ಕೊಪ್ಪಳ ಮಾರ್ಗವಾಗಿ ಪುಣೆ- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆ! ಕೇಂದ್ರ ಹೆದ್ದಾರಿ ಇಲಾಖೆಯಿಂದ ಸಮಾಲೋಚನೆ ಜನಪ್ರತಿನಿಧಿಗಳಿಂದ ಮಾಹಿತಿ ಪಡೆದ ಇಲಾಖೆ ಕೊಪ್ಪಳ, ಯಲಬುರ್ಗಾ ತಾಲೂಕು ಮಾರ್ಗವಾಗಿ ಹೆದ್ದಾರಿ ಕಾತರಕಿ ಬಳಿ ತುಂಗಭದ್ರಾ ನದಿಗೆ ಮೂರುವರೆ ಕಿಮೀ ಸೇತುವೆ ನಿರ್ಮಾಣ

ಸೋಮರಡ್ಡಿ ಅಳವಂಡಿ

Add Asianetnews Kannada as a Preferred SourcegooglePreferred

ಕೊಪ್ಪಳ (ಅ.29): ಕೇಂದ್ರ ಹೆದ್ದಾರಿ ಇಲಾಖೆಯು ಪುಣೆ - ಬೆಂಗಳೂರು ನಡುವೆ ನೂತನ ಎಕ್ಸಪ್ರೆಸ್‌ ಹೈವೇ ನಿರ್ಮಿಸಲು ಉದ್ದೇಶಿಸಿದ್ದು, ಈಗಾಗಲೇ ಡಿಪಿಆರ್‌ ಸಿದ್ಧಪಡಿಸಲಾಗಿದೆ. ಇದು ಕೊಪ್ಪಳ ಜಿಲ್ಲೆಯಲ್ಲಿ ಹಾದು ಹೋಗಲಿದ್ದು, ಶುಕ್ರವಾರ ಹೆದ್ದಾರಿ ಕುರಿತು ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ವರ್ಚುವಲ್‌ ಸಭೆ ನಡೆಯಿತು. ಈಗಿರುವ ಪುಣೆ- ಬೆಂಗಳೂರು ಹೆದ್ದಾರಿ ಮಳೆಗಾಲದಲ್ಲಿ ಪ್ರತಿ ಬಾರಿಯೂ ಒಂದಿಲ್ಲೊಂದು ಸಮಸ್ಯೆಯಾಗುತ್ತಿರುವ ಹಿನ್ನೆಲೆ ನೂತನ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ ಮತ್ತು ಇದು ಸುಮಾರು 70- 80 ಕಿಮೀ ಕಡಿಮೆಯಾಗಲಿದೆ. ಅಲ್ಲದೇ ಸಮಯವೂ ಉಳಿಯಲಿದೆ.

ನಿಮ್ಮ ಸೇವೆಯಲ್ಲಿ ಭಾರತೀಯ ರೈಲ್ವೆ.. ಪ್ರಯಾಣಿಕರಿಗೆ ಉಚಿತ ಸ್ನಾನ..!

ನಿಖರತೆ ಇಲ್ಲ: ಈಗಷ್ಟೇ ಮಾಹಿತಿ ಸಂಗ್ರಹ ಮಾಡಲಾಗುತ್ತಿದ್ದು, ಯಲಬುರ್ಗಾ ತಾಲೂಕಿನ ಬಿನ್ನಾಳದಿಂದ ಕೊಪ್ಪಳ ತಾಲೂಕಿನ ಮತ್ತೂರು ಗ್ರಾಮದ ಮಾರ್ಗವಾಗಿ ಹೆದ್ದಾರಿ ಸಾಗಲಿದೆ. ಆದರೆ, ಈಗಿರುವ ರಾಜ್ಯ ಹೆದ್ದಾರಿ ಹಲಿಗೇರಿ -ಹಿರೇಸಿಂದೋಗಿ ಮಾರ್ಗವಾಗಿಯೇ ಇರಲಿದೆಯೋ ಅಥವಾ ಮೈನಳ್ಳಿ ಹಾಗೂ ಅಳವಂಡಿ ಗ್ರಾಮದ ಮಧ್ಯದಲ್ಲಿ ನೂತನ ರಸ್ತೆ ನಿರ್ಮಾಣವಾಗಲಿದೆಯೋ ಎನ್ನುವ ಕುರಿತು ನಿಖರತೆ ಇಲ್ಲ. ನೂತನ ಹೆದ್ದಾರಿ ನಿರ್ಮಿಸುವುದು ಖಚಿತ ಎನ್ನಲಾಗುತ್ತಿದ್ದು, ಆದರೆ ಆರ್ಥಿಕವಾಗಿ ಹೊರೆ ಆಗದಂತೆ ಈಗಿರುವ ರಾಜ್ಯ ಹೆದ್ದಾರಿ ಮಾರ್ಗವನ್ನೇ ಮತ್ತಷ್ಟುಅಗಲೀಕರಣಗೊಳಿಸಿ ನಿರ್ಮಾಣ ಮಾಡಲಾಗುತ್ತದೆÜ ಎಂಬ ಮಾತು ಕೇಳಿ ಬರುತ್ತಿದ್ದು, ಅದು ಇತ್ಯರ್ಥವಾಗಬೇಕಿದೆ.

ಈಗಾಗಲೇ ರೂಪಿಸಿರುವ ಯೋಜನೆಯ ಪ್ರಕಾರ ಬಿನ್ನಾಳ, ಬನ್ನಿಕೊಪ್ಪ, ಅಡವಿಹಳ್ಳಿ ಮುಖಾಂತರ ನೀರಲಗಿ ಗ್ರಾಮದ ಮಾರ್ಗವಾಗಿ ತುಂಗಭದ್ರಾ ನದಿಯಲ್ಲಿ ಸೇತುವೆ ನಿರ್ಮಾಣ ಮಾಡಿ, ವಿಜಯನಗರ ಜಿಲ್ಲೆ ಮಾರ್ಗವಾಗಿ ಸಂಪರ್ಕ ಕಲ್ಪಿಸಲಿದೆ. ಆದರೂ ಈಗಿರುವ ಹಲಿಗೇರಿ ಮಾರ್ಗವಾಗಿ ರಾಜ್ಯ ಹೆದ್ದಾರಿಗೆ ಯಾವುದೇ ಸಂಪರ್ಕ ಕಲ್ಪಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

ಮತ್ತಷ್ಟುಹತ್ತಿರ: ನೂತನ ಹೆದ್ದಾರಿಯಿಂದ ಕೊಪ್ಪಳ ಜಿಲ್ಲೆಗೆ ಬೆಂಗಳೂರಿಗೆ ಮತ್ತಷ್ಟುಹತ್ತಿರವಾಗಲಿದೆ. ಅಲ್ಲದೆ ಎಕ್ಸ್‌ಪ್ರೆಸ್‌ ಲೈನ್‌ ಆಗಿರುವುದರಿಂದ ಇನ್ನು ವೇಗವಾಗಿಯೇ ಬೆಂಗಳೂರು ತಲುಪುವ ಅವಕಾಶ ಜಿಲ್ಲೆಯ ಜನರಿಗೆ ದೊರೆಯಲಿದೆ. ಈ ಮೂಲಕ ಜಿಲ್ಲೆಯಲ್ಲಿ ಹೆದ್ದಾರಿಗಳ ಸಂಖ್ಯೆಯೂ ಹೆಚ್ಚಳವಾಗಲಿದೆ.

ರೈಲ್ವೆಯಲ್ಲಿ 200 ಜನರ ನೇಮಕ, ನೇಮಕಾತಿ ಪತ್ರ ವಿತರಿಸಿದ ಸಚಿವೆ ಶೋಭಾ ಕರಂದ್ಲಾಜೆ

ಹೆದ್ದಾರಿಯ ಒಟ್ಟು ಉದ್ದ 699 ಕಿಮೀ

  • ಕರ್ನಾಟಕದಲ್ಲಿ 498 ಕಿಮೀ
  • ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ ಚಿತ್ರದುರ್ಗ, ತುಮಕೂರು, ಬೆಂಗಳೂರು ಕೊಪ್ಪಳ ಜಿಲ್ಲೆಯಲ್ಲಿ:
  • 48 ಕಿಮೀ ಯಲಬುರ್ಗಾ ಬಿನ್ನಾಳದಿಂದ ಕೊಪ್ಪಳ ತಾಲೂಕು ಮತ್ತೂರು
  • ಕೊಪ್ಪಳ ಜಿಲ್ಲೆಯಲ್ಲಿ ಎಷ್ಟುಹಳ್ಳಿಗೆ ಎಫೆಕ್ಟ್?: 21 ಗ್ರಾಮಗಳಿಗೆ

ಪುಣೆ​- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕುರಿತು ಪ್ರಾಥಮಿಕ ಅಭಿಪ್ರಾಯವನ್ನು ಕೇಳಲಾಯಿತು. ನಮ್ಮ ಅಭಿಪ್ರಾಯ ಹೇಳಿದ್ದೇವೆ. ಶೀಘ್ರದಲ್ಲಿಯೇ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಮಾರ್ಗದ ಕುರಿತು ನಿಖರತೆ ಇಲ್ಲವಾದರೂ ನೂತನ ಹೆದ್ದಾರಿ ನಿರ್ಮಾಣ ಮಾಡಲಾಗುತ್ತದೆ.

ಸಂಗಣ್ಣ ಕರಡಿ, ಸಂಸದ