ಇ-ಖಾತಾ ನೀಡುವ ವಿಚಾರದಲ್ಲಿ ಯಾವುದೇ ಅಧಿಕಾರಿ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ದಾಖಲೆ ನೀಡಿದರೆ ಅಂಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ವಿಧಾನಸಭೆ (ಮಾ.11): ಇ-ಖಾತಾ ನೀಡುವ ವಿಚಾರದಲ್ಲಿ ಯಾವುದೇ ಅಧಿಕಾರಿ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ದಾಖಲೆ ನೀಡಿದರೆ ಅಂಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ರಾಜ್ಯ ಬಜೆಟ್‌ ಮೇಲಿನ ಚರ್ಚೆ ವೇಳೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರು, ಜನ ತಮ್ಮ ಆಸ್ತಿಗಳ ಇ-ಖಾತಾ ಪಡೆಯಲು ಕನಿಷ್ಠ 10 ಸಾವಿರ ರು. ಲಂಚ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ತಂದಿರುವ ಇ-ಖಾತಾ ವ್ಯವಸ್ಥೆಯಿಂದ ಅಧಿಕಾರಿಗಳಿಗೆ ಲಾಭವಾಗುತ್ತಿದೆ ಎಂದು ಆರೋಪಿಸಿದರು.

ಉತ್ತಮ ಆಡಳಿತದ ಉಪಕ್ರಮ: ಅದಕ್ಕೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಇ-ಖಾತಾ ವ್ಯವಸ್ಥೆ ಉತ್ತಮ ಆಡಳಿತದ ಉಪಕ್ರಮ ಎಂದು ಕೇಂದ್ರ ಸರ್ಕಾರವೇ ಪ್ರಶಸ್ತಿ ನೀಡಿದೆ. ಈಗ ಆ ವ್ಯವಸ್ಥೆ ಬಗ್ಗೆ ಬಿಜೆಪಿ ಶಾಸಕರೇ ತೆಗಳುತ್ತಿದ್ದೀರಿ. ಬೆಂಗಳೂರಿನಲ್ಲೇ 10 ಲಕ್ಷ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ. ರಾಜ್ಯದಲ್ಲಿ 1.11 ಕೋಟಿ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ. ಆಸ್ತಿ ದಾಖಲೆಗಳಲ್ಲಿ ಏನಾದರೂ ಸಮಸ್ಯೆಯಿದ್ದರೆ, ಅರಣ್ಯ ಭೂಮಿ, ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೆ ಇ-ಖಾತಾ ಸಿಗುವುದಿಲ್ಲ. ಆದರೂ, ಇ-ಖಾತಾ ವಿತರಣೆಯಲ್ಲಿ ಯಾರಾದರೂ ಲಂಚ ಪಡೆಯುತ್ತಿದ್ದಾರೆ ಎಂದು ಪಟ್ಟಿ ನೀಡಿದರೆ ಸಂಜೆಯೊಳಗೆ ಅಮಾನತು ಮಾಡುವುದಾಗಿ ತಿಳಿಸಿದರು.

ತೀವ್ರ ಅಸಮಾಧಾನ

ಅದಕ್ಕೆ ಅಸಮಧಾನ ವ್ಯಕ್ತಪಡಿಸಿದ ಬಿಜೆಪಿ ಶಾಸಕರು, ನಿಮಗೆ ಸಮಸ್ಯೆಯ ಅರಿವಿಲ್ಲ. ಗ್ರಾಮೀಣ ಭಾಗದಲ್ಲಿ ದಿನವೂ ಹತ್ತಾರು ಮಂದಿ ಇ-ಖಾತಾ ಸಮಸ್ಯೆಗಳನ್ನಿಟ್ಟುಕೊಂಡು ನಮ್ಮ ಬಳಿ ಬರುತ್ತಾರೆ. ಲಂಚ ಕೇಳುತ್ತಿರುವ ಬಗ್ಗೆ ದೂರುತ್ತಾರೆ. ಇದನ್ನು ಸರಿಪಡಿಸಿ ಎಂದರು. ಆಗ ಆರ್‌.ಅಶೋಕ್‌ ಮಧ್ಯಪ್ರವೇಶಿಸಿ, ಡಿ.ಕೆ.ಶಿವಕುಮಾರ್‌ ಅವರು ಕೇವಲ ಬೆಂಗಳೂರು-ದೆಹಲಿ ಎಂದು ಹಾರಾಡುತ್ತಿದ್ದಾರೆ. ಅವರಿಗೆ ತಳಮಟ್ಟದಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿದಿಲ್ಲ.

ನಾನು ಮಾಡುತ್ತಿರುವ ಆರೋಪ ಸುಳ್ಳಾಗಿದ್ದರೆ, ಇ-ಖಾತಾಕ್ಕಾಗಿ ಲಂಚ ಪಡೆಯುತ್ತಿಲ್ಲ ಎಂದಾದರೆ ನನ್ನ ವಿರುದ್ಧ ಹಕ್ಕುಚ್ಯುತಿ ಸೇರಿ ಯಾವುದೇ ಕ್ರಮ ಎದುರಿಸಲು ಸಿದ್ಧನಿದ್ದೇನೆ. ನೀವೇ ಯಾವುದಾದರೂ ಜಾಗ ನಿಗದಿ ಮಾಡಿ ನನ್ನನ್ನು ಕರೆದುಕೊಂಡು ಹೋಗಿ, ಲಂಚ ಪಡೆಯುತ್ತಿರುವ ಬಗ್ಗೆ ಜನರ ಬಳಿ ನಾನು ಹೇಳಿಸುತ್ತೇನೆ ಎಂದು ಸವಾಲು ಹಾಕಿದರು.