Asianet Suvarna News Asianet Suvarna News

ಆಧುನಿಕ ಪರಿಕಲ್ಪನೆಯಲ್ಲಿ ಸೊರಬ ಅಭಿವೃದ್ಧಿಗೆ ಆದ್ಯತೆ: ಸಚಿವ ಮಧು ಬಂಗಾರಪ್ಪ

ಪಟ್ಟಣದ ನಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಹಿಂದೇಟು ಹಾಕಬಾರದು. ಪಟ್ಟಣವನ್ನು ಆಧುನಿಕತೆಯ ಪರಿಕಲ್ಪನೆಯಲ್ಲಿ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. 

Priority for Soraba development in modern concept Says Minister Madhu Bangarappa gvd
Author
First Published Aug 13, 2024, 11:39 PM IST | Last Updated Aug 13, 2024, 11:39 PM IST

ಸೊರಬ (ಆ.13): ಪಟ್ಟಣದ ನಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಹಿಂದೇಟು ಹಾಕಬಾರದು. ಪಟ್ಟಣವನ್ನು ಆಧುನಿಕತೆಯ ಪರಿಕಲ್ಪನೆಯಲ್ಲಿ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಗ್ಗಿಸಲು ಹಾಗೂ ಶುದ್ಧ ಕುಡಿಯುವ ನೀರು ಒದಗಿಸಲು ಶರಾವತಿ ಕುಡಿಯುವ ನೀರಿನ ಯೋಜನೆ ರೂಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದರು.

ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಿಗೂ ಶರಾವತಿ ನದಿಯಿಂದ ಸಮರ್ಪಕ ಕುಡಿಯುವ ನೀರಿನ ಯೋಜನೆ ರೂಪಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯದಲ್ಲಿಯೇ ಆಡಳಿತಾತ್ಮಕ ಅನುಮೋದನೆ ದೊರೆಯಲಿದೆ. ಯೋಜನೆಗೆ ಸಂಬಂಧಿಸಿದಂತೆ ಸಾಗರ ಹಾಗೂ ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರಿಗೆ ಸೊರಬದಲ್ಲಿ ಒಳಚರಂಡಿ ವ್ಯವಸ್ಥೆಗೆ ಜಾಗವನ್ನು ಹಸ್ತಾಂತರ ಹಾಗೂ ಸರ್ವೆಕಾರ್ಯ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಿದಾಗ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು. ಪುರಸಭೆ ವ್ಯಾಪ್ತಿಗೆ ಒಳಪಟ್ಟ ಕೊಡಕಣಿ, ಹಳೇಸೊರಬ, ಚಿಕ್ಕಶಕುನ, ಸೀಗೇಹಳ್ಳಿ, ನಡಹಳ್ಳಿ, ಜೇಡಿಗೇರಿ, ಮರೂರು ಗ್ರಾಮಗಳು ಗ್ರಾಮ ಪಂಚಾಯಿತಿಯಿಂದ ಹಸ್ತಾಂತರಗೊಂಡಿದ್ದು, ಅಲ್ಲಿನ ಸೊತ್ತುಗಳ ನಿರ್ವಹಣೆಗೆ ಕ್ರಮ ವಹಿಸುವ ಬಗ್ಗೆ ಚರ್ಚೆ ನಡೆಯಿತು.

ಪುರಸಭೆ ಸದಸ್ಯ ಪ್ರಸನ್ನ ಕುಮಾರ್ ದೊಡ್ಡಮನೆ, ನಟರಾಜ್ ಉಪ್ಪಿನರವರ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ, ರಂಗನಾಥಸ್ವಾಮಿ ದೇವಸ್ಥಾನದ ಹತ್ತಿರ ಈ ಹಿಂದಿನಿಂದಲೂ ತಂಗುದಾಣವಿದ್ದು, ಎಲ್ಲಾ ಬಸ್‌ಗಳು ಹಿಂದಿನಿಂದಲೂ ಇಲ್ಲಿಗೆ ಆಗಮಿಸುತ್ತಿದ್ದವು. ಆದರೆ ಇತ್ತೀಚಿಗೆ ಬಸ್‌ಗಳು ಅಲ್ಲಿಗೆ ಹೋಗದೇ ಇರುವುದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ. ಆದ್ದರಿಂದ ಮಿನಿ ಬಸ್ ತಂಗುದಾಣ ನಿರ್ಮಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ, ಅಕ್ಕ ಕೆಫೆ ತೆರಯಲು ಸ್ಥಳ ಒದಗಿಸಲು ಅನುಮತಿ, ಎನ್‌ಓಸಿ ಸಂಬಂಧ ಸರ್ವೇ ನಂ. 113 ನಿವಾಸಿಗಳ ಸ್ಥಳ ಪರಿಶೀಲನೆ.

ತಮಗೆ ಬೇಕಾದವರಿಗೆ ಮಾತ್ರ ಬಿಜೆಪಿ ಪಕ್ಷದಲ್ಲಿ ಸ್ಥಾನಮಾನ: ಕೆ.ಎಸ್‌.ಈಶ್ವರಪ್ಪ ಆಕ್ರೋಶ

ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಒತ್ತು, ಮುಕ್ತಿ ವಾಹನ ನಿರ್ವಹಣೆ, ಅಮೃತ್ 2.0 ಯೋಜನೆಯಡಿ ಕೆರೆ, ಪಾರ್ಕ್ ನಿರ್ಮಾಣ, ಚಿಕ್ಕಶಕುನ, ಜೆಡಗೇರಿ ಗ್ರಾಮಗಳು ಹಾಗೂ ಬಯಲು ಬಸವೇಶ್ವ ದೇವಸ್ಥಾನ ರಸ್ತೆ ಅಭಿವೃದ್ಧಿ, ಜೂನಿಯರ್ ಕಾಲೇಜು ಹಿಂಭಾಗದ ರಸ್ತೆ ಅಭಿವೃದ್ಧಿ, ಬಾಲಕಿಯರ ವಿದ್ಯಾರ್ಥಿ ನಿಲಯಗಳು, ಬಾಲಕರ ಶಾಲೆ, ಪ್ರೌಢಶಾಲೆಗೆ ಕುಡಿಯು ನೀರಿನ ವ್ಯವಸ್ಥೆ, ಕೈಗಾರಿಕಾ ವಸಾಹತು ಕೇಂದ್ರಕ್ಕೆ ಮೂಲಭೂತ ಸೌಕರ್ಯ, ಅಪಾಯಕಾರಿ ಮರಗಳ ತೆರವಿಗೊಳಿಸುವುದು, ಎಲ್ಲ ವಾರ್ಡ್ಗಳ ಸ್ವಚ್ಛತೆಗೆ ಆದ್ಯತೆ ನೀಡುವ ಬಗ್ಗೆ ಚರ್ಚಿಸಲಾಯಿತು. ಸಾಗರ ಉಪ ವಿಭಾಗಧಿಕಾರಿ ಹಾಗೂ ಆಡಳಿತಧಿಕಾರಿ ಆರ್. ಯತೀಶ್, ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ, ಪ್ರಭಾರ ಮುಖ್ಯಾಧಿಕಾರಿ ಚಂದನ್, ಸೇರಿದಂತೆ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು ಹಾಜರಿದ್ದರು.

Latest Videos
Follow Us:
Download App:
  • android
  • ios