ಡಾ. ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ ರೈತರಿಗೆ ಅವರ ಮನವಿಯಂತೆ ಒಂದೇ ಕಡೆಯಲ್ಲಿ ಪರಿಹಾರದ ನಿವೇಶನ ನೀಡುವ ಕುರಿತು ಚರ್ಚಿಸಿ, ನಿರ್ಧರಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸಭೆ : ಡಾ. ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ ರೈತರಿಗೆ ಅವರ ಮನವಿಯಂತೆ ಒಂದೇ ಕಡೆಯಲ್ಲಿ ಪರಿಹಾರದ ನಿವೇಶನ ನೀಡುವ ಕುರಿತು ಚರ್ಚಿಸಿ, ನಿರ್ಧರಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಪರ್ಯಾಯ ನಿವೇಶನವನ್ನು ತ್ವರಿತ ಹಂಚಿಕೆಗಾಗಿ ಎಲ್ಲ ರೀತಿಯ ಪ್ರಯತ್ನ
ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ಜಮೀನು ಹಂಚಿಕೆ ಕುರಿತಂತೆ ಬಿಜೆಪಿಯ ಎಸ್.ಆರ್. ವಿಶ್ವನಾಥ್ ಪ್ರಸ್ತಾಪಿಸಿದ ವಿಷಯದ ಕುರಿತಂತೆ, ಬಿಡಿಎ ವತಿಯಿಂದ ನಿರ್ಮಿಸಿರುವ ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿರುವ ಭೂ ಮಾಲೀಕರಿಗೆ ಪರ್ಯಾಯ ನಿವೇಶನವನ್ನು ತ್ವರಿತ ಹಂಚಿಕೆಗಾಗಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಮುಖ್ಯ ರಸ್ತೆ ಪಕ್ಕದಲ್ಲೇ ಎಲ್ಲ ರೈತರಿಗೂ ನಿವೇಶನ ನೀಡಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ.
ರೈತರು ನೀಡಿದ ಭೂಮಿಯಲ್ಲೇ ನಿವೇಶನ ಕೊಡಬೇಕು ಎಂದರೂ ಆಗುವುದಿಲ್ಲ
ಹಾಗೆಯೇ, ರೈತರು ನೀಡಿದ ಭೂಮಿಯಲ್ಲೇ ನಿವೇಶನ ಕೊಡಬೇಕು ಎಂದರೂ ಆಗುವುದಿಲ್ಲ. ಆದರೂ, ರೈತರು ಮನವಿ ಮಾಡಿದಂತೆ ಒಟ್ಟಿಗೆ ಅವರಿಗೆ ಪರಿಹಾರದ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಕಾನೂನು ತೊಡಕಿದೆ. ನ್ಯಾಯಾಲಯದಲ್ಲಿ ಪ್ರಕರಣವಿರುವ ಕಾರಣ ನಿವೇಶನ ಹಂಚಿಕೆಗೆ ಅರ್ಜಿ ಕರೆಯಲೂ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪ್ರತಿ ವರ್ಷ ಬಿಡಿಎಗೆ 1 ಸಾವಿರ ಕೋಟಿ ರು. ನಷ್ಟವಾಗುತ್ತಿದೆ. ಅದರ ನಡುವೆಯೇ ನಿವೇಶನ ಹಂಚಿಕೆಗೆ ಅರ್ಜಿ ಸಲ್ಲಿಸಲು ಹೊಸ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಇನ್ನೆರಡು ತಿಂಗಳಲ್ಲಿ ಅದು ಪೂರ್ಣವಾಗಲಿದೆ. ಜತೆಗೆ ನಿವೇಶನ ಹಂಚಿಕೆ ಕುರಿತಂತೆ ಹೈಕೋರ್ಟ್ಗೂ ಅಫಿಡವಿಟ್ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಎಸ್.ಆರ್. ವಿಶ್ವನಾಥ್, ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಗೆ ಭೂಮಿ ನೀಡಿರುವ ರೈತರಿಗೆ ಪರಿಹಾರ ರೂಪದಲ್ಲಿ ಭೂಮಿ ವಿಸ್ತೀರ್ಣದ ಶೇ. 40 ಅಭಿವೃದ್ಧಿ ಹೊಂದಿದ ನಿವೇಶನ ಕೊಡಬೇಕಿದೆ. ಆದರೆ, ಈವರೆಗೆ ರೈತರಿಗೆ ನಿವೇಶನ ನೀಡಿಲ್ಲ. ಜತೆಗೆ ಬಡಾವಣೆಯಲ್ಲಿನ 100 ಅಡಿ, 80 ಅಡಿ, 60 ಅಡಿ ಅಗಲದ ಮುಖ್ಯ ರಸ್ತೆಗಳಿಗೆ ಹೊಂದಿಕೊಂಡಿರುವ ನಿವೇಶನಗಳನ್ನು ಹರಾಜು ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಮಾಹಿತಿಯಿದ್ದು, ರೈತರಿಗೆ ಮೊದಲಿಗೆ ಪರಿಹಾರದ ನಿವೇಶನ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದರು.


