ಮಲ್ಲೂರು ಮತ್ತು ಮುರಕಟ್ಟಿ ಗ್ರಾಮಗಳಲ್ಲಿ ನಡೆದಿರುವ ಈ ಜೆಜೆಎಂ ಕಾಮಗಾರಿಯ ಕೆಲಸವನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಅಲ್ಲಿಯವರೆಗೂ ಗುತ್ತಿಗೆದಾರನ ಬಿಲ್‌ನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಿದ ಮುರಕಟ್ಟಿ ಗ್ರಾಮ ಪಂಚಾಯತಿ ಸದಸ್ಯ ನಾಗರಾಜ್ ಘಾಟೀನ್ 

ವರದಿ: ಪರಮೇಶ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

Add Asianetnews Kannada as a Preferred SourcegooglePreferred

ಧಾರವಾಡ(ನ.12):  ರಾಜ್ಯದಲ್ಲಿ ಬಹುತೇಕ ಕಡೆ ಜಲ್ ಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೆ ನೀರು ಕೊಡುವ ಕೆಲಸ ಭರದಿಂದ ಸಾಗಿದೆ. ಆದರೆ ಈ‌ ನೀರು ಸರಬರಾಜು ಮಾಡುವ ಕೆಲಸ ಯಾಕೋ ಹಳ್ಳ ಹಿಡಿದಂತೆ ಕಾಣುತ್ತಿದೆ ಯಾಕಂದ್ರೆ ಗುತ್ತಿಗೆದಾರರು ಗುತ್ತಿಗೆ ಪಡೆದ ಮೇಲೆ ಕಾಮಗಾರಿ ಬೇಕಾಬಿಟ್ಟಿಯಾಗಿ ಮಾಡುತಿದ್ದಾರೆ. ಇಂಥದ್ದೇ ಕಾಮಗಾರಿ ಒಂದು ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. 

ತಾಲೂಕಿನ ದೇವರಹುಬ್ಬಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಮಲ್ಲೂರು, ಮುರಕಟ್ಟಿಯಲ್ಲಿ ನಡೆಸಲಾಗಿರುವ ಜಲ ಜೀವನ ಮಿಷನ್ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಕಾಮಗಾರಿಯನ್ನ ಗ್ರಾಮದಲ್ಲಿ ಸಂಪೂರ್ಣ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸಿ ಸದ್ಯ ಗ್ರಾಮ ಪಂಚಾಯತಿ ಸದಸ್ಯರು ಜಿಲ್ಲಾಧಿಕಾರಿ ಮತ್ತು ಇಇಓ ಅವರಿಗೆ ದೂರು ಕೊದಟಿದ್ದಾರೆ. 

ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಸಹೋದರರಿಂದ ಹಲ್ಲೆ; ಕರ್ತವ್ಯನಿರತ ಪೊಲೀಸ್ ಪೇದೆ ಗಂಭೀರ ಗಾಯ!

ದೇವರಹುಬ್ಬಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ನಾಗರಾಜ ಘಾಟಿನ್ ಎಂಬುವವರು ಧಾರವಾಡ ಜಿಲ್ಲಾ ಪಂಚಾಯ್ತಿ ಸಿಇಓ ಅವರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಅಂದಾಜು 95 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಈ ಯೋಜನೆಯನ್ನು ಮಲ್ಲೂರು ಹಾಗೂ ಮುರಕಟ್ಟಿಯಲ್ಲಿ ನಡೆಸಲಾಗುತ್ತಿದೆ ಆದರೆ, ಸರ್ಕಾರದ ಯಾವುದೇ ಮಾರ್ಗಸೂಚಿಯನ್ವಯ ಇಲ್ಲಿ ಕಾಮಗಾರಿ ನಡೆಸಿಲ್ಲ. ಅಲ್ಲದೇ ಕಳಪೆ ಗುಣಮಟ್ಟದ ಸಲಕರಣೆಗಳನ್ನು ಈ ಕಾಮಗಾರಿಗೆ ಬಳಕೆ ಮಾಡಲಾಗಿದೆ. ನಿಯಮದ ಪ್ರಕಾರ ಪೈಪ್‌ಲೈನ್ ಮೂರು ಅಡಿ ಒಳಗೆ ಇರಬೇಕು ಆದರೆ ರಸ್ತೆಯ ಒಂದು ಅಡಿ ಒಳಗೆ ಮಾತ್ರ ಪೈಪಲೈನ್ ಹಾಕಲಗಿದೆ. ಇದರಿಂದ ವಾಹನ ಒಡಾಡಿದರೆ ಪೈಪಲೈನ ಒಡೆದು ಹೋಗಲಿದೆ. ಅಲ್ಲದೇ ಕೆಲವು ಕಡೆ ಚರಂಡಿ ಮೇಲೆಯೇ ಪೈಪ್ ಹಾಕಿದ್ದು ಕೂಡ ಕಾಣಿಸುತ್ತದೆ.

ಇದೇ ವಿಷಯವಾಗಿ ಗ್ರಾಮ ಪಂಚಾಯ್ತಿ ಪಿಡಿಓ ಅವರಿಗೂ ತಕರಾರು ಸಲ್ಲಿಸಲಾಗಿದೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಕಾಮಗಾರಿ ಪೂರ್ಣಗೊಂಡಿದೆ ಎಂದು ಹಸ್ತಾಂತರ ಕೂಡ ಮಾಡಿಕೊಂಡಿದ್ದಾರೆ ಇದರಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿರುವುದು ಕಂಡು ಬರುತ್ತಿದೆ ಎಂದು ನಾಗರಾಜ ಆರೋಪಿಸಿದ್ದಾರೆ. ಇತ್ತ ಅಧಿಕಾರಿಗಳು ಸ್ಥಳಕ್ಕೆ ಹೋಗಿ ನೋಡಿಯೇ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಅಂತಾರೆ ಆದರೆ ಕಾಮಗಾರಿ ಹಸ್ತಾಂತರ ನಮಗೆ ಇನ್ನು ಆಗಿಲ್ಲ ಎಂಬ ಹಿರಿಯ ಅಧಿಕಾರಿಗಳು ಹೇಳ್ತಾರೆ. 

ವಕ್ಫ್ ಅಷ್ಟೇ ಅಲ್ಲ, ಮುಜುರಾಯಿ ಇಲಾಖೆ ಜಾಗವೂ ಕಬಳಿಕೆ ಆಗಿದೆ: ಸಂತೋಷ್ ಲಾಡ್

ಇಡೀ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಆರಂಭವಾದ ಕಾಮಗಾರಿ ಕಳಪೆ ಕಾಮಗಾರಿ ಆಗಿದೆ ಎಂದು ಗ್ರಾಮಸ್ಥರು ದೂರು ಕೊಟ್ಟಿದ್ದಾರೆ. ಇನ್ನು ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕೂಡಾ ಈ ಗ್ರಾಮಕ್ಕೆ‌ ಭೇಟಿ ನೀಡಿ ಸಂಭಂದಪಟ್ಟವರ ಮೇಲೆ‌ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಮಲ್ಲೂರು ಮತ್ತು ಮುರಕಟ್ಟಿ ಗ್ರಾಮಗಳಲ್ಲಿ ನಡೆದಿರುವ ಈ ಜೆಜೆಎಂ ಕಾಮಗಾರಿಯ ಕೆಲಸವನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಅಲ್ಲಿಯವರೆಗೂ ಗುತ್ತಿಗೆದಾರನ ಬಿಲ್‌ನ್ನು ತಡೆ ಹಿಡಿಯಬೇಕು ಎಂದು ಮುರಕಟ್ಟಿ ಗ್ರಾಮ ಪಂಚಾಯತಿ ಸದಸ್ಯ ನಾಗರಾಜ್ ಘಾಟೀನ್ ಆಗ್ರಹಿಸಿದ್ದಾರೆ. ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.