'DC ರೋಹಿಣಿ-ಪ್ರತಾಪ್ ಸಿಂಹ ವಾಕ್ಸಮರ : ಈ ಜಗಳದಿಂದ ಮರ್ಯಾದೆ ಹೋಗುತ್ತಿದೆ'
- ನನ್ನ ರಾಜಕೀಯ ಜೀವನದಲ್ಲಿ ಈ ರೀತಿಯ ಕಿತ್ತಾಟ ಎಂದೂ ನೋಡಿಲ್ಲ
- ಅಧಿಕಾರಗಳು ಜನಪ್ರತಿನಿಧಿಗಳ ಜಗಳದಿಂದ ಮೈಸೂರಿನ ಮರ್ಯಾದೆ ಹೋಗುತ್ತಿದೆ
- 'DC ರೋಹಿಣಿ-ಪ್ರತಾಪ್ ಸಿಂಹ ವಾಕ್ಸಮರದ ಬಗ್ಗೆ ಧ್ರುವನಾರಾಯಣ್ ಪ್ರತಿಕ್ರಿಯೆ
ಮೈಸೂರು (ಜೂ.02): ನನ್ನ ರಾಜಕೀಯ ಜೀವನದಲ್ಲಿ ಈ ರೀತಿಯ ಕಿತ್ತಾಟ ಎಂದೂ ನೋಡಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ಜಗಳದಿಂದ ಮೈಸೂರಿನ ಮರ್ಯಾದೆ ಹೋಗುತ್ತಿದೆ ಎಂದು ಮಾಜಿ ಸಂಸದ ಧ್ರುವನಾರಾಯಣ್ ಹೇಳಿದರು.
ಮೈಸೂರಿನಲ್ಲಿಂದು ಮಾತನಾಡಿದ ಧ್ರುವನಾರಾಯಣ್, ನಮ್ಮದು ವಿಶ್ವದಲ್ಲೇ ಹೆಸರುವಾಸಿಯಾದ ನಗರ. ಜಿಲ್ಲೆಯಲ್ಲಿ ಹಲವು ನಾಯಕರು, ಅಧಿಕಾರಿಗಳು ಅವರದ್ದೇ ಆದ ಕೊಡುಗೆ ನೀಡಿ ಹೋಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ಹಿಂದಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಶ್ರಮ ಇದೆ. ಇಂತಹ ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಜನನಾಯಕರ ಆರೋಪ ಪ್ರತ್ಯಾರೋಪ ಸರಿಯಲ್ಲ ಎಂದು ಡೀಸಿ ರೋಹಿಣಿ ಸಿಂಧೂರಿ ಹಾಗೂ ಸಂಸದ ಪ್ರತಾಪ್ ಸಿಂಹ ಮಾತಿನ ಸಮರದ ಬಗ್ಗೆ ಹೇಳಿದರು.
ಬೆಂಗಳೂರು ಹೊರತುಪಡಿಸಿದರೆ ಮೈಸೂರಿನಲ್ಲಿ ಅತಿಹೆಚ್ಚು ಪಾಸಿಟಿವ್ ಕೇಸ್ ದಾಖಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಬ್ಬರೂ ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕು. ಅದನ್ನ ಬಿಟ್ಟು ಹೀಗೆ ಬಹಿರಂಗವಾಗಿ ಕಿತ್ತಾಡುವುದು ಎಷ್ಟು ಸರಿ..? ಪ್ರತಿದಿನ ಸಂಸದರು, ಶಾಸಕರ ಹೇಳಿಕೆ ಹಾಗೂ ಜಿಲ್ಲಾಧಿಕಾರಿಗಳ ಉತ್ತರ ಇದೇ ಆಗುತ್ತಿದೆ ಎಂದರು.
ಆಡಳಿತ ಪಕ್ಷದ ನಾಯಕರು ಅಧಿಕಾರಿಗಳ ಶೀತಲ ಸಮರದ ಸತ್ಯ ಹೊರಬರಬೇಕು. ಇಬ್ಬರೂ ಈ ರೀತಿ ಕಿತ್ತಾಡುತ್ತಿರುವುದು ನೋಡಿದರೆ ಭ್ರಷ್ಟಾಚಾರದ ವಾಸನೆ ಬರುತ್ತಿದೆ ಎಂದರು.
ಪ್ರತಾಪ್ ಸಿಂಹ VS ರೋಹಿಣಿ ಸಿಂಧೂರಿ ಪತ್ರ ಸಮರ: 41 ಕೋಟಿ ರೂ ಲೆಕ್ಕ ಕೊಟ್ಟ ಡೀಸಿ ..
ಕಾಂಗ್ರೆಸ್ ನಾಯಕರ ಮಾತಿಗೆ ಮನ್ನಣೆ ಇಲ್ಲ : ಎಸ್.ಟಿ ಸೋಮಶೇಖರ್ ಬಿಜೆಪಿಗೆ ಮಾತ್ರ ಉಸ್ತುವಾರಿ ಸಚಿವ. ಕೋವಿಡ್ ನಿಯಂತ್ರಣದಲ್ಲಿ ಕಾಂಗ್ರೆಸ್ ನಾಯಕರ ಮಾತಿಗೆ ಮನ್ನಣೆ ಇಲ್ಲ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಶಾಸಕಾಂಗ ಹಾಗೂ ಕಾರ್ಯಾಂಗ ವಿಫಲವಾಗಿದೆ.
ಸ್ವತಃ ಆಡಳಿತ ಪಕ್ಷದ ಎಂಎಲ್ಸಿ ವಿಶ್ವನಾಥ್ ಅವರೇ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಯಾವೊಬ್ಬ ಬಿಜೆಪಿ ನಾಯಕರೂ ಪ್ರತಿಕ್ರಿಯಿಸಿಲ್ಲ. ಉಸ್ತುವಾರಿ ಸಚಿವರು ಎಲ್ಲರನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ಡಿಎಚ್ಓ ಅವರಿಗೆ ಜಾತಿ ನಿಂದನೆ ಮಾಡಿರುವುದು ಸರಿಯಲ್ಲ. ಮಂತ್ರಿಯಾಗಿ ಮುಂದುವರೆಯುವ ನೈತಿಕತೆ ಜಿಲ್ಲಾ ಉಸ್ತುವಾರಿ ಸಚಿವರಿಗಿಲ್ಲ. ಅಧಿಕಾರಿಗಳನ್ನ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಹೇಳಿದರು.
ತಪ್ಪು ಮಾಡಿದ್ದಲ್ಲಿ ಸಸ್ಪೆನ್ಡ್ ಮಾಡಿ ಅಥವಾ ಕಾನೂನು ರೀತಿ ಕ್ರಮ ತೆಗೆದುಕೊಳ್ಳಿ. ಜಾತಿ ನಿಂದನೆ ಮಾಡಿದ್ದು ಸರಿಯಲ್ಲ, ಇದನ್ನ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಅನುಭವದ ಕೊರತೆ ಇದೆ. ಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಎಸ್.ಟಿ ಸೋಮಶೇಖರ್ ಯೋಗ್ಯರಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಗುಲಾಮಗಿರಿಯ ಸಂಕೇತ : ಕಾಂಗ್ರೆಸ್ ಗುಲಾಮಗಿರಿಯ ಸಂಕೇತ ಎಂದ ಸಿ ಟಿ ರವಿ ಆರೋಪಕ್ಕೆ ತಿರುಗೇಟು ನೀಡಿದ ಧ್ರುವ ನಾರಾಯಣ್, ಅಮಿಶ್ ಶಾ ಮೋದಿಗೆ ಬಿಜೆಪಿ ನಾಯಕರು ಗುಲಾಮರಾಗಿದ್ದಾರೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ? ರವಿಯವರಿಗೆ ಅಜ್ಞಾನ ತುಂಬಿದೆ.
ಅಭಿವೃದ್ಧಿ ಅಂತಾ ಓಡಾಡಬೇಡ ಜನ ಇದನ್ನು ನೋಡಲ್ಲ. ದತ್ತಪೀಠದ ಬಗ್ಗೆ ವರ್ಷಕ್ಕೊಮ್ಮೆ ಮಾತಾಡಿದರೆ ಸಾಕು ಗೆಲ್ಲುತ್ತೇನೆ ಅಂದಿದ್ದರು. ಬಿಜೆಪಿಯವರು ಭಾವನಾತ್ಮಕ ವಿಚಾರದ ಬಗ್ಗೆ ಮಾತನಾಡುವುದು ಸಾಮಾನ್ಯ ಎಂದು ಧ್ರುವನಾರಾಯಣ್ ಹೇಳಿದರು.
ಅಧಿಕಾರ ದುರ್ಬಳಕೆ : ಬಿ ವೈ ವಿಜಯೇಂದ್ರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಆರೋಪ ಮಾಡಿದ್ದು, ರಾಜ್ಯ ಬಿಜೆಪಿ ಭಂಡ ಸರ್ಕಾರ. ಕೋರ್ಟ್ ಆದೇಶಗಳಿಗೂ ಕಿಮ್ಮತ್ತು ಇಲ್ಲ. ಕಾನೂನು ಎಲ್ಲರಿಗೂ ಒಂದೇ. ಸಿಎಂ ಅವರ ತಂದೆ ಅಂತಾ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ವಿಜಯೇಂದ್ರ ವಿರುದ್ದ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿದೆ. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಯವರೇ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದರು.
'ಈ ಸುಳ್ಳು ಲೆಕ್ಕ ಕೊಡಲು IAS ಬೇಕಿತ್ತಾ? SSLC ಫೇಲ್ ಆದವ ಕೊಡ್ತಾನೆ'
ಮಾಹಿತಿ ಕೇಳೋದು ತಪ್ಪಲ್ಲ : ಸಂಸದ ಪ್ರತಾಪಸಿಂಹ ಸಾರ್ವಜನಿಕರ ಹಣದ ಮಾಹಿತಿ ಕೇಳುವುದು ತಪ್ಪಲ್ಲ. ಆದರೆ ಕೇಂದ್ರ ಸರ್ಕಾರ ಕೊಟ್ಟ ಅನುದಾನದ ಲೆಕ್ಕವನ್ನು ಕೇಳಿ. ಡಿಸಿ ಅವರ ಸ್ವಿಮ್ಮಿಂಗ್ ಪೂಲ್ ಲೆಕ್ಕವನ್ನು ಕೇಳಿ. ಈ ಕಾಲದಲ್ಲಿ ಸ್ವಿಮ್ಮಿಂಗ್ಪೂಲ್ ಅವಶ್ಯಕತೆ ಇರಲಿಲ್ಲ. ಇದರ ಜೊತೆಗೆ ಅದನ್ನು ಕೇಳಿ ಎಂದರು.
ಇನ್ನು ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಈ ರೀತಿ ವಾತಾವರಣ ಆಗಿದೆ. ಸಚಿವ ಸೋಮಶೇಖರ್ ಅವರಿಗೆ ಅಧಿಕಾರ ಮಾಡುವ ಶಕ್ತಿಯಿಲ್ಲ. ನಿಮ್ಮ ಆಡಳಿತ ವೈಖರಿ ಕೆಲಸದಲ್ಲಿ ತೋರಿಸಿ. ಕೇವಲ ಪ್ರವಾಸ ಮಾಡಿದರೆ ಸಾಕಾಗುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಹೇಳಿದರು.