Asianet Suvarna News Asianet Suvarna News

ಪ್ಯಾರಾ ಮೋಟಾರಿಂಗ್‌ ಎಷ್ಟು ಸುರಕ್ಷಿತ?

ದಸರೆಯ ಪ್ರಯುಕ್ತ ಮೈಸೂರಿನ ಮಹಾರಾಜಾ ಕಾಲೇಜು ಮೈದಾನದ ಬಳಿ ಪ್ಯಾರಾ ಮೋಟಾರಿಂಗ್‌ ಯಾನ ನಡೆಯುತ್ತಿದೆ.

Risky Para Motaring in Mysuru Due To Dasara
Author
First Published Oct 4, 2022, 6:02 AM IST

ಮೈಸೂರು  (ಜ.04) :  ದಸರೆಯ ಪ್ರಯುಕ್ತ ಮೈಸೂರಿನ ಮಹಾರಾಜಾ ಕಾಲೇಜು ಮೈದಾನದ ಬಳಿ ಪ್ಯಾರಾ ಮೋಟಾರಿಂಗ್‌ ಯಾನ ನಡೆಯುತ್ತಿದೆ.

ನಾಲ್ಕು ವಾಹನಗಳು ಪ್ರತಿನಿತ್ಯ ಸುಮಾರು 25 ರಿಂದ ಐವತ್ತು ಯಾನಾ ಕಾಂಕ್ಷಿಗಳನ್ನು ತಲಾ .2500 ಪಡೆದು ಎರಡರಿಂದ ಏಳು ನಿಮಿಷದವರೆಗೆ ಗಗನ ಯಾನ ಮಾಡಿಸಿತ್ತಿದೆ. ದೆಹಲಿಯ (Delhi) ಸಂಸ್ಥೆಯೊಂದರ ರಿತ ಪೈಲೆಟ್‌ಗಳು ಚಾಲನೆ ಮಾಡುವ ಈ ವಾಹನದಲ್ಲಿ ಯಾನಮಾಡಲು ಸಂತೋಷವಾದರೂ ಸುರಕ್ಷಣೆಯ ವಿಷಯಕ್ಕೆ ಬಂದರೆ ಯಾವುದೇ ರಕ್ಷಣೆ ಇದರಲ್ಲಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ವಿಚಾರದಲ್ಲಿ ಕಂಪನಿಯ ಮಹೇಶ್‌ ಹೇಳುವುದೇನೆಂದರೆ ಪ್ರತಿ ಯಾನಿಯೂ ಇಂಡೆಮಿನಿಟಿ ಬಾಂಡ್‌ ಬರೆದುಕೊಡಬೇಕು. ಯಾವುದೇ ಅವಘಡವಾದರೂ ಸಂಸ್ಥೆಯನ್ನು ಹೊಣೆಮಾಡುವುದಿಲ್ಲ. ನಾವೇ ಜವಾಬ್ದಾರರು ಎಂದು ಹೇಳುವ ಮೂಲಕ ತಮ್ಮ ಜವಾಬ್ದಾರಿಯನ್ನು ಯಾನಿಯ ಮೇಲೇ ಹಾಕುವ ಬುದ್ಧಿವಂತಿಕೆ ಇವರದು. ಅದೂ ಅಲ್ಲದೇ ಏನಾದರೂ ಅವಘಡವಾದರೆ ಕನಿಷ್ಠ ಪ್ರಾಥಮಿಕ ಚಿಕಿತ್ಸೆ ನೀಡಲೂ ಇವರಲ್ಲಿ ಒಂದು ಆಂಬುಲೆ®್ಸ… ಆಗಲಿ, ವೈದ್ಯರಾಗಲಿ ಇಲ್ಲ!

ಕೋವಿಡ್‌  (Covid ) ಬರುವ ಮುನ್ನ ದಸರೆಯಲ್ಲಿ ಹಾರಾಡುತ್ತಿದ್ದಾಗ ಮೋಟಾರ್‌ ಒಂದು ಇದೇ ಮೈದಾನದ ಹಾಕಿ ಪಿಚ್‌ನ ಮರಕ್ಕಪ್ಪಳಿಸಿತು. ಸ್ಥಳದಲ್ಲೇ ಇದ್ದ ನಾನು ಜಿಲ್ಲಾಡಳಿತ ಇಂತಹ ಯಾನಕ್ಕೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದಿದಗದರೆ ಅನುಮತಿ ನೀಡಬಾರದೆಂದೂ ಕೋರಿದ್ದೆ. ಕಣ್ಮುಚ್ಚಿ ಕುಳಿತು ಪ್ಯಾರಾ ಮೊಟಾರಿಂಗ್‌ಗೆ ಅನುಮತಿ ನೀಡಿದವರಾರು.. ಜಿಲ್ಲಾಡಳಿತಕ್ಕೆ ಸ್ವಲ್ಪವಾದರೂ ಜನರ ಸುರಕ್ಷತೆಯ ಬಗ್ಗೆ ಕಾಳಜಿ ಇಲ್ಲವೇ?

- ಕೊ.ಸು. ನರಸಿಂಹಮೂರ್ತಿ. ಚಾಮರಾಜಪುರಂ, ಮೈಸೂರು

ಅದ್ದೂರಿ ಜಂಬೂ ಸವಾರಿಗೆ ಸಜ್ಜು 

 

 ಮೈಸೂರು (ಅ.04): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’, ವಿಜಯದಶಮಿ ದಿನವಾದ ಬುಧವಾರ ಜರುಗಲಿದ್ದು, ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಕಾಲ ಜಂಬೂಸವಾರಿ ಮೆರವಣಿಗೆ ಕೇವಲ ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಈ ಬಾರಿ ಜಂಬೂಸವಾರಿಯನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಈ ಮಧ್ಯೆ, ನವರಾತ್ರಿಯ 9ನೇ ದಿನವಾದ ಮಂಗಳವಾರ, ಅರಮನೆಯಲ್ಲಿ ರಾಜವಂಶಸ್ಥರಿಂದ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನಡೆಯಲಿದೆ.

ಸಿಎಂರಿಂದ ಚಾಲನೆ:

ಬುಧವಾರ ಮಧ್ಯಾಹ್ನ 2.36 ರಿಂದ 2.50 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸುವ ಮೂಲಕ, ಆಕರ್ಷಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ನಂತರ, ಸಂಜೆ 5.07 ರಿಂದ 5.18 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಒಳಾವರಣದ ವಿಶೇಷ ವೇದಿಕೆಯಲ್ಲಿ ಗಜರಾಜ ’ಅಭಿಮನ್ಯು’ ಹೊರಲಿರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿರುವ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಕಾವೇರಿ ಹಾಗೂ ಚೈತ್ರಾ ‘ಕುಮ್ಕಿ’ ಆನೆಗಳಾಗಿ ಅಭಿಮನ್ಯುವಿನ ಜೊತೆ ಸಾಗಲಿವೆ.

ಈ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್‌, ಮೇಯರ್‌ ಶಿವಕುಮಾರ್‌ ಉಪಸ್ಥಿತರಿರಲಿದ್ದಾರೆ. ನಾಡಿನ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ 47 ಸ್ತಬ್ಧಚಿತ್ರಗಳು, 50 ಜನಪದ ಕಲಾತಂಡಗಳು ಸೇರಿದಂತೆ 100ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ. ಅಭಿಮನ್ಯು ಸತತ ಮೂರನೇ ಬಾರಿಗೆ ಚಿನ್ನದ ಅಂಬಾರಿ ಹೊರಲಿದ್ದಾನೆ.

ಪಂಜಿನ ಕವಾಯತು:

ಸಂಜೆ 7.30ಕ್ಕೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಗೌರವ ವಂದನೆ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಹತ್ತು ದಿನಗಳಿಂದ ನಡೆಯುತ್ತಿರುವ ದಸರೆಗೆ ತೆರೆ ಬೀಳಲಿದೆ.

ಹರಿದು ಬರುತ್ತಿರುವ ಪ್ರವಾಸಿಗರ ದಂಡು:

ಈ ಮಧ್ಯೆ, ಅಂತಾರಾಜ್ಯ ವಾಹನಗಳಿಗೆ ಮೈಸೂರು ನಗರ ಮತ್ತು ಕೆಆರ್‌ಎಸ್‌ ಪ್ರವೇಶ ತೆರಿಗೆಯಿಂದ ವಿನಾಯ್ತಿ ನೀಡಿರುವುದು, ಶಾಲೆಗಳಿಗೆ ಮಧ್ಯಂತರ ರಜೆ ಸಿಕ್ಕಿರುವುದು, ವಾರಾಂತ್ಯದ ಜೊತೆಗೆ ಸರ್ಕಾರಿ ರಜೆಗಳು ಸಾಲು, ಸಾಲಾಗಿ ಬಂದಿರುವುದರಿಂದ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಮೈಸೂರಿನತ್ತ ಧಾವಿಸುತ್ತಿದ್ದಾರೆ. ಇದರಿಂದಾಗಿ ನಗರದ ಬಹುತೇಕ ಹೋಟೆಲ್‌ಗಳು ಭರ್ತಿಯಾಗಿವೆ. ಪ್ರವಾಸಿಗರ ಜೊತೆಗೆ ಸ್ಥಳೀಯರು ದೀಪಾಲಂಕಾರ ವೀಕ್ಷಣೆ ಸೇರಿದಂತೆ ವಿವಿಧೆಡೆ ಭೇಟಿ ನೀಡುತ್ತಿರುವುದರಿಂದ ಅರಮನೆ ಸುತ್ತಮುತ್ತಲಿನ ರಸ್ತೆ ಮತ್ತಿತರ ಕಡೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.

ತಾಲೀಮು: 

ದಸರಾ ಮಹೋತ್ಸವ ಜಂಬೂಸವಾರಿಯ ತಾಲೀಮು ಎರಡನೇ ದಿನವಾದ ಭಾನುವಾರ ಸಹ ಮೈಸೂರು ಅರಮನೆ ಮುಂಭಾಗದಲ್ಲಿ ಜರುಗಿತು.

ದಸರಾ ಗಜಪಡೆ, ಅಶ್ವಪಡೆ ಹಾಗೂ ವಿವಿಧ ಪೊಲೀಸ ತುಕಡಿಗಳು ಜಂಬೂಸವಾರಿ ತಾಲೀಮಿನಲ್ಲಿ ಪಾಲ್ಗೊಂಡಿದ್ದವು. 2ನೇ ದಿನ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರ ಸೇರಿದಂತೆ ಇತರೆ ಆನೆಗಳು, ಅಶ್ವರೋಹಿ ದಳದ ಕುದುರೆಗಳು, ವಿವಿಧ ಪೊಲೀಸ್‌ ತುಕಡಿಗಳು, ಪೊಲೀಸ್‌ ಬ್ಯಾಂಡ್‌ ಪಾಲ್ಗೊಂಡಿದ್ದವು.

ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಬರುವ ಮಾರ್ಗ, ಪುಷ್ಪಾರ್ಚನೆ ಮಾಡುವ ಸ್ಥಳ, ಆನೆಗಳ ತಂಡದ ಮುಂದೆ ಸಂಚರಿಸಲಿರುವ ಅಶ್ವಪಡೆ, ಪಥಸಂಚಲನದಲ್ಲಿ ಭಾಗವಹಿಸುವ ಪೊಲೀಸ್‌ ತುಕಡಿ, ಪೊಲೀಸ್‌ ಬ್ಯಾಂಡ್‌ನೊಂದಿಗೆ ಈ ತಾಲೀಮು ಯಶಸ್ವಿಯಾಗಿ ನಡೆಯಿತು. ಅ.3 ರಂದು ಅಂತಿಮ ಹಂತದ ಜಂಬೂಸವಾರಿ ತಾಲೀಮು ನಡೆಯಲಿದೆ.

ಡಿಸಿಎಫ್‌ ಡಾ.ವಿ. ಕರಿಕಾಳನ್‌, ಸಿಎಆರ್‌ ಡಿಸಿಪಿ ಶಿವರಾಜು, ಎಸಿಪಿಗಳಾದ ಚಂದ್ರಶೇಖರ್‌, ಸುರೇಶ್‌, ಸುದರ್ಶನ್‌, ಆನೆ ವೈದ್ಯ ಡಾ. ಮುಜೀಬ್‌ ಮೊದಲಾದವರು ಇದ್ದರು.

Follow Us:
Download App:
  • android
  • ios