ಕನಕಪುರ ತಾಲೂಕಿನ ಸಾತನೂರು ಬಳಿ ಕಾಂಗ್ರೆಸ್ ಮುಖಂಡ ನಂಜೇಶ್‌ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ರಾಜಕೀಯ ಕಾರಣಗಳು ಹಾಗೂ ಜಮೀನು ವಿವಾದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು ದಕ್ಷಿಣ/ರಾಮನಗರ (ಜು.27): ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಸಮೀಪದ ಆರ್.ಕೆ. ಡಾಬಾ ಬಳಿ ಅಚ್ಚಲು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡನನ್ನು ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ತಲೆ ಹಾಗೂ ಮುಖದ ಭಾಗಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿದ್ದು, ಅತ್ಯಂತ ಕ್ರೂರತೆಗೆ ಈ ಘಟನೆ ಸಾಕ್ಷಿಯಾದಂತಿದೆ.

ಕಾಂಗ್ರೆಸ್ ಮುಖಂಡ ನಂಜೇಶ್ (45) ಮೃತ ವ್ಯಕ್ತಿ ಆಗಿದ್ದಾರೆ. ಹೊಂಗಾಣಿದೊಡ್ಡಿ ಗ್ರಾಮದ ನಿವಾಸಿಯಾಗಿದ್ದ ನಂಜೇಶ್, ಕೆಲವು ದಿನಗಳ ಹಿಂದೆಯೇ ತನ್ನ ಗ್ರಾಮದಲ್ಲಿನ ಜಮೀನಿನ ಸೈಟ್ ವಿವಾದಕ್ಕೆ ಸಂಬಂಧಪಟ್ಟಂತೆ ಸ್ಥಳೀಯರೊಂದಿಗೆ ಮಾತಿನ ಚಕಮಕಿ ಮಾಡಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಒಂದು ಸುತ್ತಿನ ಜಗಳವೂ ನಡೆದಿತ್ತು. ಈ ಹಿನ್ನೆಲೆಯೇ ಹಳೆಯ ಘಟನೆಯ ಬಗ್ಗೆ ದ್ವೇಷವನ್ನು ಸಾಧಿಸುತ್ತಿದ್ದ ವಿರೋಧಿಗಳು ಕಾಂಗ್ರೆಸ್ ಮುಖಂಡ ನಂಜೇಶ್‌ನನ್ನು ಕೊಲೆ ಮಾಡುವುದಕ್ಕೆ ಸುಪಾರಿ ಕೊಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಸಾತನೂರಿಗೆ ಬಂದ ಈ ಅಪರಿಚಿತರ ಗ್ಯಾಂಗ್‌ ಮಾರಕಾಸ್ತ್ರಗಳಿಂದ ನಂಜೇಶನ ಮೇಲೆ ಮನಸೋ ಇಚ್ಛೆಯಾಗಿ ಮುಖ, ಮೂತಿಯನ್ನೂ ನೋಡದೇ ಹಲ್ಲೆ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.

ಸದ್ಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನಿಂದ ಬಂದಿರುವ ಕೆಲ ಯುವಕರು ಈ ಕೃತ್ಯಕ್ಕೆ ಕೈಜೋಡಿಸಿರಬಹುದೆಂದು ಅನುಮಾನ ವ್ಯಕ್ತವಾಗಿದೆ. ಹಲ್ಲೆಗೊಳಗಾದ ನಂಜೇಶ್ ಅವರನ್ನು ತಕ್ಷಣವೇ ಕನಕಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆಯ ಬಳಿಕ ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಲಾಗಿದೆ.

ಈ ಘಟನೆಯ ಭೀಕರತೆಯನ್ನು ಕಂಡು ಸ್ಥಳೀಯ ಜನರಲ್ಲಿ ಭೀತಿಯ ವಾತಾವರಣ ಮನೆ ಮಾಡಿದೆ. ಡಾಬಾದಲ್ಲಿದ್ದ ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ಮಾಡಿ, ಬೇಡಿಕೊಂಡರೂ ಲೆಕ್ಕಿಸದೇ, ತಪ್ಪಿಸಿಕೊಳ್ಳಲು ಯತ್ನಿಸಿದರೇ ಬಿಡದೇ ಬೆನ್ನಟ್ಟಿ ಹೋಗೆ ಕೊಚ್ಚಿ ಕೊಲೆ ಮಾಡಿರುವ ಘಟನೆಯನ್ನು ನೋಡಿದವರು ದಿಗ್ಭ್ರಮೆಗೊಂಡಿದ್ದಾರೆ, ಒಬ್ಬ ವ್ಯಕ್ತಿಯ ಜೀವಕ್ಕೆ ಬೆಲೆಯೇ ಇಲ್ಲವೇ ಎಂದು ಮಮ್ಮಲ ಮರುಗಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ.