Asianet Suvarna News Asianet Suvarna News

ರಾಜ್ಯದ ಪಾಲಿನ ನೀರು ಉಪಯೋಗಿಸಲು ಯಾರ ಅಪ್ಪಣೆಯೂ ಬೇಕಿಲ್ಲ: ಕಾರಜೋಳ

*  ತುಂಗ​ಭದ್ರಾ ಜಲಾ​ಶ​ಯಕ್ಕೆ ಬಾಗಿನ ಅರ್ಪಿ​ಸಿದ ಸಚಿವ ಗೋವಿಂದ ಕಾರ​ಜೋ​ಳ
*  ಆ. 21ಕ್ಕೆ ಆಲಮಟ್ಟಿಗೆ ಸಿಎಂ ಬೊಮ್ಮಾಯಿ ಬಾಗಿನ
*  ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಗೈರಾದ ಸಚಿವ ಆನಂದ್‌ ಸಿಂಗ್‌
 

Minister Govind Karjol Talks Over Water of the state grg
Author
Bengaluru, First Published Aug 18, 2021, 10:08 AM IST

ಹೊಸಪೇಟೆ(ಆ.18): ರಾಜ್ಯದ ಪಾಲಿನ ನೀರು ಉಪಯೋಗಿಸಲು ಯಾರ ಅಪ್ಪಣೆಯೂ ಬೇಕಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ. 

ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿಚಾರವಾಗಿ ಅಣ್ಣಾಮಲೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ನೀರು ಉಪಯೋಗಿಸಲು ಯಾರ ಅಪ್ಪಣೆ ಅಗತ್ಯವಿಲ್ಲ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರು ತಮ್ಮ ರಾಜ್ಯದ ಹಿತದೃಷ್ಟಿಯಿಂದ ಮಾತನಾಡಿದ್ದಾರೆ. ಸದ್ಯ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿ ಇರುವುದರಿಂದ ಈ ಕುರಿತು ಹೆಚ್ಚು ಹೇಳಲಾರೆ ಎಂದರು.

ಕ್ರಿಯಾಯೋಜನೆ:

ನ್ಯಾಯಾಧೀಕರಣ-1 ಮತ್ತು ನ್ಯಾಯಾಧೀಕರಣ-2ರಲ್ಲಿ ನಮ್ಮ ರಾಜ್ಯಕ್ಕೆ ಹಂಚಿಕೆಯಾದ ನೀರಿನ ಪಾಲನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಿಯಾಯೋಜನೆ ರೂಪಿಸುತ್ತಿದೆ. ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಸಮಸ್ಯೆಗಳ ವ್ಯಾಜ್ಯಗಳು ಸುಪ್ರೀಂಕೋರ್ಟ್‌ನಲ್ಲಿದ್ದು, ಅವುಗಳ ತೀರ್ಪು ಬರುವ ವರೆಗೆ ನಾವೆಲ್ಲ ಕಾಯಬೇಕಿದೆ ಎಂದರು.

ಶಾಸಕ ಸ್ಥಾನಕ್ಕಿಂದು ವಲಸಿಗ ಶಾಸಕರಲ್ಲೋರ್ವರ ರಾಜೀನಾಮೆ?

ನವಲಿ ಬಳಿ ಸಮತೋಲನ ಜಲಾಶಯ:

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಮ್ಮತಿ ಪಡೆದುಕೊಂಡು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಹತ್ತಿರ ಸಮತೋಲನ ಜಲಾಶಯ ನಿರ್ಮಿಸಲು ಯೋಜಿಸಲಾಗಿದೆ. ಡಿಪಿಎಆರ್‌ ತಯಾರಿಕೆ ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವ ಕಾರಜೋಳ ತಿಳಿಸಿದರು.

ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮೂರು ರಾಜ್ಯಗಳ ಸಭೆ ಕರೆದು ಸಮ್ಮತಿ ಪಡೆದುಕೊಳ್ಳಲಾಗುವುದು. ತುಂಗಭದ್ರಾ ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 133 ಟಿಎಂಸಿ ಇದ್ದು, ಹೂಳು ತುಂಬಿರುವುದರಿಂದ ಈ ಸಾಮರ್ಥ್ಯ 100.855 ಟಿಎಂಸಿಗೆ ಇಳಿದಿದೆ. ಖೋತಾ ಆಗಿರುವ 31.615 ಟಿಎಂಸಿ ನೀರು ಸರಿದೂಗಿಸಲು ನವಲಿ ಬಳಿ ಸಮತೋಲನ ಜಲಾಶಯ ನಿರ್ಮಿಸುವುದಕ್ಕೆ ಯೋಜಿಸಲಾಗಿದೆ ಎಂದರು. ಸಿಂಗಟಾಲೂರು ಏತ ನೀರಾವರಿ ಯೋಜನೆಗೆ 16 ಟಿಎಂಸಿ ನೀರಿನ ಹಂಚಿಕೆಯಾಗಿದೆ. ಬಲಭಾಗದಲ್ಲಿ ಒಟ್ಟು 35,791 ಎಕರೆ (14485 ಹೆಕ್ಟರ್‌) ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಈ ಯೋಜನೆಯ ಎಡಭಾಗದಲ್ಲಿ ಒಟ್ಟು 216467 ಎಕರೆ (87597 ಹೆಕ್ಟರ್‌ ) ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಒದಗಿಸಲಾಗಿದೆ ಎಂದರು.

ಸಚಿವ ಆನಂದ್‌ ಸಿಂಗ್‌ ಅವರು ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಗೈರಾದ ಹಿನ್ನೆಲೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯ ಮಾತನಾಡುವ ಸಂದರ್ಭವಲ್ಲ. ಭಾರತೀಯ ಸಂಸ್ಕೃತಿಯಂತೆ ಗಂಗೆಪೂಜೆ ಮಾಡುತ್ತಿದ್ದೇವೆ ಎಂದು ಉತ್ತರಿಸಿದರು.

ಕಾಲುವೆಗಳ ಆಧುನೀಕರಣ:

ವಿಜಯನಗರ ಅರಸರ ಕಾಲದಲ್ಲಿ ನೀರಾವರಿಗಾಗಿ ನಿರ್ಮಿಸಿರುವ ಸುಮಾರು 500 ವರ್ಷಗಳ ಹಿಂದಿನ ಅನ್‌ಲೈನ್‌ಡ 16 ಕಾಲುವೆಗಳು ಮತ್ತು 11 ಅಣೆಕಟ್ಟುಗಳಿದ್ದು, ಅವುಗಳಲ್ಲಿ ಸದ್ಯಕ್ಕೆ ಪ್ಯಾಕೇಜ್‌-1ಅಡಿ ಕಾಲುವೆ ಮತ್ತು ಅಣೆಕಟ್ಟು ಆಧುನೀಕರಣಗೊಳಿಸಲು . 371 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.

ವಿಜಯನಗರ ನೆಲ ರಾಜಕೀಯ ಕೇಂದ್ರ ಬಿಂದು..!

ಆ. 21ಕ್ಕೆ ಆಲಮಟ್ಟಿಗೆ ಸಿಎಂ ಬಾಗಿನ:

ಸಿಎಂ ಬಸವರಾಜ ಬೊಮ್ಮಾಯಿ ಅವರು ಆ. 21ರಂದು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಬಹುತೇಕ ಎಲ್ಲ ಡ್ಯಾಂಗಳು ತುಂಬಿರುವುದು ಇತಿಹಾಸದಲ್ಲಿಯೇ ಮೊದಲನೇ ಬಾರಿಯಾಗಿದೆ ಎಂದರು.

ಗಣಿ ಮತ್ತು ಭೂ ವಿಜ್ಞಾನ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌, ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ದಡೇಸೂಗುರ, ಪರಣ್ಣ ಮುನವಳ್ಳಿ, ವೆಂಕಟರಾವ್‌ ನಾಡಗೌಡ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಕೊಪ್ಪಳ ಜಿಲ್ಲಾಧಿಕಾರಿ ವಿಕಾಸಕಿಶೋರ ಸುರಳ್ಕರ, ಬಳ್ಳಾರಿ ಅಪರ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬಿ. ಗುಂಗೆ, ಮುಖ್ಯ ಅಭಿಯಂತ ಕೃಷ್ಣ ಚವ್ಹಾಣ್‌, ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎಲ್‌. ಬಸವರಾಜ್‌, ತುಂಗಭದ್ರಾ ನಾಲಾ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರ ಪಿ.ಬಿ. ಪ್ರಕಾಶ್‌, ಕಾರ್ಯಪಾಲಕ ಅಭಿಯಂತರ ಕೆ.ಬಿ.ಎಚ್‌. ಶಿವಶಂಕರ್‌, ಹೊಸಪೇಟೆ ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ತಹಸೀಲ್ದಾರ್‌ ಎಚ್‌. ವಿಶ್ವನಾಥ, ಕಾಡಾ ಆಡಳಿತಾಧಿಕಾರಿ ಅನಿಲಕುಮಾರ ಮತ್ತಿತರರಿದ್ದರು.
 

Follow Us:
Download App:
  • android
  • ios