* ಕೋವಿಡ್‌ ಸಂಕಷ್ಟದ ಬಳಿಕ ಅತ್ಯಧಿಕ ಭಕ್ತರ ಆಗಮನ* ತುಂಗಭದ್ರಾ ನದಿಯಲ್ಲಿ ಪ್ರವಾಹ ಲೆಕ್ಕಿಸದೆ ಸ್ನಾನ ಮಾಡಿದ ಜನ*  ಪೊಲೀಸ್‌ ನಿಯಂತ್ರಣವೂ ಇಲ್ಲ, ಕೋವಿಡ್‌ ನಿಯಮವೂ ಇಲ್ಲ 

ಕೊಪ್ಪಳ(ಜು.28): ತಾಲೂಕಿನ ಹುಲಿಗಿ ಗ್ರಾಮದ ಸುಪ್ರಸಿದ್ಧ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಮಂಗಳವಾರ ಭಕ್ತಸಾಗರವೇ ಹರಿದು ಬಂದಿತ್ತು. ಸುಮಾರು ಒಂದು ಲಕ್ಷ ಜನರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.

Add Asianetnews Kannada as a Preferred SourcegooglePreferred

ಕೋವಿಡ್‌ ಲಾಕ್‌ಡೌನ್‌ ಬಳಿಕ ಮೊದಲ ಬಾರಿಗೆ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಹುಲಿಗೆಮ್ಮ ದೇವಿ ದರ್ಶನಕ್ಕೆ ಜನರು ಮುಗಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಕೋವಿಡ್‌ ನಿಯಮಾವಳಿ ಪಾಲನೆ ಆಗಿರಲಿಲ್ಲ. ಭಕ್ತರು ನದಿಗೆ ಇಳಿದು ಪ್ರವಾಹದ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಸ್ನಾನ ಮಾಡಿದರು.

ಕೊಪ್ಪಳ: ಹುಲಿಗೆಮ್ಮ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ..!

ಮುಂಜಾನೆಯಿಂದಲೇ ಭಕ್ತರು ಪಾಳಿಯಂತೆ ದೇವಾಲಯಕ್ಕೆ ಆಗಮಿಸುತ್ತಿದ್ದರು. ದೇವಾಲಯದ ಆಡಳಿತ ಮಂಡಳಿಗೂ ಸಹ ಇಷ್ಟೊಂದು ಜನರು ಆಗಮಿಸುವ ನಿರೀಕ್ಷೆ ಇರಲಿಲ್ಲ. ಬಹುತೇಕ ಭಕ್ತರು ಮಾಸ್ಕ್‌ ಧರಿಸಿರಲಿಲ್ಲ. ಸಾಮಾಜಿಕ ಅಂತರವೂ ಇರಲಿಲ್ಲ. ದೇಗುಲದ ಸಿಬ್ಬಂದಿ, ಆಡಳಿತ ಮಂಡಳಿ ಸಿಬ್ಬಂದಿ ಎಷ್ಟೇ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ದೇಗುಲ ಪ್ರವೇಶದ ಸಂದರ್ಭದಲ್ಲಿ ಮಾತ್ರ ಮಾಸ್ಕ್‌ ಧರಿಸುತ್ತಿದ್ದು, ಬಳಿಕ ಎಲ್ಲಿಯೂ ನಿಯಮ ಪಾಲನೆ ಆಗುತ್ತಿರಲಿಲ್ಲ. ಪೊಲೀಸರೂ ಸಹ ನಿಯಂತ್ರಣಕ್ಕೆ ಇರಲಿಲ್ಲ. ಆದರೆ ಬಹಳ ದಿನದ ನಂತರ ಲಕ್ಷಾಂತರ ಜನರು ಸೇರಿದ್ದರಿಂದ ದೇವಾಲಯದ ಸುತ್ತಮುತ್ತ ಅಂಗಡಿಗಳ ಮಾಲಕರು, ಚಿಲ್ಲರೆ ವ್ಯಾಪಾರಸ್ಥರು ಮಾತ್ರ ಫುಲ್‌ ಖುಷ್‌ ಆಗಿದ್ದರು. ದೇವಾಲಯಕ್ಕೂ ಭಾರೀ ಕಳೆ ಬಂದಿತ್ತು.

ನದಿಗಿಳಿದ ಭಕ್ತರು:

ತುಂಗಭದ್ರಾ ಜಲಾಶಯ ತುಂಬಿದ್ದು, ನದಿಗೆ ಹೆಚ್ಚುವರಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ದೇವಾಲಯದ ಪಕ್ಕದಲ್ಲಿಯೇ ನದಿ ಮೈದುಂಬಿ ಹರಿಯುತ್ತಿದ್ದು, ಭಕ್ತರು ಇದನ್ನು ಕಣ್ತುಂಬಿಕೊಳ್ಳಲು ನದಿಗೆ ಇಳಿದಿದ್ದರು. ಪ್ರವಾಹವನ್ನೂ ಲೆಕ್ಕಿಸದೇ ಸ್ನಾನ ಮಾಡಿದರು.