Asianet Suvarna News Asianet Suvarna News

Raichur: ಗಣರಾಜ್ಯೋತ್ಸವದಲ್ಲಿ ನೃತ್ಯ ಮಾಡುತ್ತಿದ್ದ ವ್ಯಕ್ತಿ ಸಾವು: ಹೃದಯಾಘಾತಕ್ಕೆ ಬಲಿ

ಸಿಂಧನೂರು ಪಟ್ಟಣದಲ್ಲಿ ನಡೆಯುತ್ತಿದ್ದ  ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತವಾಗಿ ಕುಸಿದು ಬಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

Raichur Republic Day Dancer Dies for Heart Attack sat
Author
First Published Jan 26, 2023, 2:29 PM IST

ರಾಯಚೂರು (ಜ.26): ದೇಶಾದ್ಯಂತ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸಡಗರ ಸಂಭ್ರಮ ಮನೆ ಮಾಡಿದ್ದು, ಧ್ವಜಾರೋಹಣ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೆ, ಸಿಂಧನೂರು ಪಟ್ಟಣದಲ್ಲಿ ನಡೆಯುತ್ತಿದ್ದ  ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತವಾಗಿ ಕುಸಿದು ಬಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಈ ದುರ್ಘಟನೆ ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ಮಹಾಂತೇಶ್(42) ಆರೋಗ್ಯ ಇಲಾಖೆ ಸಿಬ್ಬಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಿಂಧನೂರು ತಾ. ದಿದ್ದಿಗಿ ಗ್ರಾಮದ ನಿವಾಸಿ ಆಗುದ್ದರು. ಗಣರಾಜ್ಯೋತ್ಸವ ಹಿನ್ನೆಲೆ ಸಿಂಧನೂರು ತಾಲ್ಲೂಕು ಆಸ್ಪತ್ರೆ ಸಿಬ್ಬಂದಿಯಿಂದ ಕೋಲಾಟ ನೃತ್ಯ ಪ್ರದರ್ಶನ ಮಾಡಲಾಗುತ್ತಿತ್ತು. ಗಣ ರಾಜ್ಯೋತ್ಸವದ ಡ್ಯಾನ್ಸ್ ಮಾಡುವ ವೇಳೆ‌ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಪರಿಶೀಲನೆ ಮಾಡಿದಾಗ ಉಸಿರಾಟ ಹಾಘೂ ಹೃದಯ ಬಡಿತ ಸಮಸ್ಯೆಯಿಂದ ಬಳಲಿ ಪ್ರಾಣವನ್ನು ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದಾದ್ಯಂತ 74ನೇ ಗಣರಾಜ್ಯೋತ್ಸವದ ಸಂಭ್ರಮ

ಗ್ರೂಪ್‌ ಡ್ಯಾನ್ಸ್‌ ನಡುವೆಯೇ ಅವಘಡ: ಸಿಂಧನೂರು ಪಟ್ಟಣದಲ್ಲಿ ಇತ್ತೀಚೆಗೆ ನಿರ್ಮೀಸಲಾದ ನೂತನ ತಾಲೂಕು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ವಿವಿಧ ಇಲಾಖೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಆರೋಗ್ಯ ಇಲಾಖೆಯ ವತಿಯಿಂದ ಕಳೆದ ಹಲವು ದಿನಗಳಿಂದ ಗ್ರೂಪ್ ಡ್ಯಾನ್ಸ್ ಅಭ್ಯಾಸ ಮಾಡಿ, ಇಂದು ಮೈದಾನದಲ್ಲಿ ಬಂದು ಡ್ಯಾನ್ಸ್‌ ಮಾಡುತ್ತಿದ್ದರು. ಹೀಗೆ ಗುಂಪು ನೃತ್ಯ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಸಿಂಧನೂರು ತಾ. ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಮಹಾಂತೇಶ್ ಅವರನ್ನು ಕೂಡಲೇ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಮ್ಯಾಸಿವ್ ಹಾರ್ಟ್ ಅಟ್ಯಾಕ್ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

ಮುಗಿಲುಮುಟ್ಟಿದ ಕುಟುಂಬ ಸದಸ್ಯರ ಆಕ್ರಂದನ:  ಇನ್ನು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಇಡೀ ಕುಟುಂಬವನ್ನು ಪೋಷಣೆ ಮಾಡುತ್ತಿದ್ದ ಮಹಾಂತೇಶ್‌ ಕುಟುಂಬಕ್ಕೆ ಆಸರೆಯಾಗಿದ್ದರು. ಆದರೆ, ಈಗ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಬಲಿಯಾಗಿದ್ದು, ಇಡೀ ಕುಟುಂಬವೇ ಶೋಕಾಚರಣೆಯಲ್ಲಿ ಮುಳುಗಿದೆ. ಕುಟುಂಬ ಸದಸ್ಯರು ಕೂಡ ನೃತ್ಯ ನೋಡಲು ಆಗಮಿಸಿದ್ದು, ಈ ಘಟನೆಯಿಂದ ಬರಸಿಡಿಲು ಬಡಿದಂತಾಗಿದೆ. ಆಸ್ಪತ್ರೆಯಲ್ಲಿ ಮಹಾಂತೇಶ್‌ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ತಿಳಿಸಿದಾಗ ಕುಟುಂಬ ಸದ್ಸಯರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆಯು ಸಿಂಧನೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Follow Us:
Download App:
  • android
  • ios