ಶಿವಮೊಗ್ಗದ ಹಿರಿಯ ಪತ್ರಕರ್ತ ಆಶ್ರಯ ನಾಗರಾಜ್ ಅವರ ಪತ್ನಿ ಪ್ರಭಾವತಿ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹದ ಜೊತೆಗೆ ಸಾಕು ನಾಯಿಯೂ ಮೃತಪಟ್ಟಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ (ಜೂ.14): ಶಿವಮೊಗ್ಗದಲ್ಲಿ ಮನಕಲಕುವ ಘಟನೆಯೊಂದು ಸಂಭವಿಸಿದೆ. ನಗರದ ಹಿರಿಯ ಪತ್ರಕರ್ತ ಹಾಗೂ 'ಜನ ವಾರ್ತೆ' ದಿನಪತ್ರಿಕೆಯ ಆಶ್ರಯ ನಾಗರಾಜ್ (Janavarthe journalist ashraya nagaraj) ಅವರ ಪತ್ನಿ ಪ್ರಭಾವತಿ (57) ಅವರು ತಮ್ಮ ನಿವಾಸದಲ್ಲಿ ನಿಗೂಢವಾಗಿ (prabhavathi found dead suspicious) ಸಾವನ್ನಪ್ಪಿದ್ದಾರೆ. ವಿಶೇಷವೆಂದರೆ, ಅವರ ಮೃತದೇಹದ ಜೊತೆಗೆ ಅವರ ಸಾಕು ನಾಯಿ (Pet dog) ಕೂಡ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆಯ ವಿವರ:
ಶಿವಮೊಗ್ಗದ ರವೀಂದ್ರ ನಗರದ 1ನೇ (Shivamogga Ravindra Nagar) ಅಡ್ಡರಸ್ತೆಯಲ್ಲಿರುವ ಮನೆಯಲ್ಲಿ ಪ್ರಭಾವತಿ ಅವರು ವಾಸವಿದ್ದರು. ಕಳೆದ ಕೆಲವು ದಿನಗಳಿಂದ ಮನೆಯಿಂದ ಯಾರು ಹೊರಬಂದಿರಲಿಲ್ಲ ಎನ್ನಲಾಗಿದೆ. ಆದರೆ, ಇಂದು ಮನೆಯಿಂದ ವಿಪರೀತ ದುರ್ವಾಸನೆ ಬರಲಾರಂಭಿಸಿದಾಗ ಗಾಬರಿಗೊಂಡ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಮೃತದೇಹ:
ಸ್ಥಳಕ್ಕೆ ಆಗಮಿಸಿದ ಜಯನಗರ ಠಾಣೆಯ ಪೊಲೀಸರು ಮನೆಯ ಬಾಗಿಲು ತೆರೆದು ನೋಡಿದಾಗ ಪ್ರಭಾವತಿ ಅವರ ಮೃತದೇಹ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಜೊತೆಯಲ್ಲೇ ಮನೆಯಲ್ಲಿದ್ದ ಸಾಕು ನಾಯಿ ಕೂಡ ಸಾವನ್ನಪ್ಪಿದೆ. ಪ್ರಭಾವತಿ ಅವರು ಕೆಲವು ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ತನಿಖೆ ಚುರುಕು:
ಸ್ಥಳಕ್ಕೆ ಎಫ್ಎಸ್ಎಲ್ (FSL) ಹಾಗೂ ಸುಕೋ ತಂಡ ಭೇಟಿ ನೀಡಿ, ಮನೆಯಲ್ಲಿನ ಸಾಕ್ಷ್ಯಗಳನ್ನು ಕಲೆಹಾಕಿದೆ. ಇದು ಸಹಜ ಸಾವೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಜಯನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ. ಹಿರಿಯ ಪತ್ರಕರ್ತ ಆಶ್ರಯ ನಾಗರಾಜ್ ಅವರ ಪತ್ನಿಯ ನಿಗೂಢ ಸಾವು ಅವರ ಕುಟುಂಬಸ್ಥರು ಹಾಗೂ ಪತ್ರಕರ್ತ ಮಿತ್ರರಲ್ಲಿ ಆಘಾತ ತಂದಿದೆ.


