Karnataka Politics: ಲೂಟಿಗಾಗಿ ಸರ್ಕಾರ ರಚನೆಯಾಗಿದೆ. ಖಾತೆಗಾಗಿ ಸೋನಿಯಾ ಗಾಂಧಿ ಮನೆಯ ಬಾಗಿಲು ಬಳಿ ನಿಂತಿದ್ದು ಎಲ್ಲ ಸಚಿವರು ರಜೆಯ ಮೇಲೆ ಹೊರಟಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಚಿಂತಾಮಣಿ (ಜೂ.14): ಲೂಟಿಗಾಗಿ ಸರ್ಕಾರ ರಚನೆಯಾಗಿದೆ. ಕೇವಲ ನಾಯಕತ್ವ ಬದಲಾಗಿದೆಯೇ ಹೊರತು ಮನಸ್ಥಿತಿ ಬದಲಾಗಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ 14 ಮಂತ್ರಿಗಳಾಗಿದ್ದು ಖಾತೆಗಾಗಿ ಸೋನಿಯಾ ಗಾಂಧಿ ಮನೆಯ ಬಾಗಿಲು ಬಳಿ ನಿಂತಿದ್ದು ಎಲ್ಲ ಸಚಿವರು ರಜೆಯ ಮೇಲೆ ಹೊರಟಿದ್ದಾರೆ ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ರಾಜ್ಯದ ಜನತೆಯ ಸಮಸ್ಯೆಯನ್ನು ಕೇಳುವವರು ಯಾರು ಇಲ್ಲದಂತಾಗಿದೆ, ನನಗೆ ಆ ಖಾತೆ ಬೇಕಿಲ್ಲ, ಈ ಖಾತೆ ಬೇಕು, ಈ ಖಾತೆ ಬೇಡ ಬಂಡವಾಳವಿರುವ ಬೇರೆ ಖಾತೆ ಕೊಡಿಯೆಂದು ದುಂಬಾಲು ಬಿದ್ದಿದ್ದಾರೆ ಎಂದು ದೂರಿದರು.

ಸ್ಥಳೀಯ ರೈತರ ಸಮಸ್ಯೆ, ರಸಗೊಬ್ಬರ, ಬಿತ್ತನೆ ಬೀಜಗಳು ಇತ್ಯಾದಿಗಳು ಬಗ್ಗೆ ವಿಚಾರಿಸ ಬೇಕಾದವರು ಹೈಕಮಾಂಡ್‌ ಭೇಟಿಗಾಗಿ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಮಾವಿಗೆ ಬೆಲೆ ಇಲ್ಲದೆ ಬೀದಿಯಲ್ಲಿ ಬಿಸಾಡಿ ಹೋಗುತ್ತಿರುವ ರೈತರ ಕಷ್ಟಗಳಿಗೆ ಸ್ಪಂದಿಸುವವರಾರು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ಸೇರಿ ಎಲ್ಲಾ ತಾಲೂಕುಗಳಲ್ಲಿ ಮಾವು ಬೆಳೆಯುತ್ತಾರೆ. ಆದರೆ ಇಲ್ಲಿನ ಮಾವಿಗೆ ಹೆಚ್ಚಿನ ಬೇಡಿಕೆಯಿದ್ದು ಆದರೆ ಬೆಲೆಯಿಲ್ಲದಂತಾಗಿದೆ. ಬೇರೆ ಕಸುಬಿಲ್ಲ, ಬೆಲೆಯಿಲ್ಲ, ನಷ್ಟವನ್ನು ಅನುಭವಿಸುತ್ತಿದ್ದಾರೆ. ಮಾವು ಬೆಳೆಗಾರರಿಗೆ 500 ಕೋಟಿ ಪರಿಹಾರ ಕೊಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದರು.

ಪ್ರಿಯಾಂಕ್‌ ಖರ್ಗೆ ವಿರುದ್ಧ ಕಿಡಿ

ಪ್ರಿಯಾಂಕ್ ಖರ್ಗೆಯವರು ಆರ್‌ಎಸ್‌ಎಸ್‌ನ್ನು ನೋಂದಾಯಿಸಬೇಕು ಇಲ್ಲವೇ ನಿಷೇಧ ಮಾಡುವುದಾಗಿ ಹೇಳಿರುವ ಕುರಿತ ಪ್ರಶ್ನೆಗೆ ಅವರಿಗೆ ನಿದ್ದೆ ಬರುವುದಿಲ್ಲ, ಅವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿ ಕೆಲಸ ಮಾಡಿದ್ದು ಕಡಿಮೆ. ಆದರೆ ಆರ್ ಎಸ್‌ಎಸ್ ನಿಂದನೆ ಮಾಡಿದರೆ ಅವರಿಗೆ ಬೆಲೆಯೆಂದು ವರ್ತಿಸುತ್ತಿದ್ದಾರೆ. ಹಳ್ಳಿ ಕಡೆ ಯುಗಾದಿ ಸಂದರ್ಭದಲ್ಲಿ ರಾಮರಸವನ್ನು ತಯಾರಿಸುತ್ತಾರೆ. ಅದನ್ನು ಕುಡಿದರೆ ಎರಡು ದಿನಗಳಾದರೂ ಅದರ ಮತ್ತು ಕಡಿಮೆಯಾಗುತ್ತಿರಲಿಲ್ಲ. ಅದರಂತೆ ಪ್ರಿಯಾಂಕ್ ಖರ್ಗೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.