*  ರಾಮುಲು ಹೆಜ್ಜೆಯಲ್ಲಿ ಹೆಜ್ಜೆ ಹಾಕುವೆ*  ಕಿಷ್ಕಿಂಧೆ ನಾಡಿನಲ್ಲಿ ವಿಹರಿಸಿದ ಶ್ರೀರಾಮುಲು, ಜನಾರ್ದನ ರೆಡ್ಡಿ*  ಹಂಪಿ, ಆನೆಗೊಂದಿ ಭಾಗವ ನೋಡುತ್ತಿದ್ದರೆ ಮನಸ್ಸಿಗೆ ಆನಂದ 

ಕೊಪ್ಪಳ(ಫೆ.01):  ಮಾಜಿ ಸಚಿವ ಜನಾರ್ದನ ರೆಡ್ಡಿ(Janardhana Reddy) ಹಾಗೂ ಸಾರಿಗೆ ಸಚಿವ ಶ್ರೀರಾಮುಲು(B Sriramulu) ಅವರು ಕುಟುಂಬದ ಕೆಲ ಸದಸ್ಯರೊಂದಿಗೆ ಹಂಪಿಯಿಂದ(Hampi) ತೆಪ್ಪದ ಮೂಲಕ ಆನೆಗೊಂದಿ ಪ್ರದೇಶಕ್ಕೆ ಆಗಮಿಸಿ, ಸುತ್ತಮುತ್ತಲು ಇರುವ ಋುಷಿಮುಖ ಪರ್ವತ, ಪಂಪಾ ಸರೋವರ, ರಾಮ, ಆಂಜನೇಯನ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದರು. ಕಿಷ್ಕಿಂಧೆಯ ಪೌರಾಣಿಕ ಹಿನ್ನೆಲೆಯ ಸ್ಥಳಗಳಲ್ಲಿ ಸೋಮವಾರ ಸಂಜೆ ವಿಹರಿಸಿದರು.

ಗಂಗಾವತಿ(Gangavati) ತಾಲೂಕಿನ ಆನೆಗೊಂದಿ(Anegondi) ಪ್ರದೇಶಕ್ಕೆ ತೆಪ್ಪದ ಮೂಲಕ ಆಗಮಿಸಿ ಶ್ರೀರಾಮುಲು ಅವರು ಕೇಂದ್ರ ಹಾಗೂ ರಾಜ್ಯ ಪ್ರಾಚ್ಯವಸ್ತು ಇಲಾಖೆಯ ಸಹಯೋಗದಲ್ಲಿ ಮಾಡಿಸಿದ ಪುನರುಜ್ಜೀವನ ಕಾರ್ಯಗಳನ್ನು ನೋಡಿದ ಜನಾರ್ದನ ರೆಡ್ಡಿ ಮನ ತುಂಬಿ ಬಣ್ಣಿಸಿದರು.

ಹೂವು ಕಟ್ಟುವ ಹುಡುಗಿ ಈಗ ಪಿಎಸ್‌ಐ: ಕೊಪ್ಪಳದ ಫರೀದಾ ಸಾಧನೆ

ಕಳೆದ ವೀಕೆಂಡ್‌ನಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ ಸಿಂಗ್‌(Anand Singh) ಜತೆಗೆ ತೆಪ್ಪದಲ್ಲಿ ವಿಹರಿಸಿದ್ದ ಶ್ರೀರಾಮುಲು ಈ ಬಾರಿ ತಮ್ಮ ಆಪ್ತ ಗೆಳೆಯ ಜನಾರ್ದನ ರೆಡ್ಡಿ ಹಾಗೂ ತಮ್ಮ ಕುಟುಂಬದ ಕೆಲ ಸದಸ್ಯರೊಂದಿಗೆ ಆಗಮಿಸಿ ವಿಹರಿಸಿದ್ದು ಕುತೂಹಲ ಕೆರಳಿದೆ.

ಪುಣ್ಯದ ಕಾರ್ಯ:

ಆ ಭಗವಂತ ಶ್ರೀರಾಮುಲು ಅವರಿಗೆ ಏನು ಬುದ್ಧಿ ನೀಡಿದ್ದಾನೋ ಗೊತ್ತಿಲ್ಲ. ಅತ್ಯಂತ ಪುಣ್ಯದ ಕಾರ್ಯ ಮಾಡುತ್ತಿದ್ದಾರೆ. ಈ ಭಾಗದಲ್ಲಿನ ಪೌರಾಣಿಕ ಹಿನ್ನೆಲೆಯುಳ್ಳ ದೇವಸ್ಥಾನಗಳನ್ನು(Temples) ಪುನರುಜ್ಜೀವನ ಮಾಡುತ್ತಿದ್ದಾರೆ. ನಿಜಕ್ಕೂ ಅತ್ಯಂತ ಶ್ಲಾಘನೀಯ ಕಾರ್ಯ ಇದಾಗಿದೆ. ಹಂಪಿ, ಆನೆಗೊಂದಿ ಭಾಗವ ನೋಡುತ್ತಿದ್ದರೆ ಮನಸ್ಸಿಗೆ ಆನಂದವಾಗುತ್ತಿದೆ. ಇದು ನಿಜಕ್ಕೂ ಪುಣ್ಯಭೂಮಿಯಾಗಿದ್ದು ಇದರ ಅಭಿವೃದ್ಧಿ ನಡೆಯುತ್ತಿರುವುದು ಮತ್ತಷ್ಟು ಸಂತಸ ನೀಡುತ್ತಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

ನಾನು ಇಲ್ಲಿ ರಾಜಕೀಯ(Politics) ಮಾತನಾಡುವುದಿಲ್ಲ. ಆದರೆ, ಶ್ರೀರಾಮುಲು ಅವರ ಹೆಜ್ಜೆಯಲ್ಲಿಯೇ ನಾನು ಹೆಜ್ಜೆ ಹಾಕುತ್ತೇನೆ ಎಂದಷ್ಟೇ ಹೇಳಬಲ್ಲೆ ಎಂದ ಜನಾರ್ದನ ರೆಡ್ಡಿ, ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾನು ಬದ್ಧ. ಏನೇ ನಿರ್ಧಾರ ತೆಗೆದುಕೊಂಡರೂ ಅವರ ಜತೆಗೆ ಹೆಜ್ಜೆ ಹಾಕುವೆ. ಅವರು ನಿರ್ಧಾರ ಮಾಡಿದ ಮೇಲೆ ನಾನು ಮನಸ್ಸು ಬಿಚ್ಚಿ ಮಾತನಾಡುತ್ತೇನೆ. ಮತ್ತೆ ಹಿಂದಿನ ವೈಭವ ನನ್ನ ಜೀವನದಲ್ಲಿ ಮರುಕಳಿಸಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಸಂಗೀತ ಆಲಿಸಿದರು:

ಸಚಿವ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಸೋಮವಾರ ಋುಷಿಮುಖ ಪರ್ವತದ ಬಳಿ ಸ್ಥಳೀಯ ಕಲಾವಿದರ ಸಂಗೀತ ಆಲಿಸಿ ಸಂತಸಪಟ್ಟರು. ಸ್ಥಳೀಯ ಕಲಾವಿದರ ಸಂಗೀತ ಮತ್ತು ಸ್ಥಳೀಯ ಕಲಾವಿದರು ವಿದೇಶಿ ಸಂಗೀತವನ್ನು ನುಡಿಸಿದ್ದನ್ನು ಮನಸಾರೆ ಮೆಚ್ಚಿದರು. ಕಾಡಾ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಇದ್ದರು.

ಕಾಂಗ್ರೆಸ್‌ ಎಸ್‌ಎಸ್‌ ಪಾರ್ಟಿ: ಶ್ರೀರಾಮುಲು

ಕಾಂಗ್ರೆಸ್‌(Congress) ಎಸ್‌ಎಸ್‌ (ಶಿವಕುಮಾರ-ಸಿದ್ದರಾಮಯ್ಯ) ಪಾರ್ಟಿಯಾಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಕಾಂಗ್ರೆಸ್ಸಿಗೆ ಹೊಸ ಹೆಸರು ನೀಡಿದ್ದಾರೆ.

Koppal: ಕಚ್ಚಾ ಕೂದಲು ರಫ್ತಿಗೆ ನಿರ್ಬಂಧ: ಜಗತ್ತಿಗೆ ಭಾರತದ್ದೇ ಸಿಂಹಪಾಲು..!

ಋುಷಿಮುಖ ಪರ್ವತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನಲ್ಲಿ ಒಳಗೊಳಗೆ ಬೇಗುದಿ, ಬಿಕ್ಕಟ್ಟು ಇದ್ದರೂ ಹೊರಗೆ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಇದೆಲ್ಲವೂ ಜನರಿಗೆ ಗೊತ್ತಾಗುತ್ತಿಲ್ಲ ಎಂದು ಅವರು ತಿಳಿದುಕೊಂಡಿದ್ದಾರೆ ಎಂದರು. ಆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲು ನಾಯಕರೇ ಇಲ್ಲ ಎಂದ ಶ್ರೀರಾಮುಲು, ಸಿಎಂ ಇಬ್ರಾಹಿಂ(CM Ibrahim) ಅವರು ಕಾಂಗ್ರೆಸ್‌ ತೊರೆದಿರುವುದು ಬಹಳ ನೋವಿನ ವಿಷಯ ಎಂದು ವ್ಯಂಗ್ಯವಾಡಿದರು.

ವಾಲ್ಮೀಕಿ ಸಮುದಾಯಕ್ಕೆ ಶೇ. 7.5ರಷ್ಟು ಮೀಸಲಾತಿ ನೀಡುವುದಕ್ಕೆ ಈಗಲೂ ಬದ್ಧವಾಗಿದ್ದೇನೆ. ಈ ಹೋರಾಟ ಹುಟ್ಟು ಹಾಕಿದ್ದು ನಾನು. ಅದಕ್ಕಾಗಿ ನನ್ನ ಪ್ರಯತ್ನ ಇದ್ದೇ ಇದೆ ಎಂದು ಶ್ರೀರಾಮುಲು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಂದಿನ ಬಾರಿ ಎಲ್ಲಿಂದ ಸ್ಪರ್ಧಿಸಬೇಕು ಎನ್ನುವುದನ್ನು ತೀರ್ಮಾನಿಸಿಲ್ಲ. ಈಗಲೇ ಅದನ್ನು ಹೇಳುವ ಅಗತ್ಯವೂ ಇಲ್ಲ. ಸಚಿವ ಆನಂದ ಸಿಂಗ್‌ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ನಾನು ಕಳೆದ ವಾರ ಇಲ್ಲಿಯೇ ತೆಪ್ಪದಲ್ಲಿ ವಿಹರಿಸಿದ್ದೇವೆ. ಅವರು ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಅವರನ್ನು ಭೇಟಿ ಮಾಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅದೊಂದು ಸಹಜ ಭೇಟಿಯಾಗಿದೆ ಎಂದಿದ್ದಾರೆ. ಆನೆಗೊಂದಿ ಭಾಗದಲ್ಲಿ ಅಭಿವೃದ್ಧಿ ಮಾಡುವುದು ಬಹಳ ಇದೆ. ಸಚಿವ ಆನಂದ ಸಿಂಗ್‌ ಅವರು ಚೆನ್ನಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂದರು.