ಬೆಂಗಳೂರಿನ ಕೆ.ಆರ್. ಪುರಂನಲ್ಲಿ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಹಲ್ಲೆಗೊಳಗಾದ ಯುವಕನ ದೂರು ನಿರ್ಲಕ್ಷಿಸಿ, ಪಿಎಸ್ಐ ದೂರಿನ ಮೇರೆಗೆ ಯುವಕರ ವಿರುದ್ಧವೇ ಎಫ್ಐಆರ್ ದಾಖಲಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಮಹಿಳಾ ಪಿಎಸ್ಐ
ಬೆಂಗಳೂರಿನ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಹೊಸದೇನಲ್ಲ. ಆದರೆ, ಅದೇ ಟ್ರಾಫಿಕ್ ನಿಯಂತ್ರಿಸಬೇಕಾದ ಪೊಲೀಸರೇ ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗಿದರೆ ಗತಿಯೇನು? ಕೆ.ಆರ್. ಪುರಂ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹದ್ದೇ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಜಗಳ ಬಿಡಿಸಲು ಹೋದ ವಿದ್ಯಾರ್ಥಿಯೊಬ್ಬ ಖಾಕಿ ದೌರ್ಜನ್ಯಕ್ಕೆ ಬಲಿಯಾಗಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಏನಿದು ಘಟನೆ?
ಆಗಸ್ಟ್ 12ರ ಬೆಳಗ್ಗೆ ಸುಮಾರು 8:20ರ ಸುಮಾರಿಗೆ ಭಟ್ಟರಹಳ್ಳಿ ಸಿಗ್ನಲ್ನಿಂದ ಕೆ.ಆರ್. ಪುರಂ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಸಂತೆಗೆ ತೆರಳುತ್ತಿದ್ದ ಹೇಮಂತ್ ರೆಡ್ಡಿ ಎಂಬುವವರ ಕಾರು ಮತ್ತು ಮತ್ತೊಂದು ಕಾರಿನ ನಡುವೆ ಸಣ್ಣ ಮಟ್ಟದ ಅಪಘಾತ ಅಥವಾ ವಾಗ್ವಾದ ಏರ್ಪಟ್ಟಿತ್ತು. ರಸ್ತೆಯಲ್ಲೇ ಇಬ್ಬರ ನಡುವೆ ಜಗಳ ತಾರಕಕ್ಕೇರಿತ್ತು. ಈ ವೇಳೆ ಅಲ್ಲಿಗೆ ಬಂದ ರಾಹುಲ್ ಎಂಬ ವಿದ್ಯಾರ್ಥಿ, ಮಾನವೀಯತೆಯ ಆಧಾರದ ಮೇಲೆ ಜಗಳವನ್ನು ಶಾಂತಗೊಳಿಸಿ ಪರಿಸ್ಥಿತಿ ತಿಳಿಗೊಳಿಸಲು ಮಧ್ಯಪ್ರವೇಶಿಸಿದ್ದನು. ಆದರೆ, ಸ್ಥಳಕ್ಕೆ ಆಗಮಿಸಿದ ಕೆ.ಆರ್. ಪುರ ಸಂಚಾರಿ ಠಾಣೆಯ ಪಿಎಸ್ಐ ನಯನ ಅವರು ಘಟನೆಯ ನೈಜತೆ ತಿಳಿಯದೆ ಏಕಾಏಕಿ ಆಕ್ರೋಶಗೊಂಡಿದ್ದಾರೆ. ಜಗಳ ಬಿಡಿಸಲು ಬಂದಿದ್ದ ವಿದ್ಯಾರ್ಥಿ ರಾಹುಲ್ ಅವರ ಕಾಲರ್ ಪಟ್ಟಿ ಹಿಡಿದು ಎಳೆದಾಡಿದ ಪಿಎಸ್ಐ, ಸಾರ್ವಜನಿಕರ ಎದುರಲ್ಲೇ ಆತನ ಕಪಾಳಕ್ಕೆ ಬಾರಿಸಿದ್ದಾರೆ. ಅಷ್ಟಕ್ಕೇ ಮುಗಿಯದೆ, ಆತನ ಕೈಯಲ್ಲಿದ್ದ ಮೊಬೈಲ್ ಫೋನ್ ಕಸಿದುಕೊಂಡು ನೆಲಕ್ಕೆ ಅಪ್ಪಳಿಸಿ ಸ್ಕ್ರೀನ್ ಹೊಡೆದು ಹಾಕಿದ್ದಾರೆ. ಯಾರದೋ ತಪ್ಪಿಗೆ ಇನ್ನಾರೋ ಬಲಿಪಶುವಾದ ಕ್ಷಣವದು.
ಒಂದೇ ನಾಣ್ಯದ ಎರಡು ಮುಖ!
ಈ ಘಟನೆಯ ನಂತರ ಕೆ.ಆರ್. ಪುರಂ ಲಾ ಅಂಡ್ ಆರ್ಡರ್ ಪೊಲೀಸರ ನಡೆ ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಲ್ಲೆಗೊಳಗಾದ ಯುವಕರು ನ್ಯಾಯಕ್ಕಾಗಿ ಠಾಣೆಗೆ ತೆರಳಿದರೆ, ಅಲ್ಲಿ ಅವರಿಗೆ ಅನ್ಯಾಯವೇ ಎದುರಾಯಿತು. ಹಲ್ಲೆ ನಡೆಸಿದ ಪಿಎಸ್ಐ ನಯನ ಪರವಾಗಿ ನಿಂತ ಸಿಬ್ಬಂದಿ, ಯುವಕರ ಮೇಲೆಯೇ ಎಫ್ಐಆರ್ ದಾಖಲಿಸಿದ್ದಾರೆ. ಪಿಎಸ್ಐ ನಯನ ನೀಡಿದ ದೂರಿನನ್ವಯ ಹೇಮಂತ್ ರೆಡ್ಡಿ, ರಾಹುಲ್, ಹರ್ಷಿತಾ ರೆಡ್ಡಿ ಹಾಗೂ ರಾಧಾಕೃಷ್ಣ ರೆಡ್ಡಿ ಎಂಬುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಯುವಕರು ತನಗೆ 'ಬಾಡಿ ಶೇಮಿಂಗ್' (ದೇಹದ ಆಕಾರದ ಬಗ್ಗೆ ನಿಂದನೆ) ಮಾಡಿದ್ದಾರೆ ಎಂದು ನಯನ ಆರೋಪಿಸಿದ್ದು, ಇದಕ್ಕೆ ಪೂರಕವಾಗಿ ತಮ್ಮ ಬಾಡಿ ವಾರ್ನ್ ಕ್ಯಾಮೆರಾ ದೃಶ್ಯಾವಳಿಗಳನ್ನು ಸಹ ಹಂಚಿಕೊಂಡಿದ್ದಾರೆ.
ಹಲ್ಲೆಗೊಳಗಾದ ಯುವಕರ ನಿರ್ಲಕ್ಷ್ಯ!
ಆದರೆ, ನಯನ ಅವರ ದೂರಿನ ಆಧಾರದ ಮೇಲೆ ತಕ್ಷಣವೇ ಎಫ್ಐಆರ್ ದಾಖಲಿಸಿದ ಪೊಲೀಸರು, ಹಲ್ಲೆಗೊಳಗಾದ ಯುವಕರು ನೀಡಿದ ದೂರನ್ನು ಕೇವಲ ಎನ್ಸಿಆರ್ (NCR - Non-Cognizable Report) ಮಾಡಿ ನಿರ್ಲಕ್ಷ್ಯ ವಹಿಸಿದ್ದಾರೆ. ಪೊಲೀಸ್ ಇಲಾಖೆಯ ಈ ತಾರತಮ್ಯದ ನಡವಳಿಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ!
ಪ್ರಸ್ತುತ ಪಿಎಸ್ಐ ನಯನ ಅವರು ವಿದ್ಯಾರ್ಥಿಯ ಕಾಲರ್ ಹಿಡಿದು ಕಪಾಳಕ್ಕೆ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. "ತಪ್ಪು ಯಾರದ್ದೇ ಇರಲಿ, ಕಾನೂನನ್ನು ಕೈಗೆತ್ತಿಕೊಳ್ಳಲು ಪೊಲೀಸರಿಗೆ ಹಕ್ಕಿಲ್ಲ. ಅದರಲ್ಲೂ ಜಗಳ ಬಿಡಿಸಲು ಬಂದ ಸಾರ್ವಜನಿಕರ ಮೇಲೆ ಕೈಮಾಡುವುದು ಎಷ್ಟರ ಮಟ್ಟಿಗೆ ಸರಿ?" ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಖಾಕಿ ಸಮವಸ್ತ್ರದ ಧಾರ್ಷ್ಟ್ಯ ತೋರಿದ ಅಧಿಕಾರಿಯ ವಿರುದ್ಧ ಹಾಗೂ ಏಕಪಕ್ಷೀಯವಾಗಿ ನಡೆದುಕೊಂಡ ಠಾಣಾ ಸಿಬ್ಬಂದಿಯ ವಿರುದ್ಧ ಉನ್ನತ ಪೊಲೀಸ್ ಅಧಿಕಾರಿಗಳು ಸೂಕ್ತ ಶಿಸ್ತುಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ಯುವಕನಿಗೆ ನ್ಯಾಯ ಒದಗಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ತೀವ್ರವಾಗಿ ಕೇಳಿಬರುತ್ತಿದೆ.


