ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮತ್ತು ಕೆ.ಜಿ.ಎಫ್ ಶಾಸಕಿ ರೂಪಕಲಾ ಎಂ. ಶಶಿಧರ್ ಅವರು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪಿಎಚ್ಡಿ ಪದವಿ ಸ್ವೀಕರಿಸಿದರು.
ಚಿಕ್ಕಮಗಳೂರು: ಮೈಸೂರಿನಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರಿಂದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪಿಎಚ್ಡಿ ಪದವಿ ಸ್ವೀಕರಿಸಿದರು.
ಮುಕ್ತ ಗಂಗೋತ್ರಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ। ಕೆ.ಜೆ.ಸುರೇಶ್ ಅವರ ಮಾರ್ಗದರ್ಶನದಲ್ಲಿ ‘ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳ’ ಒಂದು ಅಧ್ಯಯನ ವಿಷಯ ಕುರಿತ ಮಹಾಪ್ರಬಂಧಕ್ಕೆ ಸಿ.ಟಿ.ರವಿ ಅವರಿಗೆ ಪಿಎಚ್ಡಿ ಪದವಿ ಲಭಿಸಿದೆ.
ಸತತ 4 ವರ್ಷಗಳ ಅಧ್ಯಯನದ ಬಳಿಕ ಪ್ರಬಂಧ ಪೂರ್ಣ
ಈ ವೇಳೆ ಮಾತನಾಡಿದ ಸಿ.ಟಿ.ರವಿ, ಓದುವುದು ಪ್ರಮುಖ ಆಸಕ್ತಿಯಾಗಿದ್ದು, ಕೆಎಸ್ಒಯುನಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕ ಡಾ। ಕೆ.ಜೆ. ಸುರೇಶ್ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ನಿರಂತರ 4 ವರ್ಷಗಳ ಅಧ್ಯಯನದ ಬಳಿಕ 2023ರಲ್ಲಿ ಪೂರ್ಣಗೊಳಿಸಿ, ಮಂಡಿಸಿದೆ. ಯುಪಿಎ ಮತ್ತು ಎನ್ಡಿಎ ಒಕ್ಕೂಟಗಳ ಮೈತ್ರಿಕೂಟ ಸರ್ಕಾರಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ ಮಹಾ ಪ್ರಬಂಧ ರಚಿಸಿದ್ದೇನೆ ಎಂದು ವಿವರಿಸಿದರು.
ಅಧ್ಯಯನ ಸಂದರ್ಭದಲ್ಲಿ ತಿದ್ದಿ, ತೀಡಿ ಅತ್ಯುತ್ತಮ ಮಾರ್ಗದರ್ಶನ ಮಾಡಿದ ಸುರೇಶ್ ಅವರಿಗೆ ಮನಪೂರ್ವಕ ಕೃತಜ್ಞತೆ. ರಾಜಕೀಯ ಕಾರ್ಯದೊತ್ತಡಗಳ ನಡುವೆ ಪಿಎಚ್ಡಿ ಅಧ್ಯಯನ ಕೊಂಚ ನಿಧಾನವಾಗಿತ್ತು. ಆದರೆ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತನಾದ ಬಳಿಕ ಕೊಂಚ ಹೆಚ್ಚಿನ ಸಮಯ ಲಭಿಸಿತು. ಇದನ್ನು ಬಳಸಿಕೊಂಡು, ಅಧ್ಯಯನ ಪೂರ್ಣಗೊಳಿಸಿದೆ ಎಂದು ಹೇಳಿದ್ದಾರೆ.
ಶಾಸಕಿ ರೂಪಕಲಾಗೆ ಪಿಎಚ್ಡಿ ಪ್ರದಾನ
ಶನಿವಾರ ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಕಲಾ ಎಂ. ಶಶಿಧರ್ ಅವರು ಪಿ.ಎಚ್.ಡಿ. (ಡಾಕ್ಟರೆಟ್) ಪದವಿಯನ್ನು ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರಿಂದ ಸ್ವೀಕರಿಸಿದರು.


