ಗ್ಯಾಸ್‌ ಸಿಲಿಂಡರ್‌ಗಳ ಕೊರತೆ ಹಿನ್ನೆಲೆಯಲ್ಲಿ ನಗರದ 30ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳಲ್ಲಿ ಬುಧವಾರ ಊಟ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಸಿಲಿಂಡರ್ ಪೂರೈಕೆಯಾಗದಿದ್ದರೆ ನಗರದ 175ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಬಂದ್ ಮಾಡುವ ಆತಂಕ

ಬೆಂಗಳೂರು : ಗ್ಯಾಸ್‌ ಸಿಲಿಂಡರ್‌ಗಳ ಕೊರತೆ ಹಿನ್ನೆಲೆಯಲ್ಲಿ ನಗರದ 30ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳಲ್ಲಿ ಬುಧವಾರ ಊಟ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಕಿಚನ್‌ಗಳಿಗೆ ಸಮರ್ಪಕ ಸಿಲಿಂಡರ್ ಪೂರೈಕೆಯಾಗದಿದ್ದರೆ ನಗರದ 175ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಬಂದ್ ಮಾಡುವ ಆತಂಕ ಎದುರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

33 ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಮಲ್ಲೇಶ್ವರದ ಕಿಚನ್‌ಗೆ ಸಿಲಿಂಡರ್‌ಗಳು ಪೂರೈಕೆಯಾಗದ ಕಾರಣ ಮಧ್ಯಾಹ್ನದ ಊಟ ತಯಾರಿಸಿಲ್ಲ. ಇದರಿಂದ 33 ಕ್ಯಾಂಟೀನ್‌ಗಳಿಗೆ ಊಟ ಹೋಗಿಲ್ಲ. ಸಂಜೆಯೂ ಅದೇ ಪರಿಸ್ಥಿತಿ ಇತ್ತು.

ಎರಡ್ಮೂರು ದಿನಗಳಿಗಾಗುವಷ್ಟು ಸಿಲಿಂಡರ್‌ಗಳು ಲಭ್ಯ

ಈ ಕುರಿತು ಪ್ರತಿಕ್ರಿಯಿಸಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಎರಡ್ಮೂರು ದಿನಗಳಿಗಾಗುವಷ್ಟು ಸಿಲಿಂಡರ್‌ಗಳು ಲಭ್ಯವಿದೆ ಎಂದು ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಗುತ್ತಿಗೆದಾರರು ಹೇಳಿದ್ದಾರೆ. ಎಲೆಕ್ಟ್ರಿಕ್ ಸ್ಟೌ ಬಳಕೆ ಮಾಡಿಕೊಂಡು ಆಹಾರ ತಯಾರಿಸುವ ವ್ಯವಸ್ಥೆಯೂ ಇಲ್ಲ. ಪರ್ಯಾಯ ವ್ಯವಸ್ಥೆ ಮತ್ತು ಸಮಸ್ಯೆಯ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ಹೇಳಿದರು.

ನಗರದಲ್ಲಿ 175ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳಿವೆ. ಸಿಲಿಂಡರ್ ಇಲ್ಲದೇ ಆಹಾರ ಪೂರೈಕೆ ಆಗದಿದ್ದರೆ ಕ್ಯಾಂಟೀನ್ ನಂಬಿಕೊಂಡಿರುವ ಸಾವಿರಾರು ಬಡವರು, ಕಾರ್ಮಿಕರಿಗೆ ಊಟ, ತಿಂಡಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಶಾಲೆಗಳ ಬಿಸಿಯೂಟಕ್ಕೂ ಸಮಸ್ಯೆ

ವಿವಿಧ ಸರ್ಕಾರೇತರ ಸಂಸ್ಥೆಗಳಿಂದ ಊಟ ತರಿಸಿಕೊಳ್ಳುವ ಜಿಬಿಎ ಅಧೀನದ ಶಾಲೆಗಳ ಮಧ್ಯಾಹ್ನದ ಊಟಕ್ಕೂ ಎಲ್‌ಪಿಜಿ ಕೊರತೆಯ ಆತಂಕ ಎದುರಾಗಿದೆ. ಮಧ್ಯಾಹ್ನದ ಬಿಸಿಯೂಟವನ್ನು ಹೇಗೆ ಮುಂದುವರಿಸಬೇಕು ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತರು ಹೇಳಿದರು.