ಹಾಸನದ ಅರಕಲಗೂಡಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ನಿಗದಿತ ಅವಧಿ ಮುಗಿದರೂ ಮನೆಗೆ ತೆರಳಲು ಯತ್ನಿಸಿದ ಕಿರಿಯ ಉದ್ಯೋಗಿಗೆ, ಶಾಖೆಯ ಗೇಟ್ಗೆ ಬೀಗ ಹಾಕಿ ಒವರ್ಟೈಮ್ ಮಾಡುವಂತೆ ಮ್ಯಾನೇಜರ್ ಕಿರುಕುಳ ನೀಡಿದ ವೀಡಿಯೋ ವೈರಲ್ ಆಗಿದೆ. ಆರ್ಬಿಐ ನಿಯಮಗಳನ್ನು ಉಲ್ಲಂಘಿಸಿ ನೌಕರನನ್ನು ಅಕ್ರಮವಾಗಿ ಬಂಧಿಸಿದ ಮ್ಯಾನೇಜರ್ ನಡವಳಿಕೆ ಹಾಗೂ ಬ್ಯಾಂಕಿಂಗ್ ವಲಯದ ಟಾಕ್ಸಿಕ್ ಸಂಸ್ಕೃತಿಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸದ ಒತ್ತಡ ಮತ್ತು ಹಿರಿಯ ಅಧಿಕಾರಿಗಳ ಕಿರುಕುಳ ಮಿತಿಮೀರುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ಹಾಸನ ಜಿಲ್ಲೆಯ ಅರಕಲಗೂಡು ಶಾಖೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ನಡದಿರುವ ಘಟನೆ ಇಡೀ ವಲಯವನ್ನು ಬೆಚ್ಚಿಬೀಳಿಸಿದೆ. ಜುಲೈ 18ರಂದು ಸಂಜೆ ನಿಗದಿತ ಕೆಲಸದ ಸಮಯ ಮುಗಿದಿದ್ದರೂ, ಕಸ್ಟಮರ್ ಸರ್ವಿಸ್ ಅಸೋಸಿಯೇಟ್ (CSA) ಉದ್ಯೋಗಿಯನ್ನು ಹೊರಗೆ ಹೋಗಲು ಬಿಡದೆ, ಶಾಖೆಯ ಮುಖ್ಯ ಗೇಟ್ಗೆ ಮ್ಯಾನೇಜರ್ ಬೀಗ ಜಡಿದಿದ್ದಾರೆ. ಈ ಅಕ್ರಮ ಬಂಧನದ ವೀಡಿಯೋ ಸದ್ಯ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
"ಓವರ್ಟೈಮ್ ಕಡ್ಡಾಯ": ಬೆದರಿಕೆ ಹಾಕಿ ಅಧಿಕಾರಿಯ ದೌರ್ಜನ್ಯ:
ಸಂಜೆ 5 ಗಂಟೆಗೆ ಶಿಫ್ಟ್ ಮುಗಿದಿದ್ದರೂ, ಉದ್ಯೋಗಿ 6 ಗಂಟೆಯವರೆಗೂ ಹೆಚ್ಚುವರಿಯಾಗಿ ಕೆಲಸ ಮಾಡಿದ್ದರು. ನಂತರ ಮನೆಗೆ ತೆರಳಲು ಅನುಮತಿ ಕೇಳಿದಾಗ, ಮ್ಯಾನೇಜರ್ "ನಹಿ ಜನ ಹೈ ತೋ ನಹಿ ಜನ ಹೈ" (ಹೋಗಬಾರದು ಎಂದರೆ ಹೋಗಬಾರದು) ಎಂದು ಉದ್ಧಟತನ ತೋರಿದ್ದಾರೆ. ಉದ್ಯೋಗ ಒಪ್ಪಂದದ ಪ್ರಕಾರ ನಿಗದಿತ ಕೆಲಸ ಮುಗಿಸಿದ್ದೇನೆ ಎಂದು ಸಿಬ್ಬಂದಿ ವಾದಿಸಿದರೂ, "ಓವರ್ಟೈಮ್ ಮಾಡುವುದು ಕಡ್ಡಾಯ" ಎಂದು ಬೆದರಿಸಿ ಗೇಟ್ ಮುಚ್ಚಿ ಕ್ರಿಮಿನಲ್ ಕೃತ್ಯದಂತೆ ವರ್ತಿಸಿದ್ದಾರೆ.
ಆರ್ಬಿಐ ನಿಯಮಗಳ ಉಲ್ಲಂಘನೆ ಮತ್ತು ಹೆಚ್ಚಿನ ಕೆಲಸದ ಒತ್ತಡ!
ಸಿಬ್ಬಂದಿಯನ್ನು ಬಂಧಿತ ಗುಲಾಮರಂತೆ ನಡೆಸಿಕೊಳ್ಳುವ ಈ ನಡವಳಿಕೆಯು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿರುವ ಉದ್ಯೋಗಿ ಕಲ್ಯಾಣ ನೀತಿಗಳ ನೇರ ಉಲ್ಲಂಘನೆಯಾಗಿದೆ. ಸಾಲ ಮತ್ತು ಇನ್ಶೂರೆನ್ಸ್ ಟಾರ್ಗೆಟ್ಗಳನ್ನು ಪೂರೈಸಲು ಹಿರಿಯ ಅಧಿಕಾರಿಗಳು ಕಿರಿಯ ಸಿಬ್ಬಂದಿಯ ಮೇಲೆ ನಿರಂತರ ಮಾನಸಿಕ ಸವಾರ ನಡೆಸುತ್ತಿದ್ದಾರೆ. ಸೂಕ್ತ ಸಿಬ್ಬಂದಿ ಬಲ ನೀಡದೆ, ಅತಿಯಾದ ಗುರಿಗಳನ್ನು ಹೇರಿ ಬ್ಯಾಂಕರ್ಗಳ ಜೀವನವನ್ನು ನರಕ ಸದೃಶಗೊಳಿಸಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆ.
ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ನೆಟ್ಟಿಗರ ಆಗ್ರಹ:
ಈ ಕರಾಳ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಉದ್ಯೋಗಿಯನ್ನು ಬಂಧಿಸಿಡುವುದು ಸ್ಪಷ್ಟವಾಗಿ ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ. ಕೇವಲ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರವಾಗಲು ಕಿರಿಯ ಸಿಬ್ಬಂದಿಯನ್ನು ಬಲಿಪಶು ಮಾಡುತ್ತಿರುವ ಇಂತಹ ಮ್ಯಾನೇಜರ್ಗಳ ವಿರುದ್ಧ ತಕ್ಷಣವೇ ಅಮಾನತು ಶಿಕ್ಷೆ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಸಾರ್ವಜನಿಕರು ಹಾಗೂ ಬ್ಯಾಂಕಿಂಗ್ ಒಕ್ಕೂಟಗಳು ಒತ್ತಾಯಿಸಿವೆ.


