ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಅಕ್ಷಯ್ ಎಂಬಾತ ತನ್ನ ತಂದೆ, ತಾಯಿ ಮತ್ತು ಸಹೋದರಿಯನ್ನು ಹತ್ಯೆ ಮಾಡಿದ್ದಾನೆ. ಶವಗಳನ್ನು ಮನೆಯಲ್ಲೇ ಅಗೆದ ಗುಂಡಿಯಲ್ಲಿ ಹೂಳಲು ಯತ್ನಿಸಿದ್ದು, ಈ ವೇಳೆ ನಡೆದ ಒಂದು ಭೀಕರ ಕೃತ್ಯ ತನಿಖೆಯಿಂದ ಬೆಳಕಿಗೆ ಬಂದಿದೆ.  

ಕೊಟ್ಟೂರು: ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ತ್ರಿವಳಿ ಹ*ತ್ಯೆ ನಡೆಸಿದ್ದ ಆರೋಪಿ ಅಕ್ಷಯ್‌ ಎಂಬಾತ, ಶವ ಹೂಳಲು ತೆಗೆದ ಗುಂಡಿಯೊಳಗೆ ಮೂವರ ಶವ ಹಿಡಿಸುತ್ತಿಲ್ಲವೆಂದು ತಂದೆಯ ಕಾಲನ್ನೇ ಕತ್ತರಿಸಿದ್ದ ಎಂಬ ಭೀಕರ ವಿಷಯ ಬೆಳಕಿಗೆ ಬಂದಿದೆ. ಜ.26ರಂದು ನಡೆದಿದ್ದ ಘಟನೆಯ ತನಿಖೆ ವೇಳೆ ಈ ಅಂಶ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ನಡುವೆ ಪ್ರಕರಣದ ತನಿಖೆ ಆರಂಭಿಸಿರುವ ಬೆಂಗಳೂರು ಪೊಲೀಸರು, ಶನಿವಾರ ಆತನನ್ನು ಬೆಂಗಳೂರಿನಿಂದ ಕೊಟ್ಟೂರಿಗೆ ಕರೆ ತಂದು, ಸ್ಥಳ ಮಹಜರು ನಡೆಸಿ, ಆತನ ಸಮ್ಮುಖ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಅಷ್ಟಕ್ಕೂ ಏನಾಗಿತ್ತು?:

ಸೋದರಿ ವಿವಾಹ, ಹಣಕಾಸಿನ ವಿಷಯ ಸಂಬಂಧ ತಂದೆ, ತಾಯಿ ಮತ್ತು ಸೋದರಿ ಜೊತೆಗೆ ಹಲವು ದಿನಗಳಿಂದ ಅಕ್ಷಯ್ ಜಗಳವಾಡಿಕೊಂಡು ಬಂದಿದ್ದ. ಈ ನಡುವೆ ಜ.26ರಂದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಚಾಕು ಬಳಸಿ ತಾಯಿಯನ್ನು ಅಕ್ಷಯ್‌ ಹ*ತ್ಯೆ ಮಾಡಿದ್ದ. ಬಳಿಕ ಗಿಫ್ಟ್‌ ಕೊಡುವುದಾಗಿ ಸೋದರಿ ಕರೆಸಿ ಆಕೆಯನ್ನೂ ಹ*ತ್ಯೆ ಮಾಡಿದ್ದ. ನಂತರ ತಂದೆಯನ್ನೂ ಹೀಗೆ ಕೊ*ಲೈಗೈದಿದ್ದ.

ನಂತರ ತಾನು ವಾಸವಾಗಿದ್ದ ಬಾಡಿಗೆ ಮನೆಯ ಹಾಲ್‌ನಲ್ಲೇ 4 ಅಡಿ ಉದ್ದ, ಎರಡೂವರೆ ಅಡಿ ಅಗಲದ ಗುಂಡಿ ತೆಗೆದು, ಮೂವರ ಶವ ಹೂಳಲು ಯತ್ನಿಸಿದ್ದ. ಮೊದಲು ತಾಯಿ, ಬಳಿಕ ತಂಗಿ, ಕೊನೆಗೆ ತಂದೆಯ ಮೃತದೇಹ ಹಾಕಿದ ನರಹಂ*ತಕ, ಮೂರು ಮೃತದೇಹಗಳು ಗುಂಡಿಯೊಳಗೆ ಹೋಗದಿದ್ದಾಗ ತಂದೆಯ ಕಾಲನ್ನೇ ಕತ್ತರಿಸಿದ್ದ. ಬಳಿಕ ಬೆಂಗಳೂರಿಗೆ ತೆರಳಿ, ಮೂವರು ನಾಪತ್ತೆಯಾಗಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದ. ಆದರೆ ವಿಚಾರಣೆ ವೇಳೆ ಆತನ ಕೃತ್ಯ ಬೆಳಕಿಗೆ ಬಂದಿತ್ತು.

ತಂದೆಯ ಕಾಲು ತುಂಡಾಗಿಸಿದ:

ಶನಿವಾರ ಬೆಳಗ್ಗೆ 10:45ರ ವೇಳೆಗೆ ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ವಿಶ್ವನಾಥ ಅವರು ಅಕ್ಷಯ್‌ನನ್ನು ಕೊಟ್ಟೂರಿನ ಆತನ ಮನೆಗೆ ಕರೆ ತಂದು, ಸ್ಥಳ ಮಹಜರು ಕಾರ್ಯ ನಡೆಸಿದರು. ತಂದೆ ಭೀಮರಾವ್, ತಾಯಿ ಜಯಲಕ್ಷ್ಮೀ, ತಂಗಿ ಅಮೃತಾಳನ್ನು ಕೊ*ಲೆಗೈದು ಹೂತು ಹಾಕಿರುವ ಸ್ಥಳ ತೋರಿಸುವಂತೆ ಸೂಚಿಸಿದರು. ಬಳಿಕ ಹಿರಿಯ ಅಧಿಕಾರಿಗಳು ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಶ*ವವನ್ನು ಒಂದೊಂದಾಗಿ ಮೇಲಕ್ಕೆತ್ತಿ ಶ*ವಪರೀಕ್ಷೆಗೆ ಕಳುಹಿಸಲಾಯಿತು.

ಬಿಗಿ ಪೊಲೀಸ್‌ ಬಂದೋಬಸ್ತ್‌:

ಆರೋಪಿಯನ್ನು ಪೊಲೀಸರು ಬೆಂಗಳೂರಿನಿಂದ ಕರೆ ತರುತ್ತಿದ್ದಾರೆಂಬ ಮಾಹಿತಿ ಪಡೆದಿದ್ದ ಪಟ್ಟಣದ ಜನತೆ ಹರಪನಹಳ್ಳಿ ರಸ್ತೆ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಆದರೆ, ಪೊಲೀಸರು ಈತನ ಮನೆಯ ಬಳಿ, ಬ್ಯಾರಿಕೇಡ್‌ ಹಾಕಿ, ಯಾರೂ ಒಳಗೆ ತೆರಳದಂತೆ ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು. ಬೆಂಗಳೂರಿನ ತಿಲಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಿಯೇ ಎಫ್‌ಐಆರ್‌ ಮಾಡಲಾಗಿದೆ. ಹಾಗಾಗಿ, ಅಲ್ಲಿಯ ಪೊಲೀಸರೇ ತನಿಖೆ ನಡೆಸಲಿದ್ದಾರೆ ಎಂದು ವಿಜಯನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌. ಜಾಹ್ನವಿ ತಿಳಿಸಿದ್ದಾರೆ.