ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಫಿಟ್ಸ್‌ ಬಂದು ಹೊಳೆಗೆ ಬಿದ್ದ ತಂದೆಯನ್ನು, 9 ವರ್ಷದ ಬಾಲಕ ನಂದನ್ ಸಮಯಪ್ರಜ್ಞೆ ಮೆರೆದು ಸ್ಥಳೀಯರ ಸಹಾಯದಿಂದ ರಕ್ಷಿಸಿದ್ದಾನೆ. ಮಗನ ಕೂಗಿಗೆ ಓಗೊಟ್ಟು ಬಂದ ಸ್ಥಳೀಯರು ಹೊಳೆಯಲ್ಲಿ ತೇಲಿ ಹೋಗುತ್ತಿದ್ದ ಚಂದ್ರು ಅವರನ್ನು ದಡಕ್ಕೆ ತಂದು ಪ್ರಾಣ ಉಳಿಸಿದ್ದಾರೆ.

ಶಿವಮೊಗ್ಗ: ಫಿಟ್ಸ್‌ ಬಂದು ಹೊಳೆಗೆ ಉರುಳಿ ಬಿದ್ದ ತಂದೆಯನ್ನು 9 ವರ್ಷದ ಬಾಲಕ ಪಕ್ಕದಲ್ಲಿದ್ದ ಮನೆಗಳಿಗೆ ತೆರಳಿ ತನ್ನ ತಂದೆ ನೀರಿನಲ್ಲಿ ಬಿದ್ದಿದ್ದಾರೆ ರಕ್ಷಿಸಿ ಎಂದು ಕೇಳಿಕೊಂಡಿದ್ದು, ಸ್ಥಳೀಯರು ಕೂಡಲೇ ಆಗಮಿಸಿ ಹೊಳೆಯಲ್ಲಿ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗೋರುಗೋಡು ಸಮೀಪ ನಡೆದಿದೆ.

ಹೊಳೆಗೆ ಉರುಳಿ ಬಿದ್ದ ತಂದೆಯ ರಕ್ಷಣೆ

ನಂದನ್ ಮತ್ತು ತಂದೆ ಚಂದ್ರ ಹೊಳೆಯ ಬಳಿ ತೆರಳಿದ್ದರು. ಚಂದ್ರು ಅವರಿಗೆ ಫಿಟ್ಸ್ ಬಂದು ಜಾರಿ ಹೊಳೆಗೆ ಉರುಳಿ ಬಿದ್ದಿದ್ದು, ಹರಿಯುವ ನೀರಿನೊಂದಿಗೆ ಸುಮಾರು ದೂರ ತೇಲಿ ಹೋಗಿದ್ದಾರೆ. ನಂದನ್ ಗಾಬರಿಗೊಳ್ಳದೆ ಹೊಳೆಯ ದಡದ ಮೇಲೆ ಕೂಗಿಕೊಳ್ಳುತ್ತಾ ಓಡಾತ್ತಾ ಸಮೀಪದ ಮನೆಗಳಿಗೆ ಧಾವಿಸಿ ‘ತನ್ನ ತಂದೆ ಹೊಳೆಯಲ್ಲಿ ತೇಲಿ ಹೋಗಿದ್ದಾರೆ ಬನ್ನಿ ಕಾಪಾಡಿ’ ಎಂದು ಅಂಗಲಾಚಿದ್ದಾನೆ. 

ಇದನ್ನೂ ಓದಿ: ಧಾರವಾಡ ಟು ಬೆಂಗಳೂರು: ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ!

ಬಾಲಕನ ಸಮಯ ಪ್ರಜ್ಞೆ

ಸ್ಥಳೀಯರು ಕೂಡಲೇ ಆಗಮಿಸಿ ಹೊಳೆಯಲ್ಲಿ ಹುಡುಕಾಟ ನಡೆಸಿ ತೇಲುತ್ತಿದ್ದ ಜರ್ಕಿನನ್ನು ನಂದನ್ ಗುರುತಿಸಿ ಅದೇ ಸ್ಥಳದಲ್ಲಿ ತಂದೆ ಇರಬಹುದೆಂದು ತಿಳಿಸಿದ್ದಾನೆ. ಸ್ಥಳೀಯರು ಚಂದ್ರು ಅವರನ್ನು ದಡಕ್ಕೆ ಎಳೆ ತಂದು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. 9 ವರ್ಷದ ಬಾಲಕ ನಂದನ್ ಸಾಹಸ ಹಾಗೂ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮಹಾರಾಜ ಟ್ರೋಫಿ: ಶಿವಮೊಗ್ಗಕ್ಕೆ ಬರಲಿದ್ದಾರೆ ಚಾಂಪಿಯನ್ ತಂಡದ ಮೂವರು ಕ್ರಿಕೆಟಿಗರು! ಮೆರವಣಿಗೆ ಮೂಲಕ ಅದ್ದೂರಿ ಸ್ವಾಗತ