ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ, ತಂಗಿಯ ಪ್ರೀತಿ ಮತ್ತು ಗರ್ಭಿಣಿ ಎಂಬ ವಿಚಾರದಿಂದ ಮರ್ಯಾದೆಗೆ ಅಂಜಿ ಅಣ್ಣನೊಬ್ಬ ತನ್ನ ತಂದೆ-ತಾಯಿ ಹಾಗೂ ತಂಗಿಯನ್ನು ಹತ್ಯೆ ಮಾಡಿದ್ದಾನೆ. ಆದರೆ, ಇದೀಗ ಆತ ಪೊಲೀಸರ ಮುಂದೆ 3 ಕೊಲೆಯಲ್ಲ, 4 ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ.

ವಿಜಯನಗರ/ಬೆಂಗಳೂರು (ಫೆ.01): 'ದೃಶ್ಯಂ' ಸಿನಿಮಾದ ಕಥೆಯನ್ನೇ ಮೀರಿಸುವಂತಹ ರೋಚಕ ಹಾಗೂ ಅಷ್ಟೇ ಭಯಾನಕ ತ್ರಿವಳಿ ಹತ್ಯಾಕಾಂಡವೊಂದು ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದಿದೆ. ತಂಗಿಯ ಪ್ರೀತಿ ಮತ್ತು ಆಕೆ ಗರ್ಭಿಣಿ ಎಂಬ ವಿಚಾರ ತಿಳಿದ ಅಣ್ಣ, ಮರ್ಯಾದೆಗೆ ಅಂಜಿ ಹೆತ್ತ ತಂದೆ-ತಾಯಿ ಹಾಗೂ ತಂಗಿಯನ್ನು ಭೀಕರವಾಗಿ ಹತ್ಯೆಗೈದಿದ್ದಾನೆ. ಈ ಘಟನೆ ಕೇವಲ ಮೂವರ ಹತ್ಯೆಯಲ್ಲ, ತಂಗಿಯ ಹೊಟ್ಟೆಯಲ್ಲಿದ್ದ ಕಂದಮ್ಮನನ್ನೂ ಸೇರಿಸಿ ಒಟ್ಟು ನಾಲ್ವರ ಹತ್ಯೆ ಎಂಬ ಆಘಾತಕಾರಿ ಸತ್ಯ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಮರ್ಯಾದಾ ಹತ್ಯೆಗೆ ಕಾರಣವೇನು?

ಕೊಟ್ಟೂರಿನ ನಿವಾಸಿ ಅಕ್ಷಯ್ ಈ ಕೃತ್ಯ ಎಸಗಿದ ಪಾಪಿ. ಪಿಯುಸಿ ಓದುತ್ತಿದ್ದ ಅಕ್ಷಯ್ ತಂಗಿ ಅಮೃತಾ, ಅನ್ಯ ಕೋಮಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಕಳೆದ ನಾಲ್ಕು ತಿಂಗಳ ಹಿಂದೆ ತಂಗಿಯ ಮೊಬೈಲ್ ಪರಿಶೀಲಿಸಿದಾಗ ಪ್ರೀತಿಯ ವಿಷಯ ಅಕ್ಷಯ್‌ಗೆ ತಿಳಿದಿತ್ತು. ಆಗ ಬುದ್ಧಿವಾದ ಹೇಳಿದ್ದ ಅಕ್ಷಯ್, ಆಕೆಯನ್ನು ಬೆದರಿಸಿದ್ದ. ಆದರೆ, ಜನವರಿ 26ರಂದು ತಾಯಿ, 'ಅಮೃತಾ ಮೂರು ತಿಂಗಳ ಗರ್ಭಿಣಿ' ಎಂಬ ಆಘಾತಕಾರಿ ವಿಷಯವನ್ನು ಮಗನಿಗೆ ತಿಳಿಸಿದ್ದರು. ಗರ್ಭಪಾತ ಮಾಡಿಸೋಣ ಎಂದು ಅಕ್ಷಯ್ ಹಠ ಹಿಡಿದಿದ್ದನಾದರೂ, ಪೋಷಕರು ಅದಕ್ಕೆ ಒಪ್ಪಿರಲಿಲ್ಲ. 'ಊರವರ ಮುಂದೆ ಮರ್ಯಾದೆ ಹೋಗುತ್ತದೆ, ಇವರನ್ನು ಹೀಗೆ ಬಿಟ್ಟರೆ ನನಗೆ ಉಳಿಗಾಲವಿಲ್ಲ' ಎಂದು ನಿರ್ಧರಿಸಿದ ಅಕ್ಷಯ್, ಇಡೀ ಕುಟುಂಬವನ್ನೇ ಮುಗಿಸಲು ಸ್ಕೆಚ್ ಹಾಕಿದ್ದನು.

ಸಿನಿಮೀಯ ಮಾದರಿಯಲ್ಲಿ ಹತ್ಯೆ:

  • ಜನವರಿ 26ರ ಗಣರಾಜ್ಯೋತ್ಸವದಂದೇ ಈ ನರಮೇಧ ನಡೆದಿದೆ. ಅಕ್ಷಯ್ ಅತ್ಯಂತ ಯೋಜಿತವಾಗಿ ಒಬ್ಬೊಬ್ಬರನ್ನೇ ಹತ್ಯೆ ಮಾಡಿದ್ದ.
  • ಮೊದಲು ಮನೆಯಲ್ಲಿದ್ದ ತಾಯಿಯನ್ನು ಕೊಲೆಗೈದು, ನಂತರ ಸ್ನಾನ ಮಾಡಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ.
  • ಸಂಜೆ 6 ಗಂಟೆಗೆ ಮನೆಗೆ ಬಂದ ತಂಗಿ ಅಮೃತಾಳನ್ನು ಹತ್ಯೆಗೈದು, ತಾಯಿಯ ಶವದ ಪಕ್ಕ ಮಲಗಿಸಿದ್ದ. ಬಳಿಕ ಮತ್ತೊಮ್ಮೆ ಸ್ನಾನ ಮಾಡಿ ಬಟ್ಟೆ ಬದಲಾಯಿಸಿದ್ದ.
  • ರಾತ್ರಿ 10.30ಕ್ಕೆ ಕುಡಿದು ಮನೆಗೆ ಬಂದ ತಂದೆ ಸೋಫಾದ ಮೇಲೆ ಕುಳಿತಿದ್ದಾಗ, ಹಿಂದಿನಿಂದ ಬಂದು ಕುತ್ತಿಗೆ ಸೀಳಿ ಕೊಲೆ ಮಾಡಿದ್ದ.
  • ಮೂವರನ್ನೂ ಕೊಂದ ಬಳಿಕ ರಾತ್ರಿಯಿಡೀ ಟಿವಿ ನೋಡುತ್ತಾ ಕುಳಿತಿದ್ದ ಈ ಕ್ರೂರಿ, ಶವಗಳನ್ನು ಮನೆಯಲ್ಲೇ ಹೂತು ಹಾಕಲು ನಿರ್ಧರಿಸಿದ್ದ. ಜ. 27ರಂದು ಮನೆಯಲ್ಲೇ ಗುಂಡಿ ತೋಡಿ ಮೂವರ ಶವಗಳನ್ನು ಹೂತು ಹಾಕಿ ಟೈಲ್ಸ್ ಹಾಕಿದ್ದ.

ಬೆಂಗಳೂರಿಗೆ ಬಂದು ನಾಟಕ:

ಹತ್ಯೆಯ ನಂತರ ಅಕ್ಷಯ್, ತನ್ನ ಸೋದರಮಾವ ವಸಂತ್‌ನನ್ನು ಸಂಪರ್ಕಿಸಿದ್ದ. ಮಾವನ ಸಲಹೆಯಂತೆ 'ಮಿಸ್ಸಿಂಗ್ ಡ್ರಾಮಾ' ಸೃಷ್ಟಿಸಲು ಬೆಂಗಳೂರಿಗೆ ಬಂದಿದ್ದ. ತಂದೆಗೆ ಎದೆನೋವಿನ ಸಮಸ್ಯೆಯಿದ್ದ ಕಾರಣ, ಜಯದೇವ ಆಸ್ಪತ್ರೆಯ ಬಳಿ ಬಂದು ಫೋಟೋ ತೆಗೆದು, ಮೊಬೈಲ್‌ಗಳನ್ನು ಅಲ್ಲಿನ ಡಸ್ಟ್‌ಬಿನ್‌ಗೆ ಎಸೆದಿದ್ದ. ಬಳಿಕ ತಿಲಕನಗರ ಪೊಲೀಸ್ ಠಾಣೆಗೆ ಬಂದು ತಂದೆ, ತಾಯಿ, ತಂಗಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದ. ಆದರೆ, ಪೊಲೀಸರ ತೀವ್ರ ವಿಚಾರಣೆ ವೇಳೆ ಅಕ್ಷಯ್ ತಡಬಡಾಯಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.

ಪೋಕ್ಸೋ ಕೇಸ್ ಸಾಧ್ಯತೆ:

ಮೃತ ಅಮೃತಾ ಅಪ್ರಾಪ್ತೆಯಾಗಿದ್ದು, ಆಕೆ ನಿಜವಾಗಿಯೂ ಗರ್ಭಿಣಿಯೇ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಯಬೇಕಿದೆ. ಒಂದು ವೇಳೆ ಆಕೆ ಗರ್ಭಿಣಿಯಾಗಿದ್ದರೆ, ಆಕೆಯ ಪ್ರಿಯಕರನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಸದ್ಯ ಬೆಂಗಳೂರು ಪೊಲೀಸರು ಅಕ್ಷಯ್ ಮತ್ತು ಆತನಿಗೆ ಸಹಕರಿಸಿದ ಮಾವ ವಸಂತ್‌ನನ್ನು ಬಂಧಿಸಿದ್ದು, ಪ್ರಕರಣವನ್ನು ಮುಂದಿನ ತನಿಖೆಗಾಗಿ ಕೊಟ್ಟೂರು ಠಾಣೆಗೆ ವರ್ಗಾಯಿಸಲಿದ್ದಾರೆ.