸ್ಟೆಲ್‌ಗಳಿಗೆ ಅಡುಗೆ ತಯಾರಿಸಲು ಈ ಯೋಜನೆಯನ್ನು ಅಳವಡಿಲಾಗಿದೆ. ಈ ಸೋಲಾರ್ ಪ್ಯಾನೆಲ್‌ನಿಂದ ಹಬೆ ಉತ್ಪಾದಿಸಿ, ಆ ಹಬೆಯ ಮೂಲಕ ಅಡುಗೆ ಮಾಡಲು ಈ ವ್ಯವಸ್ಥೆಯನ್ನು ಅಳವಡಿಲಾಗಿದೆ. ಈ ಯೋಜನೆಗೆ 3 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಅಚ್ಚರಿಯ ಸಂಗತಿ ಏನೆಂದರೆ, ಇಷ್ಟೆಲ್ಲಾ ಖರ್ಚು ಮಾಡಿ ಅಳವಡಿಸಲಾಗಿರೋ ಈ ಪ್ಯಾನೆಲ್ ಗಳನ್ನು ಇದುವರೆಗೂ ಉಪಯೋಗ ಮಾಡಿಕೊಳ್ಳುತ್ತಿಲ್ಲ. ಈಗಲೂ ಕೂಡ ಹಾಸ್ಟೆಲ್‌ಗಳಲ್ಲಿ ಗ್ಯಾಸ್ ಬಳಸಿಯೇ ಅಡುಗೆ ಮಾಡಲಾಗುತ್ತಿದೆ. 

ಕೇಂದ್ರ ಸರಕಾರದ ಐ.ಸಿ.ಆರ್. ಫಂಡ್‌ನಲ್ಲಿ ಧಾರವಾಡ, ಶಿರಸಿ ಮತ್ತು ವಿಜಯಪುರ ಕೃಷಿ ಕಾಲೇಜುಗಳ ಹಾಸ್ಟೆಲ್ ಗಳಿಗೆ ಒಟ್ಟು 9 ಘಟಕಗಳನ್ನು ಹಾಕಲಾಗಿದೆ. ಈ ಘಟಕಗಳನ್ನು ಪಂಜಾಬ್ ಮೂಲದ ಸಾಫ್ಟ್ ಟೆಕ್ ರಿನೆವಬಲ್ ಎಜೆನ್ಸೀಸ್ ಅನ್ನೋ ಕಂಪನಿ ಅಳವಡಿಸಿದೆ. ಎರಡು ಹಾಸ್ಟೆಲ್‌ಗಳಲ್ಲಿ 6 ಡಿಶ್ ಮತ್ತು 7 ಹಾಸ್ಟೆಲ್‌ಗಳಲ್ಲಿ 4 ಡಿಶ್ ಹಾಕಲಾಗಿದೆ. ಅಷ್ಟೇ ಅಲ್ಲ 5 ವರ್ಷಗಳವರೆಗೆ ಇದನ್ನು ನೀಡಿರೋ ಕಂಪನಿಗೆ ನಿರ್ವಹಣೆಯ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ ಇವುಗಳನ್ನು ಅಳವಡಿಸಿ ವರ್ಷಗಳೇ ಕಳೆದರೂ ಇದುವರೆಗೂ ಇವು ಉಪಯೋಗವೇ ಆಗುತ್ತಿಲ್ಲ.

ಕೃಷಿ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳೇ ಅಡುಗೆಯ ಜವಾಬ್ದಾರಿ ತೆಗೆದುಕೊಳ್ಳುವ ವ್ಯವಸ್ಥೆ ಇದೆ. ಪ್ರತಿ ತಿಂಗಳ ಕೊನೆಗೆ ಖರ್ಚಾದ ಹಣದ ಲೆಕ್ಕವನ್ನು ಮಾಡಲಾಗುತ್ತೆ. ಅದನ್ನು ಎಲ್ಲ ವಿದ್ಯಾರ್ಥಿಗಳಿಗೂ ಶೇರ್ ಮಾಡಿಕೊಳ್ಳಬೇಕು. ಇದೀಗ ಹಾಸ್ಟೆಲ್‌ಗಳಲ್ಲಿ ಅಡುಗೆ ಮಾಡಲು ಎಲ್.ಪಿ.ಜಿ. ಬಳಸಲಾಗುತ್ತಿದೆ. ಒಂದು ಹಾಸ್ಟೆಲ್‌ಗೆ ಒಂದು ತಿಂಗಳಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಗ್ಯಾಸ್‌ಗಾಗಿಯೇ ಖರ್ಚು ಮಾಡಬೇಕಾಗುತ್ತದೆ. ಇಂಥ ಒಟ್ಟು 9 ಹಾಸ್ಟೆಲ್‌ಗಳಿವೆ. ಹೀಗಾಗಿ ತಿಂಗಳಿಗೆ ಗ್ಯಾಸ್ ಗೆ ಖರ್ಚು ಮಾಡೋ ಹಣ ಅಂದಾಜು 9 ಲಕ್ಷ ರೂಪಾಯಿ. ಇದೇ ಕಾರಣಕ್ಕೆ ಸೋಲಾರ್ ಬಳಸಿ, ಸ್ಟೀಮ್ ಉತ್ಪಾದನೆ ಮಾಡಿ, ಅದರಿಂದ ಅಡುಗೆ ತಯಾರಿಸಿದರೆ ವಿದ್ಯಾರ್ಥಿಗಳಿಗೆ ಸಾಕಷ್ಟು ಹಣ ಉಳಿತಾಯವಾಗಲಿದೆ. ಅದರೊಂದಿಗೆ ಗ್ಯಾಸ್ ಕೂಡ ಉಳಿಯುತ್ತದೆ. ಆದರೆ ಯೂನಿಟ್ ಹಾಕಿ ಇಷ್ಟು ದಿನಗಳಾದರೂ ಅವು ಶುರು ಆಗಿಯೇ ಇಲ್ಲ. ಇನ್ನು ಈ ಬಗ್ಗೆ ವಿವಿಯ ಕುಲಪತಿ ಡಾ. ಎಂ.ಬಿ. ಚೆಟ್ಟಿ ಅವರನ್ನು ಕೇಳಿದರೆ, ಎಲ್ಲ ಘಟಕಗಳು ಶುರುವಾಗಿವೆ ಅನ್ನುತ್ತಾರೆ. ಬಳಿಕ ಮಾಹಿತಿ ಪಡೆದು, ಕೊರೋನಾ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಬಂದಿರಲಿಲ್ಲ. ಹೀಗಾಗಿ ಈ ಬಗ್ಗೆ ವಿಚಾರಿಸಿ, ಆದಷ್ಟು ಬೇಗನೇ ಇವು ಶುರು ಮಾಡಲು ಸೂಚನೆ ನೀಡುತ್ತೇನೆ ಅನ್ನುತ್ತಾರೆ.

ರಾಜ್ಯ ಹಾಗೂ ಅಕ್ಕಪಕ್ಕದ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಇಲ್ಲಿ ಕಲಿಯಲು ಬರುತ್ತಾರೆ. ಈ ವಿದ್ಯಾರ್ಥಿಗಳ ಪೈಕಿ ಅನೇಕರು ಕೃಷಿ ಕುಟುಂಬ ಹಾಗೂ ಬಡತನದಿಂದ ಬಂದವರು ಇರುತ್ತಾರೆ. ಅವರಿಗೆ ತಿಂಗಳಿಗೆ ನಿಗದಿಯಾಗೋ ಮೆಸ್ ಬಿಲ್ ಕೊಡೋದು ಕೂಡ ಕಷ್ಟವೇ. ಇಂಥದ್ದರಲ್ಲಿ ಮೆಸ್ ಬಿಲ್ ಕಡಿಮೆ ಬಂದರೆ ಸಾಕಷ್ಟು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಈ ಸೋಲಾರ್ ಸ್ಟೀಮ್ ಘಟಕಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿವೆ. ಆದರೆ ಎಲ್ಲ ಇನ್ಸ್ಟಾಲ್ ಆದರೂ ಉಪಯೋಗಕ್ಕೆ ಬಾರದೇ ಇದ್ದರೆ, ಇವುಗಳನ್ನು ಅಳವಡಿಸಿದರೂ ಏನು ಪ್ರಯೋಜನ ಅನ್ನೋ ಪ್ರಶ್ನೆಗೆ ಅಧಿಕಾರಿಗಳೇ ಉತ್ತರ ನೀಡಬೇಕು.