ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಡ್ರಗ್ಸ್ ಪೂರೈಸಲು ಯತ್ನಿಸಿದ ವಾರ್ಡನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೋಟ್ಯಂತರ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದ್ದು, ಕೆಲಸದ ಮನೆಯಲ್ಲಿ ಕಳ್ಳತನ ಮಾಡಿದ ಮಹಿಳೆಯನ್ನೂ ಬಂಧಿಸಲಾಗಿದೆ.

ಬೆಂಗಳೂರು: ಕಾರಾಗೃಹದೊಳಗೆ ಡ್ರಗ್ಸ್ ಪೂರೈಸಲು ಯತ್ನಿಸಿದ ಆರೋಪದ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಾರ್ಡನ್‌ವೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ವಾರ್ಡನ್ ಪ್ರಕಾಶ್ ಗಾವಡೆ ಬಂಧಿತನಾಗಿದ್ದು, ಇತ್ತೀಚೆಗೆ ಕರ್ತವ್ಯಕ್ಕೆ ಹಾಜರಾಗಲು ಆಗಮಿಸಿದ ಪ್ರಕಾಶ್‌ನನ್ನು ಕಾರಾಗೃಹದ ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ಪರಿಶೀಲಿಸಿದ್ದಾರೆ. ಈ ವೇಳೆ ಆತನ ಬಳಿ ಡ್ರಗ್ಸ್ ಪತ್ತೆಯಾಗಿದೆ. ಈ ಬಗ್ಗೆ ಕಾರಾಗೃಹದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕಾಶ್‌ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಲವು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಕಾಶ್ ಕೆಲಸ ಮಾಡುತ್ತಿದ್ದ. ಎಂದಿನಂತೆ ಫೆ.9 ರಂದು 6.15ರ ಸುಮಾರಿಗೆ ಕೆಲಸಕ್ಕೆ ಹಾಜರಾಗಲು ಸಮವಸ್ತ್ರದಲ್ಲೇ ಆತ ಬಂದಿದ್ದ. ಪ್ರವೇಶ ದ್ವಾರದಲ್ಲಿ ಪ್ರಕಾಶ್‌ನನ್ನು ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲಿ ಗಾಂಜಾ ಸೇದುವ ಕೊಳವೆ ಹಾಗೂ ಪ್ಲಾಸ್ಟಿಕ್‌ ಪೇಪರ್‌ನಲ್ಲಿ ಸುತ್ತಿಟ್ಟಿದ್ದ ಗಾಂಜಾ, ಸುಮಾರು 15 ಗ್ರಾಂ ಮೆಥಾಂಫೆಟಮೈನ್‌ ಡ್ರಗ್ಸ್‌ ಸಿಕ್ಕಿದೆ. ಆರೋಪಿಯು ಯಾರಿಗೆ ಡ್ರಗ್ಸ್‌ ನೀಡಲು ತೆಗೆದುಕೊಂಡು ಹೋಗುತ್ತಿದ್ದ ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಐಎನಲ್ಲಿ ಮತ್ತೆ ಡ್ರಗ್ಸ್‌ ಬೇಟೆ:₹1.5 ಕೋಟಿಯ ಹೈಡ್ರೋ ಗಾಂಜಾ ಜಪ್ತಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಕಳ್ಳ ಮಾರ್ಗದಲ್ಲಿ ಬಂದ ಒಂದೂವರೆ ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೆಐಎಗೆ ಬ್ಯಾಂಕಾಕ್‌ನಿಂದ ಮಂಗಳವಾರ ಬಂದಿಳಿದ ಪೆಡ್ಲರ್‌ನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು, ಆತನಿಂದ ಒಂದೂವರೆ ಕೋಟಿ ರು. ಮೌಲ್ಯದ 4.5 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಮೂರು ದಿನಗಳ ಹಿಂದಷ್ಟೇ 5.73 ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾವನ್ನು ಕಸ್ಟಮ್ಸ್ ವಶಪಡಿಸಿಕೊಂಡಿತ್ತು. ಈಗ ಮತ್ತೆ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ.

ಇದನ್ನೂ ಓದಿ: Bengaluru Traffic: ಇಂದು ಬೆಂಗಳೂರಿನ ಈ ರಸ್ತೆಗಳತ್ತ ಹೋಗದಿರಿ! ಪರ್ಯಾಯ ಮಾರ್ಗದ ಮಾಹಿತಿ

ಕೆಲಸಕ್ಕಿದ್ದ ಮನೆಯಲ್ಲಿ ಕಳವು: ₹4 ಲಕ್ಷ ಮೌಲ್ಯದ ಚಿನ್ನ ಜಪ್ತಿ

ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕ‍ಳವು ಮಾಡಿದ್ದ ಮನೆಕೆಲಸದಾಳುವನ್ನು ಸುಬ್ರಹ್ಮಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಆರೋಪಿಯಿಂದ 4 ಲಕ್ಷ ರು. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಮನೆ ಮಾಲಿಕರಿಗೆ ಗೊತ್ತಾಗದಂತೆ ಆರೋಪಿ ಕಳವು ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಕ್ಕಿದ್ದೇ ಚಾನ್ಸ್‌, ಗ್ಯಾಸ್‌ ವಿಚಾರ ಇಟ್ಕೊಂಡು ಹಗಲು ದರೋಡೆಗೆ ಇಳಿದ ಬೆಂಗಳೂರು ಹೋಟೆಲ್‌ಗಳು!