ರಾಜ್ಯದ 13 ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ಆಲಿಕಲ್ಲು ಸಹಿತ ಬೇಸಿಗೆ ಮಳೆ ಸುರಿದಿದೆ. ಈ ಮಳೆಯು ಕೆಲವೆಡೆ ಜನರಿಗೆ ಬಿಸಿಲಿನಿಂದ રાહತ ನೀಡಿದರೆ, ಕೊಪ್ಪಳದಲ್ಲಿ ಸಿಡಿಲಿಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಕೆಲವು ಬೆಳೆಗಳಿಗೆ ವರದಾನವಾದರೆ, ಇನ್ನು ಕೆಲವು ಬೆಳೆಗಳಿಗೆ ಹಾನಿಯುಂಟುಮಾಡಿದೆ.
ಬೆಂಗಳೂರು (ಮಾ.17) ರಾಜ್ಯದ 13 ಜಿಲ್ಲೆಗಳಲ್ಲಿ ಬೇಸಿಗೆ ಮಳೆ ಭರ್ಜರಿಯಾಗಿಯೇ ಸುರಿದಿದೆ. ಈ ನಡುವೆ ಕೊಪ್ಪಳದಲ್ಲಿ ಸಿಡಿಲಿಗೆ ಬಾಲಕ ಬಲಿಯಾಗಿದ್ದಾನೆ. ಗುಡುಗು ಸಿಡಿಲಿನೊಂದಿಗೆ ಕೆಲವೆಡೆ ಆಲಿಕಲ್ಲು ಮಳೆ ಬಿದ್ದಿದ್ದು, ಹಾಸನದಲ್ಲಿ ಮಳೆ ಗಾಳಿಗೆ ಮರದ ರಂಬೆ ಕೊಂಬೆಗಳು ಬಿದ್ದಿವೆ.
ಚಾಮರಾಜನಗರ, ಮೈಸೂರು, ದಾವಣಗೆರೆಯ ಹರಿಹರದಲ್ಲಿ ವರ್ಷದ ಮೊದಲ ಮಳೆ ಆಯಿತು. ಚಾಮರಾಜನಗರದ ಹಲವೆಡೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಿಂದ ಬಿಸಿಲಿನ ತಾಪದಲ್ಲಿದ್ದ ಜನತೆ ಮೊದಲ ಮಳೆ ಕಂಡು ಉಲ್ಲಸಿತರಾದರು. ಗುಂಡ್ಲುಪೇಟೆ ತಾಲೂಕಿನ ಕೆಲವೆಡೆ ಸಿಡಿಲು-ಗುಡುಗು, ಅಲಿಕಲ್ಲು ಸಹಿತ ಮಳೆಯಾಗಿದೆ.
ಮೈಸೂರಿನ ಬೆಟ್ಟದಪುರದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾದರೆ ಪಿರಿಯಾಪಟ್ಟಣದಲ್ಲಿ ಸಿಡಿಲಿಗೆ ತೆಂಗಿನ ಮರ ಹೊತ್ತಿ ಉರಿಯಿತು. ದಾವಣಗೆರೆಯಲ್ಲಿ ವರ್ಷದ ಮೊದಲ ಮಳೆಯಲ್ಲೇ ಆಲಿಕಲ್ಲು ಸಹಿತ ಧಾರಾಕಾರ ಅರ್ಧ ಗಂಟೆ ಸುರಿಯಿತು. ಹರಿಹರದಲ್ಲಿ ಸಾಧಾರಣ ಮಳೆ ಆಯಿತು.
ಆಡು ಮೇಯಿಸಲು ತೆರಳಿದ್ದಾಗ ಕೊಪ್ಪಳದ ಯಲಬುರ್ಗಾ ತಾಲೂಕಿನಲ್ಲಿ ಸಿಡಿಲು ಬಡಿದು 8ನೇ ತರಗತಿಯ ಮಂಜುನಾಥ ಮುದೇಗೌಡ (14) ಮೃತಪಟ್ಟಿದ್ದಾನೆ. ಕಾರಟಗಿಯಲ್ಲಿ ಗುಡುಗು, ಮಿಂಚು ಸಿಡಿಲಿನ ಅಬ್ಬರದೊಂದಿಗೆ ಸುಮಾರು 20 ನಿಮಿಷ ಕಾಲ ಆಲಿಕಲ್ಲು ಮಳೆ ಸುರಿಯಿತು.
ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ 10 ನಿಮಿಷಗಳ ಕಾಲ ಮಳೆ ಸುರಿದು ಧರೆ ತಂಪಾಯಿತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರುಗಳಲ್ಲಿ ಉತ್ತಮ ಮಳೆಯಾಗಿದೆ.
ಹಾಸನ ಸೇರಿ ಆಲೂರು ತಾಲೂಕಿನ ಹಲವೆಡೆ ಆಲಿಕಲ್ಲು ಸಹಿತ ಭಾರೀ ಗುಡುಗು ಸಿಡಿಲಿನೊಂದಿಗೆ ಉತ್ತಮ ಮಳೆಯಾಗಿದೆ. ಸಂಜೆ 4ರ ಸುಮಾರು ಆರಂಭವಾದ ಮಳೆ ಒಂದು ಗಂಟೆ ಕಾಲ ಸುರಿದಿದೆ. ಕೆಲವೆಡೆ ಮರದ ಕೊಂಬೆಗಳು ಮುರಿದುಬಿದ್ದಿವೆ.
ಕೊಡಗು ಜಿಲ್ಲೆಯಲ್ಲಿ ಸಂಜೆ ಅಕಾಲಿಕ ಮಳೆ ತಂಪೆರೆಯಿತು. ಸಂಚಾರ ಅಸ್ತವ್ಯಸ್ತವಾಗಿತ್ತು. ಆದರೂ ಜನ ಖುಷಿಯಿಂದಲೆ ಮಳೆಯೊಂದಿಗೆ ಹೆಜ್ಜೆ ಹಾಕಿ ಮನೆ ಸೇರಿದ್ದಾರೆ. ಜಿಲ್ಲೆಯ ಶಿರಂಗಾಲ, ಹೆಬ್ಬಾಲೆ, ಬೇತ್ರಿ ಸೇರಿ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಹೊಲ ಮತ್ತು ಗದ್ದೆಗಳಿಗೆ ನೀರು ನುಗ್ಗುವಂತೆ ಮಳೆ ಸುರಿದಿದ್ದು, ಬಿಸಿಲಿನಿಂದ ಬಸವಳಿದಿದ್ದ ಇಳೆಗೆ ಚೈತನ್ಯ ನೀಡಿದೆ. ಕಾಫಿ ಮತ್ತು ಕರಿಮೆಣಸು ಬೆಳೆಗಾರರಿಗೆ ಈ ಮಳೆ ವರದಾನವಾಗಿ ಪರಿಣಮಿಸುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು, ಪುತ್ತೂರು, ಬಂಟ್ವಾಳ ಹಾಗೂ ಉಳ್ಳಾಲದ ಕಲವೆಡೆ ರಾತ್ರಿ ಗುಡುಗಿನೊಂದಿಗೆ ಸಾಧಾರಣ ಮಳೆಯಾಗಿದೆ. ಯಾದಗಿರಿ ಜಿಲ್ಲೆ ಹುಣಸಗಿಯಲ್ಲಿ ಸಿಡಿಲು ಬಡಿದು ಕೆಲವು ಮರಗಳು ಹೊತ್ತಿ ಉರಿದವು.
ರಾಯಚೂರು ಜಿಲ್ಲೆಯ ವಿವಿಧೆಡೆ 1 ಗಂಟೆ ಕಾಲ ಆಲಿಕಲ್ಲು ಮಳೆ ಸುರಿಯಿತು. ಇದರಿಂದ ಮಾವು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಕಲಬುರಗಿ ಜಿಲ್ಲೆ ಆಳಂದ ಸೇರಿ ಕೆಲವಡೆ ಮಳೆ ಜೋರಾಗಿ ಸುರಿಯಿತು.


