Asianet Suvarna News Asianet Suvarna News

ಪುಲ್ವಾಮ ದಾಳಿ: ಮಂಗಳೂರು ಮಸೀದಿಗಳಲ್ಲಿ ಖಂಡನಾ ಸಭೆ; ಯೋಧರ ಜತೆ ನಿಲ್ಲಲು ಕರೆ

  • ಗುರುವಾರ [ಫೆ.14]ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ಮೇಲೆ ಉಗ್ರರ ಆತ್ಮಾಹುತಿ ದಾಳಿ
  • ಉಗ್ರರ ಕೃತ್ಯಕ್ಕೆ ಜಗತ್ತಿನಾದ್ಯಂತ ವ್ಯಾಪಕ ಆಕ್ರೋಶ; ಭಾರತದ ಜೊತೆ ನಿಂತ ವಿಶ್ವ ಸಮುದಾಯ

 

Prayer For Martyr Soldiers in Mangalore Mosques
Author
Bengaluru, First Published Feb 15, 2019, 5:55 PM IST

ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ಅಟ್ಟಹಾಸಕ್ಕೆ  44 ಯೋಧರು ಹುತಾತ್ಮರಾಗಿದ್ದಾರೆ. ಉಗ್ರರ ಪೈಶಾಚಿಕ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದ ಪ್ರಾರ್ಥನಾ ಸಭೆಗಳಲ್ಲಿ ಉಗ್ರರ ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸಲಾಯಿತು. ಈ ವಿಷಯಗಳಲ್ಲಿ ರಾಜಕೀಯ ನಡೆಯಬಾರದು, ಭಾರತೀಯರೆಲ್ಲರೂ ಸೇರಿ ಒಟ್ಟಾಗಿ ಇವುಗಳನ್ನು ಎದುರಿಸಬೇಕು ಎಂದು ಧರ್ಮಗುರುಗಳು ಕರೆ ನೀಡಿದ್ದಾರೆ. 

"

ಈ ಕೃತ್ಯವು ರಾಜಕೀಯ ಹಿತಾಸಕ್ತಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕಾದ ಮತ್ತು ಕೃತ್ಯದ ಹಿಂದಿರುವವರು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳದಂತೆ ತಡೆಯಬೇಕಾದ ಅಗತ್ಯ ಇದೆ. ಈ ದೇಶ ನಮ್ಮದು ಮತ್ತು ಇದರ ಬಗೆಗಿನ ಕಾಳಜಿಯೂ ನಮ್ಮಲ್ಲಿರಬೇಕು. ಅಲ್ಲಾಹನು ಯೋಧರ ಕುಟುಂಬಕ್ಕೆ ಸಾಂತ್ವನವನ್ನು ನೀಡಲಿ ಎಂದು ಮಸ್ಜಿದುಲ್ ಹುದಾ ತೊಕ್ಕೊಟ್ಟು ಇದರ ಖತೀಬರಾದ ಮುಹಮ್ಮದ್ ಕುಂಞಯವರು ಹೇಳಿದರು. 

ಇದನ್ನೂ ಓದಿ: ಭಾರತ ಒಡೆಯುವುದು ಅಸಾಧ್ಯ, ಸರ್ಕಾರದೊಂದಿಗೆ ನಾವಿದ್ದೇವೆ: ರಾಹುಲ್ ಗಾಂಧಿ

ಕಚ್ಚೀ ಮೇಮನ್ ಮಸೀದಿಯಲ್ಲಿ ಜುಮಾ ಖುತ್ಬಾ ನೀಡಿದ ಮೌಲಾನ ಶೋಯೆಬ್ ಅವರು, ಅಕ್ರಮವನ್ನು ಅಲ್ಲಾಹನು ನಿಷಿದ್ಧಗೊಳಿಸಿದ್ದಾನೆ. ಯೋಧರ ಹತ್ಯೆಯು ಅಲ್ಲಾಹನ ಮೇಲೆ ನಡೆಸಿದ ಅಕ್ರಮವಾಗಿದೆ. ನಾವೆಲ್ಲ ಈ ಸಂದರ್ಭದಲ್ಲಿ ಯೋಧರ ಜತೆ ನಿಂತು ದೇಶಕ್ಕೆ ಬಲ ನೀಡಬೇಕಾಗಿದೆ ಎಂದರು.

ಮಂಗಳೂರಿನ ಮಸ್ಜಿದುನ್ನೂರ್‍ನಲ್ಲಿ ಜುಮಾ ಖುತ್ಬಾ ನೀಡಿದ ಮೌಲಾನ ನಫ್ಸಲ್ ಅವರು, ಒಬ್ಬನ ಹತ್ಯೆಯು ಇಡೀ ಮಾನವ ಕೋಟಿಯ ಹತ್ಯೆಗೆ ಸಮ ಎಂದು ಕುರ್‍ಆನ್ ಹೇಳುತ್ತದೆ. ಯೋಧರ ಹತ್ಯೆಯನ್ನು ಖಂಡಿಸುವುದಕ್ಕೆ ಇದಕ್ಕಿಂತ ಬೇರೆ ಬಲ ಬೇಕಿಲ್ಲ ಎಂದರು.

ಇದನ್ನೂ ಓದಿ:  ಹಲವು ದಿನಗಳ ಹಿಂದೆಯೇ ಗುಪ್ತಚರ ಸಂಘಟನೆಗಳಿಂದ ಎಚ್ಚರಿಕೆ

ಬೋಳಂಗಡಿ ಹವ್ವಾ ಮಸೀದಿಯ ಖತೀಬರಾದ ಯಹ್ಯಾ ತಂಙಳ್ ಮದನಿಯವರು ಖುತ್ಬಾ ಪ್ರವಚನ ನೀಡುತ್ತಾ, ಇದು ಖಂಡನಾರ್ಹ ಕೃತ್ಯ. ಈ ಕೃತ್ಯದ ವಿರುದ್ಧ ಸರ್ವ ಮುಸ್ಲಿಮರು ಒಂದಾಗಿದ್ದಾರೆ ಎಂದರು.ಕಲ್ಲೇಗ ಜುಮಾ ಮಸೀದಿ ಪುತ್ತೂರು ಇಲ್ಲಿನ ಧರ್ಮ ಗುರುಗಳಾದ ಮೌಲಾನ ಅಬೂಬಕರ್ ಜಲಾಲಿ ಖುತ್ಬಾ ನೀಡುತ್ತಾ, ಯೋಧರ ಹತ್ಯೆ ಕೃತ್ಯವನ್ನು ಹೃದಯದಿಂದಲೂ ಮಾತಿನಿಂದಲೂ ಖಂಡಿಸುತ್ತೇನೆ. ಭಾರತದ ಪ್ರತೀ ಮಸೀದಿಗಳು ಸೈನಿಕರ ಸುರಕ್ಷತೆಗಾಗಿ ಪ್ರಾರ್ಥಿಸಬೇಕು ಎಂದು ಕರೆ ಕೊಟ್ಟರು.

Follow Us:
Download App:
  • android
  • ios