ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿಕೊಂಡು ಬಂದವರು. ಶೋಷಿತ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಡಬೇಕು ಎನ್ನುವ ಸಂವಿಧಾನದ ಆಶಯಗಳ ಕನಸುಗಾರ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ವಿಜಯಪುರ (ಜೂ.08): ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿಕೊಂಡು ಬಂದವರು. ಶೋಷಿತ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಡಬೇಕು ಎನ್ನುವ ಸಂವಿಧಾನದ ಆಶಯಗಳ ಕನಸುಗಾರ. ಬೇರೆ ಯಾರೂ ಅವರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜರುಗಿದ ಜಿಲ್ಲಾ ಕುರುಬ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಲೋಕಮಾತಾ ಅಹಲ್ಯಾಬಾಯಿ ಹೊಳ್ಕರ್ 301ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಹಲ್ಯಾಬಾಯಿ ಹೊಳ್ಕರ್ ಅವರನ್ನು ರಾಜಮಾತೆ ಎಂದು ಕರೆಯುತ್ತೇವೆ. ಅವರು ಸಾಮಾನ್ಯರಲ್ಲ ಅಪ್ರತಿಮ ಹೋರಾಟಗಾರ್ತಿ, ಶ್ರೇಷ್ಠ ಮಹಿಳೆ. ನಮ್ಮ ಸಮಾಜದ ಭವಿಷ್ಯ ಭದ್ರವಾಗಿರಬೇಕಾದರೆ, ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಬೇಕು.
ಯಾವುದೇ ಸಮಾಜ ಬೆಳೆಯಬೇಕಾದರೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಮೂರನ್ನು ಅವಶ್ಯವಾಗಿ ಮಾಡಬೇಕು. ಕಷ್ಟವಾದರೂ ಪರವಾಗಿಲ್ಲ, ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಆ ಮಕ್ಕಳು ಉನ್ನತ ಹುದ್ದೆ ಪಡೆದು ತನ್ನ ಕುಟುಂಬ ಜೊತೆಗೆ ಇಡೀ ಸಮಾಜವನ್ನೇ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.ಜಿಲ್ಲೆಯಲ್ಲಿ 2.5 ಲಕ್ಷ ಕುರುಬ ಸಮುದಾಯ ಇದ್ದರೂ ಒಬ್ಬರೇ ಒಬ್ಬರು ಶಾಸಕರಾಗದೆ ಇರುವುದು ದುರಂತ. ನಾವು ಜಾಗೃತರಗಿ, ಎಲ್ಲ ಕ್ಷೇತ್ರದಲ್ಲೂ ಬೆಳವಣಿಗೆ ಕಾಣಬೇಕು. ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಬೆಳೆದಾಗಲೇ ಸಾಧ್ಯ
ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಮಾತನಾಡಿ, ಹೆಣ್ಣುಮಕ್ಕಳಿಗೆ ಬಹಳಷ್ಟು ಜವಾಬ್ದಾರಿ ಇರುತ್ತೆ. ಡಾ.ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ ಅವರ ಪ್ರತಿಬಿಂಬವಾಗಿದ್ದೀರಿ. ಯಾವುದೇ ಸಮಾಜ ಮುಂದೆ ಸಾಗಬೇಕಾದರೆ ಆ ಸಮಾಜದ ಹೆಣ್ಮಕ್ಕಳು ಬೆಳೆದಾಗಲೇ ಸಾಧ್ಯ. ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಜಯಪುರದಲ್ಲಿ ರಾಜಮಾತೆ ಅಹಲ್ಯಾಬಾಯಿ ಹೊಳ್ಕರ್ ಅವರ ಪ್ರತಿಮೆ ನಿರ್ಮಿಸಿರುವುದು ಹೆಮ್ಮೆಯಾಗಿದೆ. ಯಾರಲ್ಲಿ ಮಾತೃ ಹೃದಯ ಇರುತ್ತದೆಯೋ ಅವರು ರಾಜಕೀಯದಲ್ಲಿ ಭವಿಷ್ಯ ಕಟ್ಟುಕೊಳ್ಳುತ್ತಾರೆ. ಡಾ.ಯತೀಂದ್ರ ಅವರಲ್ಲಿ ಆ ಗುಣ ಇದೆ ಎಂದರು.


