ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಎಸಗಿದ ಆರೋಪದ ಮೇಲೆ ಸಮೀರ್‌ ಎಂಡಿ ವಿಚಾರಣೆಗೆ ಒಳಗಾಗಿದ್ದಾರೆ. ಪೊಲೀಸರು ಅವರ ಯೂಟ್ಯೂಬ್‌ ಆದಾಯದ ಮೂಲದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಹಣಕಾಸಿನ ಲಾಭಕ್ಕಾಗಿ ಸುಳ್ಳು ವಿಷಯ ಹಂಚಿಕೊಂಡಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ.

ಬೆಂಗಳೂರು (ಆ.25): ಧಾರ್ಮಿಕ ಶ್ರದ್ಧಾಕೇಂದ್ರ ಧರ್ಮಸ್ಥಳದ ವಿರುದ್ಧವಾಗಿ ಎಐ ರೀಲ್ಸ್‌ಗಳನ್ನು ರಚಿಸಿ ಅಪಪ್ರಚಾರ ಎಸಗಿದ್ದ ಆರೋಪದ ಮೇಲೆ ಪೊಲೀಸರಿಂದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಸಮೀರ್‌ ಎಂಡಿ ವಿಚಾರಣೆ ನಡೆಯುತ್ತಿದೆ. ಇದರ ನಡುವೆ ಬೆಳ್ತಂಗಡಿ ಪೊಲೀಸರು ಎಂಡಿ ಸಮೀರ್‌ನ ಯೂಟ್ಯೂಬ್‌ ಆದಾಯದ ಮೂಲದ ಬಗ್ಗೆಯೂ ತನಿಖೆ ಮಾಡುತ್ತಿದ್ದಾರೆ.

ಪ್ರಕರಣದ ತನಿಖೆಗೆ ಬಹಳ ಮುಖ್ಯವಾದ ಹಣಕಾಸು ಸಾಕ್ಷ್ಯ ಸಂಗ್ರಹ ಮಾಡಲಾಗುತ್ತಿದೆ. ಯೂಟ್ಯೂಬ್ ಆದಾಯದ ದಾಖಲೆಗಳನ್ನು ತನಿಖಾಧಿಕಾರಿ‌ ಕೇಳಿದ್ದಾರೆ. ವೀಡಿಯೊ ಮಾಡಿದ ಉದ್ದೇಶ 'ಹಣಕಾಸು ಲಾಭ' ಆಗಿದೆಯೇ ಎಂದು ಪತ್ತೆ ಮಾಡಲು ದಾಖಲೆ ಸಂಗ್ರಹ ಮಾಡುತ್ತಿದ್ದಾರೆ. ಹೆಚ್ಚಿನ ಅದಾಯಕ್ಕಾಗಿ ತಪ್ಪು ಹಾಗೂ ಸುಳ್ಳು ವಿಷಯ ಹಂಚಿದ್ದಾನೆಯೇ ಎಂದು ದೃಢಪಡಿಸಲು ದಾಖಲೆಗಳನ್ನು ಸಿದ್ಧಮಾಡುತ್ತಿದ್ದಾರೆ.

YouTube Monetization (AdSense account) ಮೂಲಕ ಬಂದ ಆದಾಯವೆಷ್ಟು? ಬ್ಯಾಂಕ್ ಖಾತೆಗೆ ಟ್ರಾನ್ಸ್‌ಫರ್ ಆದ ಹಣದ ದಾಖಲೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಯಾವುದೇ third-party sponsorship ಅಥವಾ paid promotion ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ಚಾನೆಲ್‌ಅನ್ನು ಸಮೀರ್‌ನೇ ಆರಂಭಿಸಿದ್ದಾ ಅಥವಾ ಯಾರಾದರೂ ಜೊತೆಯಾಗಿ ನಡೆಸುತ್ತಿದ್ದಾರಾ ಎಂದು ಪರಿಶೀಲನೆ ಮಾಡಲಾಗುತ್ತದೆ. ಚಾನಲ್‌ಗೆ ಸಂಬಂಧಿಸಿದ AdSense ಖಾತೆ ಯಾರ ಹೆಸರಿನಲ್ಲಿದೆ ಎಂಬ ಮಾಹಿತಿ ಸಂಗ್ರಹ ಕೂಡ ಮಾಡಲಾಗುತ್ತಿದೆ. ಯೂಟ್ಯೂಬ್ ಚಾನಲ್‌ನಿಂದ ತಿಂಗಳಿಗೆ ಸರಾಸರಿ ಎಷ್ಟು ಆದಾಯ ಬರುತ್ತದೆ ಎಂಬ ವಿವರ ಪಡೆದುಕೊಳ್ಳಲಿದ್ದು, 2025ರ ಜುಲೈ ತಿಂಗಳಲ್ಲಿ ಈ ವೀಡಿಯೊ upload ಆದ ನಂತರ ಆದಾಯದಲ್ಲಿ ಏರಿಕೆ ಕಂಡಿದ್ದರೆ ಅದರ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ.

Google/YouTube ನಿಂದ ಹಣ ಯಾವ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಎಂಬ ಮಾಹಿತಿಯನ್ನೂ ಪಡೆಯಲಿದ್ದಾರೆ. 'Dootha' ಚಾನಲ್‌ಗೆ ಯಾವುದೇ ರಾಜಕೀಯ/ಸಾಮಾಜಿಕ ಸಂಘಟನೆಗಳಿಂದ ಹಣಕಾಸು ಸಹಾಯ ಸಿಕ್ಕಿದೆಯೇ ಎಂಬ ವಿವರ ಕೂಡ ಸಂಗ್ರಹವಾಗಲಿದೆ.

ತಿಮರೋಡಿ ಕುಟುಂಬದ ಕಾರ್‌ನಲ್ಲೇ ಠಾಣೆಗೆ ಬಂದ ಸಮೀರ್‌!

ವಿಚಾರಣೆ ಎದುರಿಸುತ್ತಿರುವ ಎಂಡಿ ಸಮೀರ್‌, ಸೋಮವಾರ ಮಹೇಶ್ ಶೆಟ್ಟಿ ತಿಮರೋಡಿ ಕುಟುಂಬಕ್ಕೆ ಸೇರಿದ ಕಾರಿನಲ್ಲೇ ಪೊಲೀಸ್‌ ಠಾಣೆಗೆ ಬಂದಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಸಹೋದರ ಮೋಹನ್ ಕುಮಾರ್ ಶೆಟ್ಟಿಗೆ ಸೇರಿದ ಟೊಯೋಟಾ ಫಾರ್ಚುನರ್‌ ಕಾರ್‌ನಲ್ಲಿ ಸಮೀರ್‌ ಪೊಲೀಸ್‌ ಠಾಣೆಗೆ ಬಂದಿದ್ದರು. ನಿನ್ನೆಯೂ ಇದೇ ಕಾರಿನಲ್ಲಿ ಸಮೀರ್ ವಿಚಾರಣೆಗೆ ಆಗಮಿಸಿದ್ದರು. ಮೋಹನ್ ಕುಮಾರ್ ಶೆಟ್ಟಿ ಪುತ್ರನಿಂದಲೇ ಕಾರು ಚಾಲನೆ ಮಾಡಿದ್ದ. ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲೇ ಸಮೀರ್ ಉಳಿದುಕೊಂಡಿರೋ ಮಾಹಿತಿ ಇದೆ.