ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ 'ಸಮರ್ಥ್ ಜ್ಯೂವೆಲರ್ಸ್' ಮಾಲೀಕ ಪ್ರಾಣೇಶ್ ವರ್ಣೇಕರ್ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 2.5 ಕೋಟಿಗೂ ಅಧಿಕ ಸಾಲ ಮತ್ತು ಕೌಟುಂಬಿಕ ಕಲಹದಿಂದ ಮನನೊಂದು ಈ ನಿರ್ಧಾರಕ್ಕೆ ಬಂದಿರಬಹುದೆಂದು ಶಂಕಿಸಲಾಗಿದೆ.
ಸಿಂಧನೂರು (ಮೇ.12): ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಆದರ್ಶ ಕಾಲೋನಿಯಲ್ಲಿ ಆಘಾತಕಾರಿ ದೃಶ್ಯ ಸ್ಥಳೀಯರು ಬೆಚ್ಚಿಬೀಳಿಸಿದೆ. ಪಟ್ಟಣದಲ್ಲಿ ಪರಿಚಿತವಾಗಿದ್ದ ಚಿನ್ನದ ಅಂಗಡಿ ಮಾಲೀಕ ಪ್ರಾಣೇಶ್ ವರ್ಣೇಕರ್ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬಾಗಿಲು ತೆರೆದೇ ಸೂ ಸೈಡ್ ಅನುಮಾನ ಹುಟ್ಟಿಸಿದೆ!
ಸಾಮಾನ್ಯವಾಗಿ ಪಟ್ಟಣದಲ್ಲಿ ಮನೆಗಳ ಬಾಗಿಲು ಮುಚ್ಚಿರುತ್ತವೆ. ಅದು ರಾತ್ರಿವೇಳೆ ಬಾಗಿಲು ತೆರೆದು ಯಾರೂ ಮಲಗುವುದಿಲ್ಲ. ಆದರೆ ಪ್ರಾಣೇಶ್ ಮನೆಯ ಬಾಗಿಲು ತೆರೆದಿದ್ದೇ ಸ್ಥಳೀಯರಿಗೆ ಅನುಮಾನಕ್ಕೆ ಕಾರಣವಾಗಿದೆ. ಒಳಗೆ ಹೋಗಿ ನೋಡಿದಾಗ ಫ್ಯಾನ್ಗೆ ನೇ ಣು ಹಾಕಿಕೊಂಡ ಸ್ಥಿತಿಯಲ್ಲಿ ಪ್ರಾಣೇಶ್ ಅವರ ಶವ ಕಂಡುಬಂದಿದ್ದು, ಕುಟುಂಬಸ್ಥರು ಮತ್ತು ನೆರೆಹೊರೆಯವರು ಬೆಚ್ಚಿಬಿದ್ದಿದ್ದಾರೆ.
ಸಮರ್ಥ್ ಜ್ಯೂವೆಲ್ಲರ್ಸ್ ಚಿನ್ನದ ಅಂಗಡಿ ನಡೆಸುತ್ತಿದ್ದ ಪ್ರಾಣೇಶ್
38 ವರ್ಷದ ಪ್ರಾಣೇಶ್ ವರ್ಣೇಕರ್ ಸಿಂಧನೂರಿನಲ್ಲಿ “ಸಮರ್ಥ್ ಜ್ಯೂವೆಲರ್ಸ್” ಎಂಬ ಚಿನ್ನದ ಅಂಗಡಿ ನಡೆಸುತ್ತಿದ್ದರು. ಚಿನ್ನದ ವ್ಯವಹಾರಗಳ ಜೊತೆಗೆ ಲೇವಾದೇವಿಯನ್ನೂ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಖಾಸಗಿ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡುತ್ತಿದ್ದರು.
ಆದರೆ ಕಳೆದ ಕೆಲವು ತಿಂಗಳುಗಳಿಂದ ಆರ್ಥಿಕ ಸಂಕಷ್ಟ ಅವರ ಬದುಕನ್ನು ಕಂಗೆಡಿಸಿತ್ತು ಎನ್ನಲಾಗುತ್ತಿದೆ. ಸುಮಾರು 2.5 ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದರೆಂಬ ಮಾಹಿತಿ ಹೊರಬಿದ್ದಿದೆ. ಇದೇ ಸಾಲದ ಒತ್ತಡ ಆತ್ಮ೧ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇದಕ್ಕಿಂತಲೂ ನೋವುಂಟು ಮಾಡಿದ ಸಂಗತಿ ಎಂದರೆ, ಇತ್ತೀಚೆಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ದೂರವಾಗಿದ್ದರೆಂಬ ಮಾಹಿತಿ. ಒಂದೆಡೆ ಸಾಲದ ಕಾಟ… ಮತ್ತೊಂದೆಡೆ ವೈಯಕ್ತಿಕ ಬದುಕಿನ ಸಮಸ್ಯೆಗಳು… ಇವೆಲ್ಲವೂ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತೇ ಎಂಬ ಪ್ರಶ್ನೆ ಮೂಡಿದೆ.
ಆತ್ಮ೧ಹತ್ಯೆಗೆ ಮುನ್ನ ಪ್ರಾಣೇಶ್ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ. ಡೆತ್ ನೋಟ್ನಲ್ಲಿ ಏನಿದೆ ಎಂಬುದರ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.
ಘಟನೆ ತಿಳಿಯುತ್ತಿದ್ದಂತೆ ಸಿಂಧನೂರು ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.


