Asianet Suvarna News Asianet Suvarna News

ವಿಜಯಪುರ: ವೈದ್ಯ ಸಿಬ್ಬಂದಿ ಇಲ್ಲದೇ ರೋಗಿಗಳ ಪರದಾಟ..!

ತಾಂಬಾ ಗ್ರಾಮದಲ್ಲಿ ಅಂದಾಜು 25000 ಜನಸಂಖ್ಯೆ ಇದೆ. ಇಷ್ಟೊಂದು ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಇರುವ ಒಂದೇ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯ ಸಿಬ್ಬಂದಿ ಇಲ್ಲದೇ ನರಳುತ್ತಿದೆ. ಗ್ರಾಮ ಹಾಗೂ ಸುತ್ತಲ ಗ್ರಾಮಗಳ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿ ಎಂಬ ಉದ್ದೇಶದಿಂದ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಉತ್ತಮ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಆದರೆ, ವೈದ್ಯ ಸಿಬ್ಬಂದಿ ಇಲ್ಲದ್ದಕ್ಕೆ ರೋಗಿಗಳು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

Patients Faces Problems for No Doctors in Primary Health Centre at Tamba in Vijayapura grg
Author
First Published Nov 16, 2023, 8:28 PM IST

ಲಕ್ಷ್ಮ ಣ ಹಿರೇಕುರಬರ

ತಾಂಬಾ(ನ.16): ಎಲ್ಲರೂ ಆರೋಗ್ಯದಿಂದ ಇರಲಿ ಎಂಬ ಉದ್ದೇಶದಿಂದ ಸರ್ಕಾರ ಪ್ರತಿವರ್ಷ ಆರೋಗ್ಯ ಕ್ಷೇತ್ರಕ್ಕೆ ಕೋಟ್ಯಂತರ ರುಪಾಯಿ ಅನುದಾನ ನೀಡುತ್ತಿದೆ. ಆದರೆ, ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಅದೆಷ್ಟೋ ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯ ಸಿಬ್ಬಂದಿ ಹಾಗೂ ಸುಸಜ್ಜಿತ ಸೌಲಭ್ಯ ಇಲ್ಲದೇ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ. ಇದರಲ್ಲಿ ತಾಂಬಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಒಂದು.
ತಾಂಬಾ ಗ್ರಾಮದಲ್ಲಿ ಅಂದಾಜು 25000 ಜನಸಂಖ್ಯೆ ಇದೆ. ಇಷ್ಟೊಂದು ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಇರುವ ಒಂದೇ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯ ಸಿಬ್ಬಂದಿ ಇಲ್ಲದೇ ನರಳುತ್ತಿದೆ. ಗ್ರಾಮ ಹಾಗೂ ಸುತ್ತಲ ಗ್ರಾಮಗಳ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿ ಎಂಬ ಉದ್ದೇಶದಿಂದ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಉತ್ತಮ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಆದರೆ, ವೈದ್ಯ ಸಿಬ್ಬಂದಿ ಇಲ್ಲದ್ದಕ್ಕೆ ರೋಗಿಗಳು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

2 ವರ್ಷದಿಂದ ಇಲ್ಲ ವೈದ್ಯ ಸಿಬ್ಬಂದಿ:

ಇಲ್ಲಿ ಎರಡು ವೈದ್ಯರ ಹುದ್ದೆ ಮಂಜೂರಾತಿ ಇದೆ. ಒಂದು ಹುದ್ದೆ ಎಂ.ಬಿ.ಬಿ.ಎಸ್ ಮತ್ತೊಂದು ಬಿಎಎಂಎಸ್. ಆದರೆ, ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ ಸಿಬ್ಬಂದಿ ಹೆಚ್ಚು ದಿನ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕರ್ತವ್ಯಕ್ಕೆ ಬರುತ್ತಾರೆ, ಕೆಲವು ತಿಂಗಳು ಮಾಡುತ್ತಾರೆ ಮತ್ತೆ ಬೇರೆಡೆ ವರ್ಗವಾಗಿ ಹೋಗುತ್ತಿದ್ದಾರೆ. ಹೀಗಾಗಿ ಈ ಆಸ್ಪತ್ರೆ ಇದೀಗ ವೈದ್ಯ ಸಿಬ್ಬಂದಿ ಇಲ್ಲದೇ ಜನರಿಂದ ದೂರವಾಗಿದೆ. ಇಂಡಿ ತಾಲೂಕಿನ ಆರೋಗ್ಯ ಅಧಿಕಾರಿಗಳು ತಾಂಬಾ ಗ್ರಾಮದ ಆಸ್ಪತ್ರೆ ಸಿಂದಗಿ ಮತಕ್ಷೇತ್ರದಲ್ಲಿ ಬರುವದೆಂದು ಮತ್ತು ಸಿಂದಗಿ ತಾಲೂಕಿನ ಆರೋಗ್ಯ ಅಧಿಕಾರಿಗಳು ಇಂಡಿ ತಾಲೂಕಿಗೆ ಸಂಬಂಧಿಸಿದೆ ಎಂದು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಗಂಡ-ಹೆಂಡರ ನಡುವೆ ಕೂಸು ಬಡವಾಯಿತು ಎಂಬಂತೆ ತಾಂಬಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡಾ ಬಡವಾಗಿದೆ.

ವಿಜಯಪುರದಲ್ಲಿ ಭೀಕರ ಬರ: ಫೀಲ್ಡಿಗಿಳಿದ ಸಚಿವ ಎಂ.ಬಿ.ಪಾಟೀಲ್..!‌

ಮನವಿ ಕೊಟ್ಟರೂ ಪ್ರಯೋಜನವಿಲ್ಲ:

ಕಳೆದ ವರ್ಷದ ಸಿಂದಗಿ ಉಪ ಚುನಾವಣೆಯಲ್ಲಿ ತಾಂಬಾ ಆಸ್ಪತ್ರೆ ಸುಧಾರಣೆಗಾಗಿ ಗ್ರಾಮಸ್ಥರು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ, ದೇವೇಗೌಡ, ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿದಂತೆ ಎಲ್ಲ ರಾಜಕೀಯ ಧುರೀಣರಿಗೆ ಮನವಿ ಕೊಟ್ಟು ವಿನಂತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇಂಡಿ, ವಿಜಯಪುರವೇ ಗತಿ:

ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ಇಲ್ಲ ಇಲ್ಲಿಯ ಜನರು ಕಾಯಿಗಳು ಬಂದರೆ ದೂರದ ಇಂಡಿ, ವಿಜಯರಪುರಕ್ಕೆ ಹೋಗುವುದು ಅನಿವಾರ್ಯವಾಗಿದೆ. ಇನ್ನೂ ರಾತ್ರಿ ಹೊತ್ತಿನಲ್ಲಿ ಹೆರಿಗೆಗೆ ತಾಂಬಾ ಮತ್ತು ಸುತ್ತಲಿನ ಗ್ರಾಮಸ್ಥರು ವಿಜಯಪುರಕ್ಕೆ ಹೋಗುವುದು ದುರ್ದೈವ. ಶ್ರೀಮಂತರು ಹೇಗಾದರೂ ಮಾಡಬಹುದು. ಬಡವರು ಏನೂ ಮಾಡಬೇಕು ಎಂಬುವುದು ಗ್ರಾಮಸ್ಥರ ಮಾತಾಗಿದೆ.

ಇದ್ದೂ ಇಲ್ಲದಂತಿರುವ ಆ್ಯಂಬುಲೆನ್ಸ್‌:

ಆಸ್ಪತ್ರೆಯ ಆ್ಯಂಬುಲೆನ್ಸ್‌ ಟೈರ್‌ ಇಲ್ಲದೇ ಧೂಳಿಗೆ ಆಸರೆಯಾಗಿ ನಿಂತಿದೆ. ಯಾರಾದರೂ ತಾಂಬಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 108 ವಾಹನ ಇದೆ ಎಂದು ಕರೆ ಮಾಡಿದರೆ ಅವರಿಗೆ ನಿರಾಶೆಯೇ ಗತಿ. ಹೀಗಾಗಿ ಗ್ರಾಮದಲ್ಲಿ ಯಾರಾದರೂ ತೀವ್ರ ಅನಾರೋಗ್ಯ ಅಥವಾ ಅಪಘಾತವಾದರ ಹೆಚ್ಚು ದುಡ್ಡು ಕೊಟ್ಟು ಖಾಸಗಿ ವಾಹನ ಮಾಡಿಕೊಂಡು ಆಸ್ಪತ್ರೆಗೆ ಹೋಗಬೇಕಾಗಿದೆ.

ಬಿಜೆಪಿಯವರೇ ವಿರೋಧ ಪಕ್ಷದ ನಾಯಕರಾಗುತ್ತಾರೆ: ಗೋವಿಂದ ಕಾರಜೋಳ

ಡಾ.ವೈ.ಎಸ್.ಪಾಟೀಲ ಅವರು ಆಸ್ಪತ್ರೆಯಿಂದ ಹೋದಾಗಿನಿಂದ ತಾಂಬಾ ಗ್ರಾಮದ ಬಡ ರೋಗಿಗಳು ಪರದಾಡುತ್ತಿದ್ದಾರೆ. ಆಸ್ಪತ್ರೆಗೆ ವೈದ್ಯರನ್ನು ನೇಮಿಸಬೇಕೆಂದು ಡಿಎಚ್‌ಒ ಅವರಿಗೆ ಮನವಿಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದು ತಂಗಾ ಕರ್ನಾಟಕ ರಕ್ಷಣಾ ವಲಯ ಅಧ್ಯಕ್ಷ ತಾಂಬಾ ವಿನಾಯಕ ತಿಳಿಸಿದ್ದಾರೆ.  

ಎಂ.ಬಿ.ಬಿ.ಎಸ್ ಅಥವಾ ವೈದ್ಯಕೀಯ ಶಿಕ್ಷಣ ಹೊಂದಿದ ವಿದ್ಯಾರ್ಥಿಗಳು ಆಸಕ್ತಿ ಇದ್ದರೇ ಕೂಡಲೇ ತಾಂಬಾ ಆಸ್ಪತ್ರೆಗೆ ನೇಮಕಾತಿ ಮಾಡುತ್ತೇವೆ ಎಂದು ಸಿಇಒ ವಿಜಯಪುರ ರಾಹುಲ್ ಶಿಂಧೆ ಹೇಳಿದ್ದಾರೆ. 
ತಾಂಬಾ ಗ್ರಾಮದ ಆಸ್ಪತ್ರೆ ಕುರಿತು ಆರೋಗ್ಯ ಸಚಿವ ಮತ್ತು ಆಯುಕ್ತರ ಜೊತೆಗೆ ಮಾತನಾಡಿದ್ದು ಬರುವ ವಾರದೊಳಗೆ ಕ್ರಮ ಕೈಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ. 

Follow Us:
Download App:
  • android
  • ios