ಮಂತ್ರಾಲಯದ ಗುರು ವೈಭವೋತ್ಸವದಲ್ಲಿ ಭಾಗವಹಿಸಿದ ಮಾಜಿ ಸಚಿವ ಅಶ್ವತ್ಥ್ ನಾರಾಯಣ, ರಾಯರ ದರ್ಶನ ಪಡೆದರು. ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ಭ್ರಷ್ಟ ರಾಜ್ಯವನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಯಚೂರು (ಫೆ.24): ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ಗುರು ವೈಭವೋತ್ಸವದ ಸಂಭ್ರಮದಲ್ಲಿ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಭಾಗಿಯಾಗಿದರು. ರಾಯರ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಮಂತ್ರಾಲಯವು ಲಕ್ಷಾಂತರ ಭಕ್ತರ ಆತ್ಮಕ್ಕೆ ಶಕ್ತಿ ನೀಡುವ ಪುಣ್ಯಭೂಮಿ, ಮಹಾನ್ ಆಧ್ಯಾತ್ಮಿಕ ಕೇಂದ್ರವಾಗಿದೆ. ಬೇಡಿದ ವರ ನೀಡುವ ಗುರುಗಳ ಆಶೀರ್ವಾದ ಪಡೆಯಲು ನಾನು ಆಗಮಿಸಿದ್ದು, ರಾಯರ ಕೃಪೆ ಎಲ್ಲರ ಮೇಲಿರಲಿ' ಎಂದು ಭಕ್ತಿಪೂರ್ವಕವಾಗಿ ನುಡಿದರು.
ಕಾಂಗ್ರೆಸ್ಸಿಗರಿಗೆ ಅಧಿಕಾರದ ಆಸೆ, ಜನರ ಕಾಳಜಿ ಇಲ್ಲ
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಅಶ್ವತ್ಥ್ ನಾರಾಯಣ, ಕಾಂಗ್ರೆಸ್ ನಾಯಕರಿಗೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಟೀಕಿಸಿದರು. ಅಧಿಕಾರಕ್ಕೆ ಬಂದ ಉದ್ದೇಶವನ್ನೇ ಮರೆತು ನಾಯಕರು ತಮ್ಮ ತಮ್ಮ ಸ್ಥಾನಗಳಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತವರು ಬರೀ ಕುರ್ಚಿ ಕಾಳಗದಲ್ಲಿ ತೊಡಗಿದ್ದಾರೆ ಎಂದು ಮಂತ್ರಾಲಯದಲ್ಲಿ ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರದಲ್ಲಿ ದೇಶದಲ್ಲಿ ನಂ.1 ರಾಜ್ಯ ಸರ್ಕಾರ
ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕಿಡಿಕಾರಿದ ಅವರು, ಇಡೀ ರಾಜ್ಯದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿಲ್ಲ, ಬದಲಾಗಿ ಭ್ರಷ್ಟಾಚಾರ ಮಿತಿಮೀರಿದೆ. ಇಂದು ಇಡೀ ದೇಶದಲ್ಲೇ ಕರ್ನಾಟಕವನ್ನು ನಂಬರ್ ಒನ್ ಭ್ರಷ್ಟ ರಾಜ್ಯವನ್ನಾಗಿ ಕಾಂಗ್ರೆಸ್ ಮಾಡಿದೆ. ಜನಸಾಮಾನ್ಯರ ಸಂಕಷ್ಟ ಕೇಳುವವರಿಲ್ಲದಂತಾಗಿದೆ ಎಂದು ಭ್ರಷ್ಟ ಆಡಳಿತದ ವಿರುದ್ಧ ರಾಯರ ಸನ್ನಿಧಿಯಲ್ಲಿ ಗುಡುಗಿದರು.



