ಪರಪ್ಪನ ಅಗ್ರಹಾರ ಜೈಲಿನ ಮೇಲಿನ ದಾಳಿ ಕೇವಲ ಪ್ರಜ್ವಲ್ ರೇವಣ್ಣ ಸೆಲ್‌ಗೆ ಸೀಮಿತವಾಗಿಲ್ಲ, ಇದೊಂದು ರಾಜ್ಯಾದ್ಯಂತ ನಡೆದ ಪ್ರಕ್ರಿಯೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ

ಕಲ್ಬುರ್ಗಿ; ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ (ಸೆಲ್) ಮೇಲೆ ನಡೆದ ಸಿಸಿಬಿ ದಾಳಿ ಹಾಗೂ ಮೊಬೈಲ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಅಭಿವೃದ್ಧಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಲ್ಬುರ್ಗಿಯಲ್ಲಿ ಅತ್ಯಂತ ಕಟು ಹಾಗೂ ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಧ್ಯಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಚಿವರು, ಈ ಪ್ರಕರಣವನ್ನು ಅನಗತ್ಯವಾಗಿ ಒಂದೇ ವ್ಯಕ್ತಿಯ ಸುತ್ತ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬರೀ ಒಂದೇ ಸೆಲ್ ಮೇಲೆ ದಾಳಿಯಾಗಿಲ್ಲ!

ಕಲ್ಬುರ್ಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, "ರೇಡ್ ಆಗಿರುವುದು ಕೇವಲ ಪ್ರಜ್ವಲ್ ರೇವಣ್ಣ ಇರಿಸಲಾಗಿರುವ ಸೆಲ್‌ಗೆ ಮಾತ್ರವಲ್ಲ, ಇಡೀ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಈ ದಾಳಿ ನಡೆದಿದೆ" ಎಂದು ಸ್ಪಷ್ಟಪಡಿಸಿದರು. ಮೊಬೈಲ್ ಫೋನ್‌ಗಳು ಕೇವಲ ಪ್ರಜ್ವಲ್ ಬಳಿ ಮಾತ್ರ ಸಿಕ್ಕಿಲ್ಲ. ಜೈಲಿನಲ್ಲಿದ್ದ ಇತರ ಹಲವು ಕೈದಿಗಳ ಬಳಿಯೂ ಸಾಕಷ್ಟು ಮೊಬೈಲ್‌ಗಳು ಮತ್ತು ಶಂಕಿತ ವಸ್ತುಗಳು ಜಪ್ತಿಯಾಗಿವೆ. ದುರ್ದೈವದ ಸಂಗತಿಯೆಂದರೆ, ಮಾಧ್ಯಮದವರು ಕೇವಲ ಪ್ರಜ್ವಲ್ ರೇವಣ್ಣ ಅವರ ಒಂದೇ ವಿಷಯಕ್ಕೆ ಗರಿಷ್ಠ ಆದ್ಯತೆ ನೀಡಿ ಸುದ್ದಿ ಬಿತ್ತರಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

'ನಾನೇನು ಬರೀ ಪರಪ್ಪನ ಅಗ್ರಹಾರದ ಹೋಂ ಮಿನಿಸ್ಟರಾ?

ಸರ್ಕಾರದ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡ ಸಚಿವರು, "ನಾವು ಬರೀ ಪರಪ್ಪನ ಅಗ್ರಹಾರಕ್ಕೆ ಮಾತ್ರ ಸೀಮಿತವಾದ ಗೃಹ ಸಚಿವರಾ? ನಾನೇನು ಒಂದೇ ಒಂದು ಸೆಲ್‌ಗೆ ಮಾತ್ರ ಮಂತ್ರಿಯೇ?" ಎಂದು ಪ್ರಶ್ನಿಸಿದರು. ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಜೈಲುಗಳ ಭದ್ರತೆ ನಮ್ಮ ಆದ್ಯತೆಯಾಗಿದೆ. ಕೇವಲ ಬೆಂಗಳೂರಿನ ಪರಪ್ಪನ ಅಗ್ರಹಾರ ಮಾತ್ರವಲ್ಲದೆ, ಕಲ್ಬುರ್ಗಿ, ಮಂಡ್ಯ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಇರುವ ಪ್ರಮುಖ ಕಾರಾಗೃಹಗಳ ಮೇಲೆಯೂ ದಿಢೀರ್ ದಾಳಿಗಳನ್ನು ನಡೆಸಲಾಗಿದೆ ಎಂದರು.

ಅದು ರೂಟಿನ್‌ ಪ್ರಕ್ರಿಯೆ!

ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ಅಥವಾ ಮಾದಕ ವಸ್ತುಗಳ (ಡ್ರಗ್ಸ್) ಬಳಕೆ ನಡೆಯುತ್ತಿದೆ ಎಂಬ ನಿಖರ ಮಾಹಿತಿ ಬಂದಾಗ ಕಾನೂನು ಪ್ರಕಾರ ಸರ್ಪ್ರೈಸ್ ರೇಡ್ ಮಾಡುವುದು ರೂಟಿನ್ ಪ್ರಕ್ರಿಯೆ. ಅದನ್ನು ಮಾಡಬೇಡಿ ಎಂದರೆ ಹೇಗೆ? ಜೈಲಿನ ಭದ್ರತೆಯನ್ನು ಕಾಯ್ದುಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಖರ್ಗೆ ಪ್ರತಿಪಾದಿಸಿದರು.

ಕುಟುಂಬದ ಜವಾಬ್ದಾರಿ ಎಲ್ಲಿ ಹೋಯ್ತು?

ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಇತ್ತು ಹಾಗೂ ಅವರು ಜೈಲಿನಿಂದಲೇ ತಮ್ಮ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾದ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, "ಜೈಲಿನಲ್ಲಿ ಮೊಬೈಲ್ ಇಟ್ಟುಕೊಂಡು ಕಾನೂನುಬಾಹಿರವಾಗಿ ಸಂಪರ್ಕದಲ್ಲಿದ್ದಾಗ, ಅವರ ಕುಟುಂಬದವರೇ ಅದಕ್ಕೆ ತಡೆ ಒಡ್ಡಬೇಕಿತ್ತು. ಮೊಬೈಲ್ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ (ಕ್ರೈಮ್) ಎಂಬುದು ಎಲ್ಲರಿಗೂ ಗೊತ್ತಿದೆ" ಎಂದರು.

ಬುದ್ದಿ ಹೇಳಬೇಕಿತ್ತು ಕುಟುಂಬ!

ರೇವಣ್ಣ ಅವರದ್ದು ಸಾಮಾನ್ಯ ಅಥವಾ ಆರ್ಡಿನರಿ ಫ್ಯಾಮಿಲಿ ಅಲ್ಲ. ರಾಜಕೀಯವಾಗಿ ದೊಡ್ಡ ಹೆಸರು ಹೊಂದಿರುವ ಕುಟುಂಬ. ಈ ರೀತಿ ತಪ್ಪು ಮಾಡುತ್ತಿರುವುದನ್ನು ಕಂಡು, ಈಗಾಗಲೇ ಸಾಕಷ್ಟು ಮುಜುಗರ ಎದುರಿಸಿದ್ದೇವೆ, ಇನ್ನು ಮುಂದೆ ಹೀಗೆ ಮಾಡಿ ಮತ್ತಷ್ಟು ಮುಜುಗರಕ್ಕೆ ತಳ್ಳಬೇಡ ಎಂದು ಕುಟುಂಬದವರೇ ಅವರಿಗೆ ಬುದ್ಧಿ ಹೇಳಬಹುದಿತ್ತು. ಕುಟುಂಬದವರು ಹೋಗಲಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ನಮಗಾದರೂ ಒಂದು ಪತ್ರ ಬರೆದು 'ಯಾರೋ ಮೊಬೈಲ್ ತಲುಪಿಸಿದ್ದಾರೆ, ತನಿಖೆ ಮಾಡಿ' ಎಂದು ತಿಳಿಸಬಹುದಿತ್ತು. ಹಾಗೆ ಮಾಡಿದ್ದರೆ ಅದನ್ನು ಜವಾಬ್ದಾರಿಯುತ ನಾಯಕರ ಲಕ್ಷಣ ಎನ್ನಬಹುದಿತ್ತು" ಎಂದು ಹೆಚ್.ಡಿ. ಕುಮಾರಸ್ವಾಮಿ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.