ಕೇಂದ್ರದ ವಿರುದ್ಧ ಕರ್ನಾಟಕ ಸೇನಾಪಡೆ ಆಕ್ರೋಶ| ಕೇಂದ್ರದ ನಡೆ ಖಂಡಿಸಿ ಕರ್ನಾಟಕ ಸೇನಾಪಡೆಯ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ| ಉಳಿಸಿ ಉಳಿಸಿ ಕನ್ನಡ ಉಳಿಸಿ, ಬೇಡ ಬೇಡ ಹಿಂದಿ ಬೇಡ, ಬೇಕೇ ಬೇಕು ಕನ್ನಡ ಬೇಕು ಎಂಬಿತ್ಯಾದಿ ಘೋಷಣೆ| 

ಚಾಮರಾಜನಗರ:(ಸೆ.19) ರಾಜ್ಯದ ಮೇಲೆ ಹಿಂದಿ ಭಾಷೆಯ ಬಲವಂತದ ಹೇರಿಕೆಯನ್ನು ಖಂಡಿಸಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಕಪ್ಪುಪಟ್ಟಿಧರಿಸಿ ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಪ್ರತಿಭಟನೆ ನಡೆಸಿದರು.

Add Asianetnews Kannada as a Preferred SourcegooglePreferred


ಬುಧವಾರ ನಗರದಲ್ಲಿ ಸೇನಾಪಡೆ ಕಾರ್ಯಕರ್ತರು ಕೆಲಕಾಲ ಪ್ರತಿಭಟನೆ ನಡೆಸಿ, ಕೇಂದ್ರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ಉಳಿಸಿ ಉಳಿಸಿ ಕನ್ನಡ ಉಳಿಸಿ, ಬೇಡ ಬೇಡ ಹಿಂದಿ ಬೇಡ, ಬೇಕೇ ಬೇಕು ಕನ್ನಡ ಬೇಕು ಎಂಬಿತ್ಯಾದಿ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಸೇನಾಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಕೇಂದ್ರದ ಭಾಷಾ ನೀತಿ ಹೆಸರಿನಡಿಯಲ್ಲಿ ಕರ್ನಾಟಕ ರಾಜ್ಯದ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡಲು ಹೊರಟಿರವುದು ಖಂಡನೀಯವಾದದ್ದು, ಕೂಡಲೇ ಹಿಂದಿ ಭಾಷೆಯನ್ನು ಹೇರಿಕೆಯನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಿಂದಿ ಭಾಷೆಯ ಹೇರಿಕೆ ಮಾಡುವ ಮೂಲಕ ಭಾರತ ದೇಶದ ಒಕ್ಕೂಟದ ವ್ಯವಸ್ಥೆಗೆ ಕೇಂದ್ರ ಸರ್ಕಾರ ಮಾಡಿದ ಅಗೌರವವಾಗಿದೆ. ರಾಜ್ಯದ ಮೇಲೆ ಹಿಂದಿ ಹೇರಿಕೆ ಮಾಡುವುದರಿಂದ ರಾಜ್ಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಇಲಾಖೆಗಳಲ್ಲಿ ನೌಕರಿ ಸಿಗುವುದಿಲ್ಲ. ಇದರಿಂದಾಗಿ ಕೇಂದ್ರ ಸರ್ಕಾರ ತಕ್ಷಣವೇ ಹಿಂದಿ ಭಾಷೆ ಹೇರಿಕೆಯನ್ನು ವಾಪಸ್‌ ಪಡೆಯಬೇಕು ಇಲ್ಲದಿದ್ದರೆ ನಾನಾ ಸಂಘ-ಸಂಸ್ಥೆಗಳೊಂದಿಗೆ ಕರ್ನಾಟಕ ಬಂದ್‌ ಮಾಡುವುದಾಗಿ ಎಚ್ಚರಿಸಿದರು.


ಪ್ರತಿಭಟನೆಯಲ್ಲಿ ಕಂಡಕ್ಟರ್‌ ಚಾ.ಸಿ.ಸೋಮನಾಯಕ, ನಿಜಧ್ವನಿ ಗೋವಿಂದರಾಜು, ಗು.ಪುರುಷೋತ್ತಮ, ಮಾರ್ಕೇಟ್‌ ಗಿರೀಶ್‌, ಅರುಣ್‌ಕುಮಾರ್‌ಗೌಡ, ಕೆ. ಎಂ. ನಾಗರಾಜು, ವೀರಭದ್ರ, ತಾಂಡವಮೂರ್ತಿ, ಎಂಡಿಆರ್‌ ಸ್ವಾಮಿ, ನಂಜುಂಡಸ್ವಾಮಿ, ಜಯರಾಮ ನಾಯಕ, ಚಾ.ರಾ.ಕುಮಾರ್‌, ನಾಗೇಶ್‌, ಹೆಗ್ಗೋಠಾರ ಯೋಗಾನಂದ, ಚಂದ್ರಕುಮಾರ್‌ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.