Asianet Suvarna News Asianet Suvarna News

ಗೋವಾದ ಅಕ್ರಮ ಮದ್ಯ ಸಾಗಾಣಿಕೆ ತಡೆಗಟ್ಟಲು ಸಚಿವ ತಿಮ್ಮಾಪುರ ತಾಕೀತು

ಗೋವಾದಿಂದ ರೈಲುಗಳ ಮೂಲಕ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗುತ್ತಿರುವ ಬಗ್ಗೆ ದೂರುಗಳಿವೆ. ಹೀಗಾಗಿ ಗೋವಾದಿಂದ ರಾಜ್ಯದೊಳಗೆ ರೈಲು ಅಥವಾ ಇನ್ನಿತರ ಮಾರ್ಗಗಳ ಮೂಲಕ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗುವುದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ: ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ 

Minister RB Timmapur Talks Over Prevent Illegal liquor From Goa grg
Author
First Published Oct 18, 2023, 1:00 AM IST

ಚಿತ್ರದುರ್ಗ(ಅ.18):  ಗೋವಾದಿಂದ ಕರ್ನಾಟಕ ರಾಜ್ಯಕ್ಕೆ ರೈಲುಗಳ ಮೂಲಕ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗುವುದನ್ನು ತಡೆಗಟ್ಟಲು ಅಬಕಾರಿ ಅಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸಬೇಕು. ಅಗತ್ಯವಿದ್ದಲ್ಲಿ ರೈಲ್ವೆ ಪೊಲೀಸರ ಸಹಕಾರ ಪಡೆಯುವಂತೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹೊಸಪೇಟೆ ಅಬಕಾರಿ ವಿಭಾಗ ವ್ಯಾಪ್ತಿಯ ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಗದಗ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಹೊಸಪೇಟೆ ಅಬಕಾರಿ ವಿಭಾಗ ವ್ಯಾಪ್ತಿಯ ಜಿಲ್ಲೆಗಳಲ್ಲಿ ಏಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ಹೊರ ರಾಜ್ಯದ ಒಟ್ಟು 615.6 ಲೀ.ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

ಬಿಜೆಪಿಗರಿಗೆ ಕಲೆಕ್ಷನ್ ಮಾಡಿ ಅಭ್ಯಾಸವಾಗಿದೆ: ಸಚಿವ ಜಮೀರ್ ಅಹ್ಮದ್

ಗೋವಾದಿಂದ ರೈಲುಗಳ ಮೂಲಕ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗುತ್ತಿರುವ ಬಗ್ಗೆ ದೂರುಗಳಿವೆ. ಹೀಗಾಗಿ ಗೋವಾದಿಂದ ರಾಜ್ಯದೊಳಗೆ ರೈಲು ಅಥವಾ ಇನ್ನಿತರ ಮಾರ್ಗಗಳ ಮೂಲಕ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗುವುದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಸ್ವಂತಕ್ಕಾಗಿ ಕೇವಲ ಒಂದೆರಡು ಬಾಟಲಿ ಮದ್ಯ ತೆಗೆದುಕೊಂಡು ಬರುವ ಪ್ರಯಾಣಿಕರಿಗೆ ತೊಂದರೆ ಕೊಡುವುದು ಬೇಡ. ಆದರೆ ಮಾರಾಟ ಉದ್ದೇಶ ಇಟ್ಟುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸಾಗಿಸಲು ಅವಕಾಶ ಮಾಡಿಕೊಡಬೇಡಿ ಎಂದು ಸಚಿವರು ಹೇಳಿದರು.

ಅಕ್ರಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸಪೇಟೆ ಅಬಕಾರಿ ವಿಭಾಗ ವ್ಯಾಪ್ತಿಯಲ್ಲಿ ಈ ವರ್ಷ ಒಟ್ಟು 441 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದರಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ 247 ವಾಹನಗಳನ್ನು ವಿಲೇವಾರಿ ಮಾಡುವುದು ಬಾಕಿ ಇದೆ ಎಂದು ಹೊಸಪೇಟೆ ಅಬಕಾರಿ ವಿಭಾಗದ ಜಂಟಿ ಆಯುಕ್ತ ಬಾಲಕೃಷ್ಣ ಅವರು ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್.ಬಿ ತಿಮ್ಮಾಪುರ ಮುಟ್ಟುಗೋಲು ಹಾಕಿಕೊಂಡ ವಾಹನಗಳ ವಿಲೇವಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ವಿನಾಕಾರಣ ಇರಿಸಿಕೊಳ್ಳುವುದರಿಂದ ಯಾರಿಗೂ ಉಪಯೋಗವಿಲ್ಲ. ವಾಹನಗಳು ಮಳೆಗೆ ಸಿಲುಕಿ ಸಂಪೂರ್ಣ ಹಾಳಾಗುತ್ತವೆ. ಇದರಿಂದ ಅದರ ಮೌಲ್ಯವೂ ಕುಸಿದು, ವಾಹನಗಳ ಮಾಲೀಕರಿಗೆ ಹಾಗೂ ಸರ್ಕಾರಕ್ಕೂ ನಷ್ಟ ಆಗುತ್ತದೆ. ಹೀಗಾಗಿ ತ್ವರಿತವಾಗಿ ವಾಹನಗಳ ವಿಲೇವಾರಿ ಮಾಡಲು ಯಾವುದಾದರೂ ನಿಯಮಗಳು ಅಡ್ಡಿಯಿದ್ದಲ್ಲಿ, ನಿಯಮಗಳಿಗೆ ತಿದ್ದುಪಡಿ ತಂದು, ಸರಳೀಕರಿಸಲಾಗುವುದು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೂಡ ಸಹಕಾರ ನೀಡಬೇಕಾಗುತ್ತದೆ ಎಂದರು.

ಹೊಸಪೇಟೆ ವಿಭಾಗದಲ್ಲಿ ಈ ವರ್ಷ ಒಟ್ಟು 29 ಮಾದಕ ಪ್ರಕರಣಗಳು ವರದಿಯಾಗಿದ್ದು, 25 ಜನರನ್ನು ಬಂಧಿಸಲಾಗಿದೆ. ಅಲ್ಲದೇ ಈ ವರ್ಷ 15 ಜನರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ ಎಂದು ಅಬಕಾರಿ ಜಂಟಿ ಆಯುಕ್ತರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗಾಂಜಾ, ಅಫೀಮು ಎಂಬುದು ಮಾರಕವಾಗಿರುವ ಮಾದಕ ವಸ್ತುಗಳಾಗಿದ್ದು, ಗಾಂಜಾ ಬೆಳೆಯುವುದನ್ನು ಸಂಪೂರ್ಣ ಮಟ್ಟಹಾಕಬೇಕು. ಒಂದು ವೇಳೆ ಯಾರಾದರೂ ಗಾಂಜಾ ಬೆಳೆಯುವುದು ಕಂಡುಬಂದಲ್ಲಿ, ನಿರ್ದಾಕ್ಷಿಣ್ಯವಾಗಿ, ಯಾವುದೇ ಪ್ರಭಾವಕ್ಕೆ ಒಳಗಾಗದೆ ಕಠಿಣ ಕ್ರಮಕೈಗೊಳ್ಳಬೇಕು. ಕಳ್ಳಭಟ್ಟಿಯ ಅಪಾಯದ ಬಗ್ಗೆ ಜನಪ್ರತಿನಿಧಿಗಳು, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದರು.

ಅಡವಿಗೊಲ್ಲರಹಳ್ಳಿ ರೈತರ ಮೇಲೆ ಪೊಲೀಸ್ ದೌರ್ಜನ್ಯ; ಹಲ್ಲೆಗೊಳಗಾದ ರೈತ ಜಿಲ್ಲಾಸ್ಪತ್ರೆಗೆ ದಾಖಲು

ಅಬಕಾರಿ ಅಕಾಡೆಮಿಯ ಭರವಸೆ: ಅಬಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕೂಡ ಕಡ್ಡಾಯವಾಗಿ ಪರೇಡ್ ಕವಾಯತು ನಡೆಸಬೇಕು. ದೈಹಿಕ ಶ್ರಮ ಹಾಕಬೇಕು. ದೈಹಿಕ ಸಾಮರ್ಥ್ಯ ಇಲ್ಲದಿದ್ದಲ್ಲಿ ಕರ್ತವ್ಯದಲ್ಲಿ ಚುರುಕುತನ ಬರುವುದಿಲ್ಲ. ಪ್ರಕರಣಗಳನ್ನು ಹೊಸ ಹೊಸ ಆಯಾಮದಲ್ಲಿ ತನಿಖೆ ನಡೆಸುವ ರೀತಿಯಲ್ಲಿ, ಸುಧಾರಿತ ಕ್ರಮಗಳ ಬಗ್ಗೆ ಆಗಾಗ್ಗೆ ತರಬೇತಿಗಳು ನಡೆಯಬೇಕು ಎಂದು ಸಚಿವರು ಹೇಳಿದರು. ಬಳ್ಳಾರಿ ಜಿಲ್ಲೆ ಅಬಕಾರಿ ಉಪ ಆಯುಕ್ತರು ಮಾತನಾಡಿ, ಅಬಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ನೇಮಕಾತಿಯ ಆರಂಭದಲ್ಲಿ ನೀಡುವ ಪೊಲೀಸ್ ಬುನಾದಿ ತರಬೇತಿಯ ಬಳಿಕ, ಯಾವುದೇ ತರಬೇತಿಯನ್ನು ನೀಡಲಾಗುತ್ತಿಲ್ಲ. ಪೊಲೀಸ್ ಇಲಾಖೆಯ ಮಾದರಿಯಲ್ಲಿ ಅಧಿಕಾರಿ, ಸಿಬ್ಬಂದಿಗೆ ಆಗಾಗ್ಗೆ ತರಬೇತಿಗಳನ್ನು ಆಯೋಜಿಸಬೇಕು. ಇದಕ್ಕಾಗಿ ಅಬಕಾರಿ ಅಕಾಡೆಮಿ ಸ್ಥಾಪಿಸುವ ಅಗತ್ಯವಿದೆ ಎಂದರು.

ಇದಕ್ಕೆ ಇತರೆ ಜಿಲ್ಲೆಗಳ ಅಬಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕೂಡದನಿಗೂಡಿಸಿದರು. ಪ್ರತಿಕ್ರಿಯಿಸಿದ ಸಚಿವರು, ಅಬಕಾರಿ ಅಕಾಡೆಮಿ ಸ್ಥಾಪಿಸುವ ಬಗ್ಗೆ ಪರಿಶೀಲಿಸಿ, ಸೂಕ್ತಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹೊಸಪೇಟೆ ಅಬಕಾರಿ ವಿಭಾಗದ ಜಂಟಿ ಆಯುಕ್ತ ಬಾಲಕೃಷ್ಣ, ಚಿತ್ರದುರ್ಗ ಜಿಲ್ಲೆ ಅಬಕಾರಿ ಉಪ ಆಯುಕ್ತ ಮಾದೇಶ್, ಅಬಕಾರಿ ಸಚಿವರ ಆಪ್ತ ಕಾರ್ಯದರ್ಶಿ ವಿನಾಯಕ ಪಾಲನಕರ್ ಸೇರಿದಂತೆ ಹೊಸಪೇಟೆ ಅಬಕಾರಿ ವಿಭಾಗ ವ್ಯಾಪ್ತಿಯ ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಗದಗ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಅಬಕಾರಿ ಇಲಾಖೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios