ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ನಡೆಸಿ, ನ್ಯಾಯಾಂಗ ಬಂಧನದಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಮರುಬಂಧಿಸಿದ್ದಾರೆ. ಹೊಸನಗರ ತಾಲೂಕಿನ ವೆಂಕಟೇಶ್‌ನನ್ನು ರಿಪ್ಪನ್‌ಪೇಟೆ ಪೊಲೀಸರು ಆತನ ಮನೆಯ ಸಮೀಪವೇ ಕಾರ್ಯಾಚರಣೆ ನಡೆಸಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶಿವಮೊಗ್ಗ (ಆ.3): ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಭಾನುವಾರ ಬೆಳಗ್ಗೆ ಬಂಧಿಸಿ ಪುನಃ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೊಸನಗರ ತಾಲೂಕಿನ ಅಡುಗೋಡಿ ನಿವಾಸಿ ವೆಂಕಟೇಶ್ (36) ಬಂಧಿತ. ಅರಣ್ಯ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಜು.15ರಂದು ಜೆಎಂಎಫ್‌ಸಿ ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಜೀಪಿನಲ್ಲಿ ಜೈಲಿಗೆ ಕರೆದೊಯ್ಯುವಾಗ ಬಟ್ಟೆಮಲ್ಲಪ್ಪ ಗ್ರಾಮ(Battemallappa village)ದ ಹೋಟೆಲ್ ಬಳಿ ಆಹಾರ ತರಲು ಅಧಿಕಾರಿಗಳು ತೆರಳಿದ್ದರು. ಈ ವೇಳೆ ಜೀಪಿನಲ್ಲಿದ್ದ ಸಿಬ್ಬಂದಿ ಚಕ್ರಪಾಣಿ ಮತ್ತು ಚಾಲಕ ನಾಗೇಂದ್ರ ಅವರ ಮೇಲೆ ದಾಳಿ ನಡೆಸಿ ಆರೋಪಿ ಪರಾರಿಯಾಗಿದ್ದ. ಈ ಕುರಿತು ಕೊಲ್ಲೂರು ವನ್ಯಜೀವಿ ವಲಯದ ಉಪವಲಯ ಅರಣ್ಯಾಧಿಕಾರಿ ಸುನೀಲ್ ಡಿ. ಕುಂಬಾ‌ರ್ ನೀಡಿದ ದೂರಿನನ್ವಯ ರಿಪ್ಪನ್ ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸಿಪಿಐ ಗೌಡಪ್ಪ ಗೌಡ ಪಿಎಸ್‌ಐ ಶಂಕರ ಗೌಡ ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿ ವೆಂಕಟೇಶ್ ನನ್ನು ಆತನ ಮನೆಯ ಸಮೀಪವೇ ಬಂಧಿಸಿದ್ದಾರೆ.