Asianet Suvarna News Asianet Suvarna News

ಶಿವಮೊಗ್ಗ: ಕರುನಾಡ 7 ಅದ್ಭುತಗಳಲ್ಲಿ ಜೋಗಕ್ಕೆ ಸ್ಥಾನ

ಜಾಗತಿಕ ಹೆಗ್ಗುರುತುಗಳಾಗಿ ‘ಪ್ರಪಂಚದ 7 ಅದ್ಭುತಗಳು’ ಇರುವಂತೆಯೇ ಇದೀಗ ಕನ್ನಡನಾಡಿನ ಹೆಗ್ಗುರುತುಗಳಾಗಿ ‘ಕರ್ನಾಟಕದ ಏಳು ಅದ್ಭುತ’ ತಾಣಗಳ ಘೋಷಣೆಯಾಗಿದೆ. ಇದರಲ್ಲಿ ಶಿವಮೊಗ್ಗದ ಜಗತ್ೊ್ರಸಿದ್ಧ ಜೋಗ ಜಲಪಾತವೂ ಸೇರಿದೆ.

Joga Pals is one of the seven wonders of Karnataka rav
Author
First Published Feb 26, 2023, 4:38 AM IST

ಶಿವಮೊಗ್ಗ (ಫೆ.25) : ಜಾಗತಿಕ ಹೆಗ್ಗುರುತುಗಳಾಗಿ ‘ಪ್ರಪಂಚದ 7 ಅದ್ಭುತಗಳು’ ಇರುವಂತೆಯೇ ಇದೀಗ ಕನ್ನಡನಾಡಿನ ಹೆಗ್ಗುರುತುಗಳಾಗಿ ‘ಕರ್ನಾಟಕದ ಏಳು ಅದ್ಭುತ’ ತಾಣಗಳ ಘೋಷಣೆಯಾಗಿದೆ. ಇದರಲ್ಲಿ ಶಿವಮೊಗ್ಗದ ಜಗತ್ೊ್ರಸಿದ್ಧ ಜೋಗ ಜಲಪಾತವೂ ಸೇರಿದೆ.

ಬೆಂಗಳೂರಿನ ಪಂಚತಾರಾ ಹೋಟೆಲ್‌ವೊಂದರಲ್ಲಿ ಶನಿವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ‘ಕರ್ನಾಟಕದ ಏಳು ಅದ್ಭುತ’ಗಳ(Seven wonders of Karnataka)ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಪ್ರಕಟಿಸಿದರು. ಈ ಏಳು ಅದ್ಭುತಗಳು ಇರುವ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಅವ​ರಿಗೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಲಾಯಿತು. ಶಿವಮೊಗ್ಗ ಜಿಲ್ಲಾಧಿಕಾರಿ ಪರವಾಗಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಪ್ರಮಾ​ಣ​ಪ​ತ್ರ ಸ್ವೀಕರಿಸಿದರು.

7 Wonders Of Karnataka: 7 ಅದ್ಭುತಗಳು ಅಭಿಯಾನಕ್ಕೆ ‘ಗಾಂಧೀಜಿ’ ಸಾಥ್‌!

ಕರ್ನಾಟಕದ ಏಳು ಅದ್ಭುತಗಳು:

1. ಹಿರೇಬೆಣಕಲ್‌ ಶಿಲಾಸಮಾಧಿಗಳು:

ಕ್ರಿ.ಪೂ.800 ರಿಂದ 200 ರವರೆಗಿನ ಕಾಲದ್ದು ಎನ್ನಲಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ಪ್ರಾಗೈತಿಹಾಸಿಕ ತಾಣವನ್ನು ‘ಬೃಹತ್‌ ಶಿಲಾಯುಗದ(Megalithic Burial) ಅದ್ಭುತ’ ಎಂದು ಘೋಷಿಸಲಾಗಿದೆ.

2. ಹಂಪಿ:

14ರಿಂದ 16ನೇ ಶತಮಾನದ ನಡುವೆ ನಿರ್ಮಾಣಗೊಂಡ ಭವ್ಯ ವಿಜಯನಗರ ಸಾಮ್ರಾಜ್ಯ(Vijayanagara Empire)ದ ವೈಭವವನ್ನು ಸಾರುವ ಈಗಿನ ವಿಜಯನಗರ ಜಿಲ್ಲೆಯ ‘ಹಂಪಿ’(Hampi)ಯನ್ನು ‘ಪುರಾತತ್ವ ಅದ್ಭುತ’ ಎಂದು ಘೋಷಿಸಲಾಗಿದೆ.

3. ಗೊಮ್ಮಟೇಶ್ವರ:

ಈಗಿನ ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಾಗಿರಿಯ ನೆತ್ತಿಯಲ್ಲಿ 10ನೇ ಶತಮಾನದಲ್ಲಿ ಸ್ಥಾಪನೆಯಾದ 57 ಅಡಿಯ ಭವ್ಯ ಗೊಮ್ಮಟೇಶ್ವರ ಪ್ರತಿಮೆ(Statue of Gommateshwara)ಯನ್ನು ‘ತಾತ್ವಿಕ ಅದ್ಭುತ’ವೆಂದು ಘೋಷಿಸಲಾಗಿದೆ.

4. ಗೋಲಗುಮ್ಮಟ:

17ನೇ ಶತಮಾನದಲ್ಲಿ ಆಗಿನ ಬಿಜಾಪುರ (ಹಾಲಿ ವಿಜಯಪುರ) ಸುಲ್ತಾನ ಮೊಹಮ್ಮದ್‌ ಆದಿಲ್‌ ಶಾಹ್‌(Sultan Mohammad Adil Shah) ನಿರ್ಮಿಸಿದ ಬೃಹತ್‌ ಗೋಲಗುಮ್ಮಟವು(Gol Gumbaz) ‘ವಾಸ್ತು ವಿಜ್ಞಾನ ಅದ್ಭುತ’ವೆಂಬ ಗೌರವಕ್ಕೆ ಪಾತ್ರವಾಗಿದೆ.

5. ಮೈಸೂರು ಅರಮನೆ:

19-20ನೇ ಶತಮಾನದಲ್ಲಿ ಒಡೆಯರ್‌ ರಾಜವಂಶಸ್ಥರಿಂದ ನಿರ್ಮಾಣಗೊಂಡ ಮೈಸೂರಿನ ಜಗದ್ವಿಖ್ಯಾತ ಅಂಬಾ ವಿಲಾಸ ಅರಮನೆ(Amba Vilasa Palace)ಯನ್ನು ‘ರಾಜಪರಂಪರಾ ಅದ್ಭುತ’ ಎಂದು ಘೋಷಿಸಲಾಗಿದೆ.

6. ಜೋಗ ಜಲಪಾತ:

ಭಾರತದಲ್ಲೇ ಅತಿ ಸುಂದರ ಎನಿಸಿರುವ, 830 ಅಡಿ ಎತ್ತರದಿಂದ ಧುಮುಕುವ ಶಿವಮೊಗ್ಗ ಜಿಲ್ಲೆಯ ವಿಶ್ವಪ್ರಸಿದ್ಧ ಜೋಗ ಜಲಪಾತವನ್ನು ‘ನೈಸರ್ಗಿಕ ಅದ್ಭುತ-ನೆಲ’ ಎಂದು ಘೋಷಿಸಲಾಗಿದೆ.

7. ನೇತ್ರಾಣಿ ದ್ವೀಪ:

ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರ(Murudeshwar) ಬಳಿಯ ಅರಬ್ಬಿ ಸಮುದ್ರದ ನಡುವೆ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿರುವ ನೇತ್ರಾಣಿ ದ್ವೀಪ(Netrani Island)ವನ್ನು ‘ನೈಸರ್ಗಿಕ ಅದ್ಭುತ-ಜಲ’ ಎಂದು ಘೋಷಿಸಲಾಗಿದೆ.

ಏಳು ಅದ್ಭುತಗಳ ಉದ್ಘೋಷಣೆ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ‘ಕರ್ನಾಟಕದ ಏಳು ಅದ್ಭುತಗಳು’ ಹೊಸ ಪ್ರವಾಸೋದ್ಯಮ ಮಾದರಿಗಳ ಸೃಷ್ಟಿಗೆ ದಿಕ್ಸೂಚಿಯಾಗಲಿವೆ. ಈ ಏಳು ಅಧಿಕೃತ ಅದ್ಭುತಗಳ ಪಟ್ಟಿಯಲ್ಲಿ ಒಂದಾಗಿರುವ ಹಿರೇಬಣಕಲ್ಲು ಅಭಿವೃದ್ಧಿಗೆ ಸಮಗ್ರ ವರದಿ ಸಿದ್ಧಪಡಿಸಲು ಈಗಾಗಲೇ ಸೂಚಿಸಿದ್ದೇನೆ. ಜೊತೆಗೆ ಏಳೂ ಅದ್ಭುತಗಳ ಸ್ಥಳದಲ್ಲಿ ಆಗಬೇಕಿರುವ ಅಭಿವೃದ್ಧಿಗಳ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಕರ್ನಾಟಕದ ಪ್ರವಾಸೋದ್ಯಮ ಸಚಿವ(Tourism Minister of Karnataka) ಆನಂದ್‌ ಸಿಂಗ್‌(Anand singh), ‘ಕರ್ನಾಟಕದ 7 ಅದ್ಭುತಗಳು’ ಅಭಿಯಾನದ ರಾಯಭಾರಿ, ಖ್ಯಾತನಟ ರಮೇಶ್‌ ಅರವಿಂದ್‌(Ramesh aravind), ಆಯ್ಕೆ ತೀರ್ಪುಗಾರರಾದ ಸ್ಟಾರ್ಟಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷರೂ, ಸರಣಿ ಆತಿಥ್ಯ ಉದ್ಯಮಿ ಪ್ರಶಾಂತ್‌ ಪ್ರಕಾಶ್‌, 3 ಬಾರಿ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತಗಾರ, ವಿಶ್ವಸಂಸ್ಥೆಯ ಗುಡ್‌ವಿಲ್‌ ರಾಯಭಾರಿ, ಪರಿಸರವಾದಿ ರಿಕ್ಕಿ ಕೇಜ್‌(Ricky Cage), ವೈಲ್ಡ್‌ ಕರ್ನಾಟಕ, ಗಂಧದ ಗುಡಿ ಚಿತ್ರಗಳ ನಿರ್ದೇಶಕ, ನಿಸರ್ಗ ಛಾಯಾಚಿತ್ರಗಾರ ಅಮೋಘವರ್ಷ(Amoghavarsha), ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರೂ ಆಗಿರುವ ಖ್ಯಾತ ಪುರಾತತ್ವ ಹಾಗೂ ಇತಿಹಾಸ ತಜ್ಞ ಡಾ ದೇವರಕೊಂಡ ರೆಡ್ಡಿ, ವಿಶ್ವವಿಖ್ಯಾತ ವೇಗದ ಚಿತ್ರ ಕಲಾವಿದ ಹಾಗೂ ಯುವ ವಿಶ್ವ ಪ್ರವಾಸಿಗ ವಿಲಾಸ್‌ ನಾಯಕ್‌, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಜಿ.ಜಗದೀಶ್‌, ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌(Asianet Suvarna News) ಮಾಧ್ಯಮ ಸಂಸ್ಥೆಗಳ ಪ್ರಧಾನ ಸಂಪಾದಕ ರವಿ ಹೆಗಡೆ ಉಪಸ್ಥಿತರಿದ್ದರು.

ಕರ್ನಾಟಕದ 7 ಅದ್ಭುತಗಳು ಅಭಿಯಾನಕ್ಕೆ ನಟ ರಮೇಶ್‌ ಅರವಿಂದ್ ಮೆಚ್ಚುಗೆ

 

ವಿಶ್ವ ಖ್ಯಾತಿ​ವೆತ್ತ ಜೋಗ ಜಲಪಾತ:

ಏಳು ಅದ್ಭುತಗಳಲ್ಲಿ ಆರನೇ ಸ್ಥಾನದಲ್ಲಿರುವ ಭಾರತದ ಅತ್ಯಂತ ಸುಂದರ ಹಾಗೂ ಬೃಹತ್‌ ಜಲಪಾತಗಳಲ್ಲಿ ಒಂದಾದ ಜೋಗ ಜಲಪಾತ(Joga Falls) ವಿಶ್ವಾದ್ಯಂತ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. 830 ಅಡಿ ಎತ್ತರದಿಂದ ಧುಮುಕುವ ಜೋಗ ಜಲಪಾತ ಮಳೆಗಾಲದಲ್ಲಂತೂ ನೀರಿನಿಂದ ತುಂಬಿ ರಾಜಗಾಂಭೀರ್ಯವನ್ನು ಪಡೆಯುತ್ತದೆ. ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಇದು ಆಯ್ಕೆಯಾಗಲು ಇವಿಷ್ಟೇ ಕಾರಣವಲ್ಲ. ಜೀವವೈವಿಧ್ಯಗಳಿಂದ ಶ್ರೀಮಂತವಾಗಿರುವ ಪಶ್ಚಿಮಘಟ್ಟಗಳು ಭೂಮಿಯ ಅತಿ ಅಪರೂಪದ ಕಾಡುಗಳಲ್ಲಿ ಒಂದು. ಅಂತಹ ಅದ್ಭುತ ನಿಸರ್ಗದಲ್ಲಿರುವ ಜೋಗದ ಪರಿಸರಲ್ಲಿ ಕರ್ನಾಟಕದ ಅಪರೂಪದ ಸಸ್ಯ ಹಾಗೂ ಪ್ರಾಣಿಸಂಕುಲಗಳೂ ಇವೆ. ಶೋಲಾ ಕಾಡುಗಳಿಂದ ಹಿಡಿದು ದಟ್ಟನಿತ್ಯಹರಿದ್ವರ್ಣ ಕಾಡುಗಳವರೆಗೆ ಕರ್ನಾಟಕದಲ್ಲಿ 6 ವೈವಿಧ್ಯ ಕಾಡುಗಳಿವೆ. ನಾಗರಹೊಳೆ, ದಾಂಡೇಲಿಯಂಥ ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ. ಕುದುರೆಮುಖ, ಕೊಡಗು, ಕೊಡಚಾದ್ರಿಯಂಥ ಹಸಿರು ಗಿರಿಧಾಮಗಳಿವೆ. ಶರಾವತಿಯಲ್ಲದೆ ಕಾವೇರಿ, ಕೃಷ್ಣೆ, ತುಂಗಭದ್ರಾದಂಥ ಅನೇಕ ಹಿರಿಯ-ಕಿರಿಯ ನದಿಗಳಿವೆ. ಹೆಬ್ಬೆ, ಗೋಕಾಕ್‌ ಫಾಲ್ಸ್‌, ಗಗನಚುಕ್ಕಿ, ಭರಚುಕ್ಕಿ, ಉಂಚಳ್ಳಿಯಂಥ ಹಲವಾರು ಸುಂದರ ಜಲಪಾತಗಳಿವೆ. ಅಲ್ಲಲ್ಲಿ ಕಿರು ಜಲಪಾತಗಳು ಕಣ್ಮನ ಸೆಳೆಯುತ್ತದೆ. ಇದು ಕರ್ನಾಟಕದ ನೆಲದ ಸೌಂದರ್ಯ ಮತ್ತು ಮಹತ್ವಗಳ ಪ್ರಾತಿನಿಧಿಕ ಅದ್ಭುತವಾಗಿ ಮೈತಳೆದಿದೆ. ನಿಸರ್ಗದ ಕೌತುಕವಾಗಿ ನಮ್ಮನ್ನು ಆಕರ್ಷಿಸುತ್ತದೆ. ಜೋಗ ಜಲಪಾತದ ಆರ್ಭಟ, ಬೀಭತ್ಸತೆ, ರುದ್ರರಮಣೀಯತೆ, ಉಕ್ಕಿ ಹರಿಯುವ ಸೌಂದರ್ಯ, ಕಣ್ಮನ ತುಂಬಿಕೊಳ್ಳುವ ನಿಸರ್ಗ ಚಿತ್ರ, ದೃಶ್ಯ ಕಾವ್ಯ ಎಲ್ಲವೂ ಏಕ ಕಾಲಕ್ಕೆ ಇಲ್ಲಿ ಜೊತೆಯಾಗುತ್ತದೆ.

Follow Us:
Download App:
  • android
  • ios