ದಕ್ಷಿಣ ಕನ್ನಡದಲ್ಲಿ ನಾಳೆ (ಆ.17) ಒಂದು ದಿನದ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ದರ್ಶನ್ ಆದೇಶ ಹೊರಡಿಸಿದ್ದಾರೆ. ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಸೇರಿದಂತೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.
ಮಂಗಳೂರು (ಆ.16) ದಕ್ಷಿಣ ಕನ್ನಡದಲ್ಲಿ ನಾಳೆ (ಆಗಸ್ಟ್ 17) ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ನಾಗರ ಪಂಚಮಿ ಹಬ್ಬದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್ವಿ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳಿಗೂ ಒಂದು ದಿನದ ರಜೆ ಘೋಷಿಸಲಾಗಿದೆ. ಸೋಮವಾರ ನಾಗರಪಂಚಮಿ ಹಬ್ಬ ಆಚರಣೆ ಹಿನ್ನಲೆಯಲ್ಲಿ ಈ ನಿರ್ಧಾರ ಘೋಷಣೆಯಾಗಿದೆ.
ಉಡುಪಿಯಲ್ಲೂ ನಾಳೆ ಸಾರ್ವತ್ರಿಕ ರಜೆ
ನಾಗರ ಪಂಚಮಿ ಹಿನ್ನೆಲೆ ಉಡುಪಿ ಜಿಲ್ಲೆಗೆ ನಾಳೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಶಾಲಾ ಕಾಲೇಜು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಆಗಸ್ಟ್ 17 ರಂದು ಒಂದು ದಿನದ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ನೀಡಿದ್ದಾರೆ.
ದಕ್ಷಿಣ ಕನ್ನಡದಲ್ಲಿ ನಾಗರಪಂಚಮಿಗೆ ಅತ್ಯಂತ ಪವಿತ್ರ ಸ್ಥಾನ
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ತುಳು ಭಾಗದಲ್ಲಿ ನಾಗರ ಪಂಚಮಿ ಅತ್ಯಂತ ಪವಿತ್ರ ಹಾಗೂ ವಿಶೇಷ ಸ್ಥಾನವಿದೆ. ಪರಶುರಾಮ ಸೃಷ್ಟಿಯ ನಾಡು ಎಂದೇ ಗುರುತಿಸಿಕೊಂಡಿರುವ ಈ ಭಾಗದಲ್ಲಿ ನಾಗಾರಾಧನೆಗೆ ಪ್ರಮುಖ ಸ್ಥಾನವಿದೆ. ಪ್ರಕೃತಿ ಹಾಗೂ ದೈವಿಕ ಶಕ್ತಿಯ ಸಂಕಲ್ಪವಾಗಿ ನಾಗರಪಂಚಮಿಯನ್ನು ತುಳುನಾಡಿನಲ್ಲಿ ಆಚರಿಸಲಾಗುತ್ತಿದೆ. ಪ್ರಮುಖ ಆಚರಣೆಯಾಗಿರುವ ಕಾರಣ ನಾಳೆ (ಆ.17) ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.
ತುಳು ಭಾಗದಲ್ಲಿ ನಾಗರಾಧಾನೆ, ನಾಗ ದೈವ ಕುಟುಂಬದ ರಕ್ಷಕ ಹಾಗೂ ಮೂಲ ದೈವ ಎಂದೇ ನಂಬುತ್ತಾರೆ. ನಾಗರಪಂಚಮಿಯಂದು ನಾಗ ದೇವನಿಗೆ ಪೂಜೆ ಸಲ್ಲಿಸುವುದು ಸರ್ಪದೋಷ, ಆರೋಗ್ಯ ವೃದ್ಧಿ, ಸಂಕಷ್ಟಗಳ ಪರಿಹಾರ, ಸಂತಾನ ಭಾಗ್ಯ ಸೇರಿದಂತೆ ನೆಮ್ಮದಿಯ ಜೀವನ ಸಿಗಲಿದೆ ಎಂಬ ನಂಬಿಕೆ ಈ ಭಾಗದಲ್ಲಿದೆ. ಹೀಗಾಗಿ ತುಳು ಭಾಗದಲ್ಲಿರುವ ನಾಗಬನಗಳು, ನಾಗ ಮೂಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ . ಹಾಲು, ಏಳನೀರು, ತುಪ್ಪ, ಗಂಧ, ಹೂವುಗಳ ಅಭಿಷೇಕ ಮಾಡಲಾಗುತ್ತದೆ.
ಕುಕ್ಕೆ ಸುಬ್ರಹ್ಮಣ್ಯ ಸೇರಿ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಭಾರತದಲ್ಲೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪ್ರಸಿದ್ಧಿಯಾಗಿದೆ. ದೇಶ ವಿದೇಶಗಳಿಂದ ಇಲ್ಲಿಗೆ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ನಾಗರಪಂಚಮಿ ದಿನ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತ ಕೆಲ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರಿನ ಕುಡುಪು ಅನಂತಪದ್ಮನಾಭ ದೇವಸ್ಥಾನ, ಮಂಜೇಶ್ವರದ ಶ್ರೀಮದ್ ಅನಂತೇಶ್ವರ, ಕಾಳಾವರದ ನಾಗಕ್ಷೇತ್ರಗಳಲ್ಲಿ ನಾಗರ ಪಂಚಮಿ ದಿನ ವಿಶೇಷ ಪೂಜೆ ಸಲ್ಲಿಸುತ್ತಾರೆ.


