Asianet Suvarna News Asianet Suvarna News

National Farmers Day 2023 : ಇಂದು ‘ಜಲ ಸಂಜೀವಿನಿ -ರೈತ ಸಂವಾದ

ರಾಷ್ಟ್ರೀಯ ರೈತ ದಿನಾಚರಣೆ ನಿಮಿತ್ತ ರಾಜ್ಯವ್ಯಾಪಿ ಜಲ ಸಂಜೀವಿನಿ-ರೈತ ಸಂವಾದ (ನಮ್ಮ ನಡಿಗೆ ಅನ್ನದಾತನ ಕಡೆಗೆ) ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರು ಆದೇಶಿಸಿದ್ದು, ಅದರಂತೆ ಜಿಲ್ಲೆಯ ಏಳು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ನಡೆಸಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ.

national farmers day today farmer conversation jala sanjivini rav
Author
First Published Dec 23, 2022, 9:43 AM IST

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ (ಡಿ.23) : ರಾಷ್ಟ್ರೀಯ ರೈತ ದಿನಾಚರಣೆ ನಿಮಿತ್ತ ರಾಜ್ಯವ್ಯಾಪಿ ಜಲ ಸಂಜೀವಿನಿ-ರೈತ ಸಂವಾದ (ನಮ್ಮ ನಡಿಗೆ ಅನ್ನದಾತನ ಕಡೆಗೆ) ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರು ಆದೇಶಿಸಿದ್ದು, ಅದರಂತೆ ಜಿಲ್ಲೆಯ ಏಳು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ನಡೆಸಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ.

ನರೇಗಾ ಯೋಜನೆಯಡಿ ರಾಜ್ಯದಲ್ಲಿ ಮುಂಬರುವ ವರ್ಷದಿಂದ ಅನುಷ್ಠಾನಗೊಳಿಸಲಾಗುತ್ತಿರುವ ಜಲ ಸಂಜೀವಿನಿ ವಿನೂತನ ಕಾರ್ಯಕ್ರಮ (ವೈಜ್ಞಾನಿಕ ಯೋಜನೆ, ಗೋಮಾಳ ಅಭಿವೃದ್ಧಿ, ವಿಪತ್ತು ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಹಾಗೂ ಸುಸ್ಥಿರ ಜೀವನೋಪಾಯ)ವನ್ನು ರೈತರಿಗೆ ತಿಳಿಸಲು ರಾಜ್ಯವ್ಯಾಪಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಕಲಬುರಗಿ: ಒಣಗಿದ ತೊಗರಿ ಬೆಳೆ; ಅನ್ನದಾತರು ಕಂಗಾಲು

ಜಿಲ್ಲಾ ಪಂಚಾಯಿತಿ ಹಾಗೂ ತಾಪಂ, ಗ್ರಾಪಂ ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ನಿರ್ದಿಷ್ಟಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕೆರೆಯಂಗಳದಲ್ಲಿ ಸ್ಥಳೀಯ ಜನರು, ರೈತರೊಂದಿಗೆ ಸಂವಾದ ನಡೆಸಿ ರೈತ ದಿನಾಚರಣೆಯನ್ನು ಯಶಸ್ವಿ ಮತ್ತು ಅರ್ಥಪೂರ್ಣವಾಗಿ ಆಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಇದೇ ಸಂದರ್ಭದಲ್ಲಿ ಎಳ್ಳು ಅಮವಾಸ್ಯೆ ನಿಮಿತ್ತ ಭೂ ತಾಯಿಗೆ ವಂದನೆ ಸಮರ್ಪಿಸಬೇಕಾಗಿದೆ.

ಜಿಲ್ಲೆಯ ಧಾರವಾಡ ತಾಲೂಕಿನ ಕೊಟಬಾಗಿ, ಹುಬ್ಬಳ್ಳಿ ತಾಲೂಕಿನ ಅಗಡಿ, ಕುಂದಗೋಳ ತಾಲೂಕಿನ ಮಳಲಿ, ಅಳ್ನಾವರ ತಾಲೂಕಿನ ಕಡಬಗಟ್ಟಿ, ಅಣ್ಣಿಗೇರಿ ತಾಲೂಕಿನ ತುಪ್ಪದಕುರಹಟ್ಟಿ, ಕಲಘಟಗಿ ತಾಲೂಕಿನ ದೇವಲಿಂಗೇಕೊಪ್ಪ, ನವಲಗುಂದ ತಾಲೂಕಿನ ಗುಮ್ಮಗೋಳದಲ್ಲಿ ಜಲ ಸಂಜೀವಿನಿ-ರೈತ ಸಂವಾದ ಕಾರ್ಯಕ್ರಮ ನಡೆಸಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ.

ನರೇಗಾದಡಿ ನಡೆಯುತ್ತಿರುವ ಅಮೃತ ಸರೋವರದ ತ್ವರಿತ ಹಾಗೂ ಸಮರ್ಪಕ ಅನುಷ್ಠಾನದ ಕುರಿತು ಗ್ರಾಮೀಣ ಭಾಗದ ರೈತರಿಗೆ ಮಾಹಿತಿ ನೀಡಲಾಗುವುದು. ಜಲ ಸಂಜೀವಿನಿ-ರೈತ ಸಂವಾದ ಕಾರ್ಯಕ್ರಮವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಯಾದಗಿರಿ: ರೈತರ ಮನ ಹಿಗ್ಗಿಸಿದ ಡ್ರೋನ್‌ ಚಮತ್ಕಾರ..!

ಸಂವಾದ ಕಾರ್ಯಕ್ರಮದಲ್ಲಿ ಮಳೆ ಸಂಗ್ರಹಣೆ, ಬಳಕೆ, ಕೃಷಿ ಹೊಂಡ, ಚೆಕ್‌ಡ್ಯಾಂ ನಿರ್ಮಾಣದ ಕುರಿತು ಮಾಹಿತಿ ಒದಗಿಸಲಾಗುತ್ತದೆ. ಎಲ್ಲ ರೈತರಿಗೆ ಮುಂದೆ ಆರಂಭಗೊಳ್ಳಲಿರುವ ಜಲಸಂಜೀವಿನಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಗುತ್ತದೆ.

ಡಾ. ಸುರೇಶ ಇಟ್ನಾಳ, ಸಿಇಒ, ಜಿಲ್ಲಾ ಪಂಚಾಯಿತಿ

Follow Us:
Download App:
  • android
  • ios